ನಂಜನಗೂಡು: ಮಳೆ ಬಂದರೆ ಎಲ್ಲರೂ ಮನೆಯೊಳಗೆ ಸೇರ್ತೀವಿ. ಆದರೆ, ಮಳೆಯೇ ಆಕೆಯ ಮನೆಯನ್ನು ಕಸಿದುಕೊಂಡಿರುವ ಘಟನೆ ಮೈಸೂರು ಜಿಲ್ಲೆಯ ನಂಜನಗೂಡು ತಾಲ್ಲೂಕಿನ ಕಾಟೂರು ಗ್ರಾಮದಲ್ಲಿ 50 ವರ್ಷದ ಮಹಿಳೆ ಜಯಮ್ಮ ಬೀದಿಗೆ ಬಿದ್ದಿದ್ದಾರೆ.
ತಂದೆ-ತಾಯಿ ಬದುಕಿರುವಾಗಲೇ ಸಿಕ್ಕ ಈ ಮಣ್ಣಿನ ಮನೆಯೇ ಆಕೆಯ ಪ್ರಪಂಚವಾಗಿತ್ತು. ತಂದೆಯನ್ನು ನೋಡಿಕೊಳ್ಳುವ ಬರದಲ್ಲಿ ಮದುವೆ ಆಗಲಿಲ್ಲ. ಕೂಲಿ ಮಾಡಿ ಹೊಟ್ಟೆ ತುಂಬಿಸಿಕೊಂಡರು. ಬಂಧು ಇಲ್ಲ, ಬಳಗ ಇಲ್ಲ. ಒಬ್ಬರೇ ಬದುಕು ಸಾಗಿಸುತ್ತಿದ್ದಾರೆ. ಕಳೆದ ವರ್ಷದಲ್ಲಿ ಸುರಿದ ಭಾರಿ ಮಳೆಗೆ ಮನೆ ಕುಸಿದು ಬಿದ್ದಿತು. ಈಗ ತಲೆಮೇಲೆ ಸೂರಿಲ್ಲ. ಒಪ್ಪತ್ತಿನ ಗಂಜಿಗೂ ದಿಕ್ಕಿಲ್ಲ.
ಜಯಮ್ಮಳ ಕಣ್ಣೀರು ನೋಡಿ ಗ್ರಾಮಸ್ಥರ ಮನಸ್ಸು ಕರಗಿದೆ. ಅಕ್ಕ ಪಕ್ಕದ ಜನರು ಆಶ್ರಯ ಕೊಟ್ಟು ಮಾನವೀಯತೆ ಮೆರೆದರು. ಆದರೆ, ಇದು ಎಷ್ಟು ದಿನ? ಪ್ರಕೃತಿ ವಿಕೋಪಕ್ಕೆ ಸರ್ಕಾರ ಕೋಟಿ-ಕೋಟಿ ಅನುದಾನ ಕೊಡುತ್ತದೆ. ಆದರೆ, ಜಯಮ್ಮಳಂತಹ ಬಡ, ಮಹಿಳೆಗೆ ಅದು ತಲುಪುತ್ತಿಲ್ಲವೇಕೆ? ಇದೇ ಪ್ರಶ್ನೆ ಇಡೀ ಗ್ರಾಮವನ್ನು ಕಾಡುತ್ತಿದೆ. ಜಯಮ್ಮ ಕೇಳುವುದು ದೊಡ್ಡದೇನಲ್ಲ.
ಬದುಕಲು ಒಂದು ಸೂರೂ. ಗೌರವದ ಬದುಕು. ಜನಪ್ರತಿನಿಧಿಗಳೇ, ಅಧಿಕಾರಿಗಳೇ ಜಯಮ್ಮಳನ್ನು ಮರೆಯಬೇಡಿ. ಮಳೆಗೆ ಮನೆ ಕಳೆದುಕೊಂಡ ಈ ತಾಯಿಗೆ ತಕ್ಷಣ ಸೂರು ಕಲ್ಪಿಸಿ, ಎಂಬುದು ಕಾಟೂರು ಗ್ರಾಮದ ಮಾನವೀಯತೆಯ ಕರೆಯಾಗಿದೆ.
-ಸಿ.ಎಂ ಸುಗಂಧರಾಜು ನ್ಯೂಸ್ ಕರ್ನಾಟಕ ಮೈಸೂರು

