ಚಾಮರಾಜನಗರ: ರಾಜ್ಯದಲ್ಲಿ ಓಮಿಕ್ರಾನ್ ಹೆಚ್ಚುತ್ತಿರುವ ಹಿನ್ನಲೆಯಲ್ಲಿ ಕೇರಳ ಮತ್ತು ತಮಿಳು ನಾಡಿನ ಗಡಿಯನ್ನು ಹಂಚಿಕೊಂಡಿರುವ ಚಾಮರಾಜನಗರದಲ್ಲಿ ಎಚ್ಚರಿಕೆಯನ್ನು ವಹಿಸಲಾಗಿದ್ದು, ತಮಿಳುನಾಡು ಮತ್ತು ಕೇರಳದಿಂದ ಬರುವ ವಾಹನಗಳನ್ನು ಚೆಕ್ ಪೋಸ್ಟ್ ಗಳಲ್ಲಿ ತಡೆದು ತೀವ್ರ ತಪಾಸಣೆ ನಡೆಸಲಾಗುತ್ತಿದೆ.
ಚಾಮರಾಜನಗರ ಜಿಲ್ಲೆಯ ಬಂಡೀಪುರ ರಾಷ್ಟ್ರೀಯ ಉದ್ಯಾನವನ ಹಾಗೂ ಹುಲಿ ಸಂರಕ್ಷಿತ ಪ್ರದೇಶದ ಮೂಲೆ ಹೊಳೆ ಚೆಕ್ ಪೋಸ್ಟ್ ನಲ್ಲಿ ಕಠಿಣ ತಪಾಸಣೆಯನ್ನು ನಡೆಸುತ್ತಿರುವ ಆರೋಗ್ಯ ಇಲಾಖೆಯ ಸಿಬ್ಬಂದಿ ಹಗಲಿರುಳು ಶ್ರಮಿಸುತ್ತಿದ್ದು, ಕೇರಳದಿಂದ ಬರುವ ಎಲ್ಲ ವಾಹನಗಳನ್ನು ಪೊಲೀಸ್ ಇಲಾಖೆಯ ಸಿಬ್ಬಂದಿಗಳ ಸಹಕಾರದೊಂದಿಗೆ ತಪಾಸಣೆ ಚುರುಕುಗೊಳಿಸಿದ್ದಾರೆ.
ತರಕಾರಿ ಹಾಗೂ ಇನ್ನಿತರ ಸರಕು ಸಾಗಾಣಿಕೆ ವಾಹನಗಳ ಚಾಲಕರು ಕಡ್ಡಾಯವಾಗಿ 72 ಗಂಟೆಯ ಮುನ್ನಾ ಆರ್ ಟಿ ಪಿ ಸಿ ಆರ್ ನೆಗಟಿವ್ ರಿಪೋರ್ಟ್ ಹೊಂದಿರಬೇಕು ಹಾಗೂ ಎರಡು ಡೋಸ್ ಲಸಿಕೆ ಹಾಕಿರಬೇಕು. ಇಲ್ಲದಿದ್ದರೆ ಕೇರಳದಿಂದ ಕರ್ನಾಟಕದೊಳಗೆ ಬರುವಂತಿಲ್ಲ ಎಂದು ತಪಾಸಣಾ ಸಿಬ್ಬಂದಿ ಕಟ್ಟಪ್ಪಣೆ ಮಾಡುತ್ತಿದ್ದಾರೆ. ಒಟ್ಟಾರೆ ಚಾಮರಾಜನಗರದಲ್ಲಿ ಕಠಿಣ ತಪಾಸಣೆ ಮಾಡುತ್ತಿರುವುದರಿಂದ ಹೊರಗಿನಿಂದ ಬರುವವರಿಂದ ಸೋಂಕು ಬರಬಹುದು ಎಂಬ ಜನರ ಆತಂಕ ದೂರವಾದಂತಾಗಿದೆ.