ಚಾಮರಾಜನಗರ: ಜಿಲ್ಲೆಯ ಗುಂಡ್ಲುಪೇಟೆ ತಾಲ್ಲೂಕಿನ ಹೊನ್ನೇಗೌಡನಹಳ್ಳಿ- ಗೋಪಾಲಪುರ ಮಾರ್ಗದ ರಸ್ತೆಯಲ್ಲಿ ರೈತರು ಹುರುಳಿ ಒಣ ಬಳ್ಳಿಯನ್ನು ಒಕ್ಕಣೆಗೆ ಹಾಕಿದ್ದರಿಂದ ಕಾರಿಗೆ ಬೆಂಕಿ ತಗುಲಿ ಲಕ್ಷಾಂತರ ರೂ. ಮೌಲ್ಯದ ಕಾರು ಸುಟ್ಟು ಭಸ್ಮವಾಗಿರುವ ಘಟನೆ ನಡೆದಿದೆ.
ಕೇರಳ ಮೂಲದ ವ್ಯಕ್ತಿಗಳು ಕಾರಿನಲ್ಲಿ ತೆರಳುತಿದ್ದ ಸಂದರ್ಭದಲ್ಲಿ ರಸ್ತೆಯಲ್ಲಿ ಹಾಕಿದ್ದ ಹುರುಳಿ ಒಣ ಬಳ್ಳಿ ಕಾರಿನ ಇಂಜಿನ್ ಗೆ ತಾಗಿದೆ. ಪರಿಣಾಮ ಬೆಂಕಿ ಹೊತ್ತಿಕೊಂಡಿದೆ. ಕಾರಿನಲ್ಲಿ ಐವರು ಕೇರಳ ಮೂಲದವರಿದ್ದು, ಯಾರಿಗೂ ಪ್ರಾಣಾಪಾಯವಾಗಿಲ್ಲ. ಕಾರಿಗೆ ಬೆಂಕಿ ತಗಲುತ್ತಿದ್ದಂತೆ ಕಾರಿನಿಂದ ಐವರು ಇಳಿದು ಪಾರಾಗಿದ್ದಾರೆ. ಗುಂಡ್ಲುಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಗ್ರಾಮೀಣ ಭಾಗದ ರಸ್ತೆಗಳಲ್ಲಿ ಹುರುಳಿ ಒಕ್ಕಣೆಯಿಂದ ವಾಹನಗಳಲ್ಲಿ ಸಂಚರಿಸುವುದೇ ಕಷ್ಟವಾಗಿದೆ. ಈ ಹಿಂದೆಯೂ ಕಾರು ಬೆಂಕಿಗೆ ಆಹುತಿಯಾಗಿದ್ದ ಘಟನೆಗಳು ನಡೆದಿವೆ. ಪೊಲೀಸ್ ಇಲಾಖೆ ಹಾಗೂ ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳು ವಾಹನ ಸವಾರರಿಗೆ ತೊಂದರೆಯಾಗದಂತೆ ಕ್ರಮ ಕೈಗೊಳ್ಳಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.