ಮೈಸೂರು: ಕೆರೆ ಅಭಿವೃದ್ದಿ ಕಾಮಗಾರಿಯಲ್ಲಿ ಅಕ್ರಮ ಎಸಗಿದ ಚಿಲ್ಕುಂದ ಗ್ರಾಮ ಪಂಚಾಯ್ತಿಯ ಅಧ್ಯಕ್ಷ ಹಾಗೂ ನಾಲ್ವರು ಅಧಿಕಾರಿಗಳಿಗೆ ಓಂಬುಡ್ಸ್ ಪರ್ಸನ್ ದಂಡ ವಿಧಿಸಿ ತೀರ್ಪು ನೀಡಿದೆ. ಪಿಡಿಓ ರವಿ, ಗ್ರಾಮ ಪಂಚಾಯ್ತಿ ಅಧ್ಯಕ್ಷ ಸತೀಶ್, ತಾಂತ್ರಿಕ ಸಹಾಯಕ, ಕಾರ್ಯನಿರ್ವಾಹಕ ಅಧಿಕಾರಿ ಹಾಗೂ ಸಹಾಯಕ ನಿರ್ದೇಶಕ ರಿಗೆ ದಂಡ ಪಾವತಿಸುವಂತೆ ತೀರ್ಪು ನೀಡಿದೆ.
ಹುಣಸೂರು ತಾಲೂಕು ಚಿಲ್ಕುಂದ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಸರ್ವೆ ನಂ.198 ರ ದೊಂಡೆಕೆರೆಗೆ ಸಮಗ್ರ ಅಭಿವೃದ್ದಿ ಯೋಜನೆಗೆ ಅನುಮೋದನೆ ಪಡೆದು ಸರ್ವೆ ನಂ 158 ರ ಹುಲ್ಲುಕೆರೆಯನ್ನ ಅಭಿವೃದ್ದಿ ಪಡಿಸಿದ್ದ ಆರೋಪ ಸಾಬೀತಾದ ಹಿನ್ನಲೆ ಅಧ್ಯಕ್ಷ ಸತೀಶ್ ಹಾಗೂ ಪಿಡಿಓ ರವಿ ರವರಿಂದ 1,12,496/- ರೂ ವಸೂಲಿ ಮಾಡುವಂತೆ ಹಾಗೂ ಈ ಅಕ್ರಮಕ್ಕೆ ಸಹಕರಿಸಿದ ತಾಂತ್ರಿಕ ಸಹಾಯಕ ನಂದ ಶ್ರೀನಿವಾಸ್ ,ಕಾರ್ಯನಿರ್ವಾಹಕ ಅಧಿಕಾರಿ ಮನು. ಹಾಗೂ ಸಹಾಯಕ ನಿರ್ದೇಶಕ ಲೋಕೇಶ್ ರಿಗೆ ತಲಾ 1000 ವಸೂಲಿ ಮಾಡುವಂತೆ ತೀರ್ಪು ನೀಡಿದೆ.

ದೊಂಡೆಕೆರೆ ಅಭಿವೃದ್ದಿಗೆ ಅನುಮೋದನೆ ಪಡೆದು ಹುಲ್ಲುಕೆರೆಯನ್ನ ಅಭಿವೃದ್ದಿಪಡಿಸಿದ್ದರು. ಮನರೇಗಾ ಯೋಜನೆಯ ನಿಯಮಗಳನ್ನ ಗಾಳಿಗೆ ತೂರಿ ಸರ್ಕಾರದ ಕಣ್ಣಿಗೆ ಮಣ್ಣೆರಚಿದ್ದರು. ಹಾಗೂ ಸ್ಥಳೀಯರಾದ ಪ್ರೇಂ ಕುಮಾರ್ ಎಂಬುವರು ಓಂಬುಡ್ಸ್ ಪರ್ಸನ್ ಮೊರೆ ಹೋಗಿದ್ದರು.
ಓಂಬುಡ್ಸ್ ಪರ್ಸನ್ ದಾಖಲೆಗಳನ್ನ ಪರಿಶೀಲಿಸಿದಾಗ ಅಕ್ರಮ ಬಯಲಿಗೆ ಬಂದು ಕಾಮಗಾರಿಗೆ ಖರ್ಚು ಮಾಡಿದ ಕೂಲಿ ಮೊತ್ತವನ್ನ ಪಾವತಿಸುವಂತೆ ಆದೇಶ ನೀಡಿತ್ತು.ಆದ್ರೆ ಅಧಿಕಾರಿಗಳು ಮೇಲ್ಮನವಿ ಸಲ್ಲಿಸಿದ್ದರು. ಮೇಲ್ಮನವಿ ಪ್ರಾಧಿಕಾರ ಕೂಲಂಕುಶವಾಗಿ ದಾಖಲೆಗಳನ್ನ ಪರಿಶೀಲಿಸಿದಾಗ ಮನರೇಗಾ ಯೋಜನೆ ನಿಯಮಗಳನ್ನ ಉಲ್ಲಂಘಿಸಿರುವುದು ಸ್ಪಷ್ಟವಾಗಿತ್ತು.ದೂರು ದಾಖಲಾದ ನಂತರ ಎರಡೂ ಕೆರೆಗಳು ಒಂದೇ ಸರ್ವೆ ನಂಬರ್ ನಲ್ಲಿ ಬರುತ್ತದೆ ಎಂಬ ಸುಳ್ಳು ಹೇಳಿಕೆ ನೀಡಿದ್ದರು.ಅಲ್ಲದೆ ವಿಚಾರಣೆ ವೇಳೆ ಅನುಮೋದನೆಯನ್ನ ಬದಲಾಯಿಸಲು ಜಿಲ್ಲಾಪಂಚಾಯ್ತಿಯಿಂದ ಅನುಮತಿ ಪಡೆದಿರುವುದಾಗಿ ತಿಳಿಸಿದ್ರು.

ಅಲ್ಲದೆ ಕ್ರಿಯಾಯೋಜನೆಯ ಅಂದಾಜು ಪಟ್ಟಿಯನ್ನ 10 ರಿಂದ 20 ಲಕ್ಷಕ್ಕೆ ಹೆಚ್ಚಿಸಿದ್ದರು.ಜಿಲ್ಲಾ ಪಂಚಾಯ್ತಿಯಲ್ಲಿ ದಾಖಲೆಗಳನ್ನ ಪರಿಶೀಲಿಸಿದಾಗ ಹೆಚ್ಚುವರಿ ಅನುಮೋದನೆ ಪಡೆದಿಲ್ಲದಿರುವುದು ಸಹ ಬೆಳಕಿಗೆ ಬಂದಿದೆ. ಕಾನೂನು ಬಾಹಿರವಾಗಿ ಕೆರೆ ಅಭಿವೃದ್ದಿಪಡಿಸಿದ ಆರೋಪ ಸಾಬೀತಾದ ಹಿನ್ನಲೆ ಗ್ರಾಮ ಪಂಚಾಯ್ತಿ ಅಧ್ಯಕ್ಷ ಹಾಗೂ ನಾಲ್ವರು ಅಧಿಕಾರಿಗಳಿಗೆ ಓಂಬುಡ್ಸ್ ಪರ್ಸನ್ ದಂಡ ವಿಧಿಸಿ ತೀರ್ಪು ನೀಡಿದೆ.

