ನಂಜನಗೂಡು: ಬಸವ ಜಯಂತಿಯನ್ನು ಅದ್ಧೂರಿಯಾಗಿ ಸಡಗರ ಸಂಭ್ರಮದಿಂದ ಆಚರಿಸಲಾಯಿತು. ನಂಜನಗೂಡು ನಗರದ ದೇವಿರಮ್ಮನಹಳ್ಳಿ ಗೇಟ್ ನಲ್ಲಿ ಬೆಳ್ಳಿ ರಥದಲ್ಲಿ ಬಸವಣ್ಣನವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸುವ ಮೂಲಕ ಮೆರವಣಿಗೆಗೆ ಬಸವ ಬಳಗದ ಒಕ್ಕೂಟದ ಪದಾಧಿಕಾರಿಗಳು ಚಾಲನೆ ನೀಡಿದರು.
ನಗರದ ರಾಷ್ಟ್ರಪತಿ ರಸ್ತೆ, ಮಹಾತ್ಮ ಗಾಂಧಿ ರಸ್ತೆ, ಹುಲ್ಲಹಳ್ಳಿ ವೃತ್ತ , ಮೈಸೂರು ಊಟಿ ರಸ್ತೆಯ ಪ್ರಮುಖ ರಸ್ತೆಗಳಲ್ಲಿ ಮೆರವಣಿಗೆ ಮಾಡಲಾಯಿತು. ಮೆರವಣಿಗೆಯಲ್ಲಿ ವೀರಗಾಸೆ, ಕರಡಿ ಮಜಲು, ನಂದಿಕೋಲ ಕುಣಿತ ಹಾಗೂ ವಿವಿಧ ವಾದ್ಯ ಮೇಳಗಳು ಭಾಗವಹಿಸಿ ಮೆರುಗು ತುಂಬಿದವು. ಶರಣರ ರೂಪಕಗಳನ್ನೊಳಗೊಂಡ ಸ್ತಬ್ಧಚಿತ್ರ ಮೆರವಣಿಗೆ ಗಮನ ಸೆಳೆಯಿತು. ಬಸವ ಜಯ ಘೋಷ, ವಚನಗಳ ಘೋಷಣೆಗಳು, ಭಜನೆಯ ಗೀತೆಗಳು ಮೊಳಗಿದವು.
ಅನುರಾಗ ಮಕ್ಕಳ ಮನೆಯ ಅಧ್ಯಕ್ಷ ಸೋಮಶೇಖರ್ ಮೂರ್ತಿ ಮಾತನಾಡಿ,ಚುನಾವಣೆಯ ನೀತಿ ಸಂಹಿತೆ ಜಾರಿಯಲ್ಲಿ ಇರುವುದರಿಂದ ಸರಳವಾಗಿ ಬಸವ ಜಯಂತಿಯನ್ನು ಆಚರಣೆ ಮಾಡುತ್ತಿದ್ದೇವೆ. ನಂಜನಗೂಡಿನ 20 ಸಂಘಟನೆಗಳಿಂದ ಬಸವ ಬಳಗ ಒಕ್ಕೂಟದಿಂದ ಆಚರಣೆ ಮಾಡುತ್ತಿದ್ದೇವೆ. ಮಹಾ ಮಾನವತವಾದಿ ಬಸವಣ್ಣನವರ ತತ್ವ ಆದರ್ಶಗಳನ್ನು ಎಲ್ಲರೂ ಮೈಗೂಡಿಸಿಕೊಳ್ಳಬೇಕು. ಮೂಡನಂಬಿಕೆಯ ವಿರುದ್ಧ ಜನರು ಹೊರಬಂದಾಗ ಮಾತ್ರ ಅಭಿವೃದ್ಧಿ ಸಾಧ್ಯವಾಗುತ್ತದೆ ಎಂದು ಹೇಳಿದರು. ನಂಜನಗೂಡು ಬಸವ ಬಳಗದ ಒಕ್ಕೂಟದ ಪದಾಧಿಕಾರಿಗಳು ಭಾಗವಹಿಸಿದರು.