ಮೈಸೂರು: ಮೈಸೂರಿನ ಚಾಮುಂಡೇಶ್ವರಿ ದೇವಿ ದೇವಸ್ಥಾನದಲ್ಲಿ ಜುಲೈ 12 ರಂದು ಮೊದಲ ಆಷಾಢ ಶುಕ್ರವಾರದ ಪೂಜೆ ನಡೆಯಲಿದ್ದು, ಜಿಲ್ಲಾಡಳಿತವು ಭಕ್ತರಿಗೆ ತೊಂದರೆಯಾಗದಂತೆ ದೇವಿಯ ದರ್ಶನಕ್ಕೆ ಬೇಕಾದ ಎಲ್ಲಾ ವ್ಯವಸ್ಥೆಗಳನ್ನು ಮಾಡಿದೆ.

ಜುಲೈ ತಿಂಗಳಿನಲ್ಲಿ ನಡೆಯುವ ಆಷಾಢ ಶುಕ್ರವಾರದ ಆಚರಣೆಗಳಲ್ಲಿ ನಗರ ಮತ್ತು ಹೊರಗಿನ ಲಕ್ಷಾಂತರ ಭಕ್ತರು ಭಾಗವಹಿಸುವ ನಿರೀಕ್ಷೆಯಿದೆ. ಈ ವರ್ಷ ಆಷಾಢ ಶುಕ್ರವಾರಗಳು ಜುಲೈ 12, 19, 26 ಮತ್ತು ಆಗಸ್ಟ್ 2 ರಂದು ಬಂದಿದ್ದು, ಜುಲೈ 27 ರಂದು ಚಾಮುಂಡೇಶ್ವರಿ ವರ್ಧಂತಿ ನಡೆಯಲಿದೆ. ಇನ್ನು ಮೊದಲ ಆಷಾಢ ಶುಕ್ರವಾರದಂದು ಚಾಮುಂಡೇಶ್ವರಿ ದರ್ಶನಕ್ಕೆ ಚಾಮುಂಡಿಬೆಟ್ಟಕ್ಕೆ ಬರುವ ಭಕ್ತರಿಗೆ ವಿತರಿಸಲು 25 ಸಾವಿರ ಮೈಸೂರು ಪಾಕ್ ಸಿದ್ಧವಾಗುತ್ತಿದೆ.

ಡಿಸಿ ಜಿ.ಲಕ್ಷ್ಮೀಕಾಂತ್ ರೆಡ್ಡಿ, ಹೆಚ್ಚುವರಿ ಡಿಸಿ ಪಿ.ಶಿವರಾಜ್, ನಗರ ಪೊಲೀಸ್ ಆಯುಕ್ತ ಸೀಮಾ ಲಾಟ್ಕರ್, ಡಿಸಿಪಿ (ಕಾನೂನು ಮತ್ತು ಸುವ್ಯವಸ್ಥೆ) ಎಂ.ಮುತ್ತುರಾಜ್ ಸೇರಿದಂತೆ ಜಿಲ್ಲಾಡಳಿತ ಮತ್ತು ನಗರ ಪೊಲೀಸ್‌ ಹಿರಿಯ ಅಧಿಕಾರಿಗಳು ಮತ್ತು ಡಿಸಿಪಿ (ಅಪರಾಧ ಮತ್ತು ಸಂಚಾರ) ಎಸ್. ಜಾಹ್ನವಿ ಬೆಟ್ಟಕ್ಕೆ ಭೇಟಿ ನೀಡಿ ಈಗಾಗಲೇ ಸಿದ್ಧತೆಗಳ ಬಗ್ಗೆ ಮೇಲ್ವಿಚಾರಣೆ ನಡೆಸಿದ್ದಾರೆ.

ಬಳಿಕ ಚಾಮುಂಡೇಶ್ವರಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಸದಸ್ಯರು ಹಾಗೂ ಕಾರ್ಯನಿರ್ವಾಹಕ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಜನಸಂದಣಿ ನಿಯಂತ್ರಣ, ಸರತಿ ಸಾಲು ನಿರ್ವಹಣೆ, ಭಕ್ತರಿಗೆ ಕುಡಿಯುವ ನೀರು, ಶೌಚಾಲಯ ಸೇರಿದಂತೆ ಸೌಲಭ್ಯಗಳ ವ್ಯವಸ್ಥೆಗೆ ಸಂಬಂಧಿಸಿ ಸಲಹೆ ಸೂಚನೆ ನೀಡಿದ್ದಾರೆ.

ಲಲಿತಾ ಮಹಲ್ ಹೆಲಿಪ್ಯಾಡ್ ಬಳಿ ವಾಹನ ನಿಲುಗಡೆಗೆ ವ್ಯವಸ್ಥೆ ಮಾಡಲಾಗಿದೆ. ಪಾರ್ಕಿಂಗ್ ಮೈದಾನವು 2,000 ದ್ವಿಚಕ್ರ ವಾಹನಗಳು ಮತ್ತು ಸುಮಾರು 1,000 ನಾಲ್ಕು ಚಕ್ರದ ವಾಹನಗಳು ಮತ್ತು ಇತರ ಪ್ರಯಾಣಿಕ ವಾಹನಗಳಿಗೆ ಅವಕಾಶ ಕಲ್ಪಿಸುತ್ತದೆ. ಇಷ್ಟೇ ಅಲ್ಲದೆ ಫ್ಲೆಕ್ಸ್ ಬ್ಯಾನರ್‌ಗಳು, ಬೋರ್ಡ್‌ಗಳು ಮತ್ತು ಇತರ ಪ್ರಚಾರ ಸಾಮಗ್ರಿಗಳ ಪ್ರದರ್ಶನ ನಿಷೇಧಿಸಲಾಗಿದೆ. ಯಾವುದೇ ವಿಶೇಷ ಪಾಸ್‌ಗಳನ್ನು ನೀಡಲಾಗುವುದಿಲ್ಲ ಎಂದು ಜಿಲ್ಲಾಡಳಿತ ತಿಳಿಸಿದೆ.