ಚಾಮರಾಜನಗರ: ಕೇರಳ – ತಮಿಳುನಾಡಿನ ಗಡಿ ನೆಲದಲ್ಲಿದ್ದರೂ ಕನ್ನಡತನವನ್ನು ಬಿಟ್ಟುಕೊಡದೆ ತಮ್ಮ ಹೃದಯದ ಭಾಷೆಯಾಗಿ ಜೀವಂತವಾಗಿಟ್ಟುಕೊಂಡಿರುವ ಇಂತಹ ಗಡಿಭಾಗಗಳಲ್ಲಿ ಕನ್ನಡ ಸಾಹಿತ್ಯ ಸಮ್ಮೇಳನಗಳು ನಡೆಯಬೇಕು ಎಂದು ಸರ್ಕಾರಿ ಮಹಿಳಾ ಕಾಲೇಜಿನ ಸಹಪ್ರಾಧ್ಯಾಪಕ ಡಾ. ನಂಜುಂಡಸ್ವಾಮಿ ಹರದನಹಳ್ಳಿ ಅಭಿಪ್ರಾಯಪಟ್ಟರು.
ತಾಲೂಕಿನ ಯರಗನಹಳ್ಳಿ ಸರ್ಕಾರಿ ಪ್ರೌಢಶಾಲೆಯ ಆವರಣದಲ್ಲಿ ಬೆಂಗಳೂರಿನ ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರ ರಂಗ ವಾಹಿನಿ (ರಿ) ಚಾಮರಾಜನಗರ ಸಹಯೋಗದಲ್ಲಿಗಡಿ ಸಾಂಸ್ಕೃತಿಕ ಉತ್ಸವ ಅಂಗವಾಗಿ ನಡೆದ ವಿಚಾರ ಸಂಕಿರಣದಲ್ಲಿ ಗಡಿನಾಡಿನ ಸಮಸ್ಯೆ ಮತ್ತು ಪರಿಹಾರ ವಿಚಾರ ಕುರಿತು ಮಾತನಾಡಿ, ಗಡಿನಾಡಿನ ಕನ್ನಡಿಗರು ಇಂದಿಗೂ ಅನೇಕ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಆಡಳಿತ, ಶಿಕ್ಷಣ, ಆರೋಗ್ಯ, ಸಂಸ್ಕೃತಿಗೆ ಸಂಬಂಧಿಸಿದ ವಿಷಯಗಳಲ್ಲಿ ಸೌಹಾರ್ದಯುತವಾಗಿ ಚರ್ಚಿಸಿ ಆಯಾ ರಾಜ್ಯದ ಭಾಷಾ ಅಲ್ಪಸಂಖ್ಯಾತರಿಗೆ ಸಿಗುವ ಸಮಾನ ಸೌಲಭ್ಯ ಗಳನ್ನು ನೀಡಲು ಸರ್ಕಾರಗಳು ಮುಂದಾಗಬೇಕು ಎಂದರು.
ತೆರಕಣಾಂಬಿ ಸರ್ಕಾರಿ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಸಿ. ಲಿಂಗಯ್ಯ ಅವರು ಗಡಿನಾಡಿನಲ್ಲಿ ಸಾಮಾಜಿಕ ಸಾಮರಸ್ಯ ಎಂಬ ವಿಷಯದ ಬಗ್ಗೆ ವಿಚಾರ ಮಂಡನೆ ಮಾಡಿ, ಸಾಮಾಜಿಕ ಸಾಮರಸ್ಯಕ್ಕೆ ಬುನಾದಿ ಹಾಕಿದವರು ಬಸವಣ್ಣನವರು ಆ ಕಾರಣಕ್ಕೆ ಗಡಿನಾಡಿನಲ್ಲಿ ಕನ್ನಡಿಗರು ಸಾಮಾಜಿಕ ಸಾಮರಸ್ಯವನ್ನು ರೂಡಿಸಿಕೊಂಡಿದ್ದಾರೆ. ಈ ಭಾಗದ ಗಡಿ ಕನ್ನಡಿಗರು ಮಲೆಮಾದೇಶ್ವರ ಮಂಟೇಸ್ವಾಮಿಯ ಪರಂಪರೆಯನ್ನು ಅಪ್ಪಿಕೊಂಡಿದ್ದಾರೆ ಎಂದರು.
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಕರ್ನಾಟಕ ಸಾಹಿತ್ಯ ಅಕಾಡೆಮಿ ಮಾಜಿ ಸದಸ್ಯರಾದ ಮಹೇಶ್ ಹರವೆ ಮಾತನಾಡಿ, ಕನ್ನಡವನ್ನು ಕೇವಲ ಅಭಿಮಾನದ ಪ್ರಶ್ನೆಯನ್ನಾಗಿ ನೋಡದೆ ಅನ್ನದ ಪ್ರಶ್ನೆಯಾಗಿ ಪರಿಭಾವಿಸಬೇಕು. ಕನ್ನಡದ ಮೂಲಕ ಅನ್ನ ಸಿಗುತ್ತದೆ ಎಂದಾದರೆ ಅಭಿಮಾನ ತಾನಾಗಿಯೇ ಬೆಳೆಯುತ್ತದೆ. ಈ ನಿಟ್ಟಿನಲ್ಲಿ ಗಡಿಭಾಗಗಳಲ್ಲಿ ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರವು ಗಡಿ ಸಾಂಸ್ಕೃತಿಕ ಉತ್ಸವ ಕಾರ್ಯಕ್ರಮಗಳನ್ನು ನಡೆಸುತ್ತಿರುವುದು ಪ್ರಶಂಸನೀಯ ಎಂದರು.
ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಸಾಹಿತಿ ಮಹದೇವ ಶಂಕನಪುರ, ರಂಗ ವಾಹಿನಿ(ರಿ) ಸಂಸ್ಥೆ ಅಧ್ಯಕ್ಷ ಸಿಎಂ ನರಸಿಂಹಮೂರ್ತಿ, ಸರ್ಕಾರಿ ಪ್ರೌಢಶಾಲೆ ಶಿಕ್ಷಕ ಶೇಖರಯ್ಯ ಉಪಸ್ಥಿತರಿದ್ದರು.