ಮೈಸೂರು: ದಸರಾ ಮಹೋತ್ಸವದ ಜಂಬೂ ಸವಾರಿಯ ಸಂದರ್ಭದಲ್ಲಿ ಖಾಸಗಿ ವಾಹಿನಿಗೆ ಮೈಸೂರು ಮೇಯರ್ ಆಂಗ್ಲ ಭಾಷೆಯಲ್ಲಿ ತಪ್ಪಾಗಿ ಮಾತನಾಡಿದ ವಿಡಿಯೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿ ಬಿಟ್ಟವರ ವಿರುದ್ದ ಮಾನನಷ್ಟ ಮೊಕದ್ದಮೆ ಹೂಡಲು ನಿರ್ಧರಿಸಿದ್ದಾರೆ.
ಘಟನೆಯ ವಿವರ
ನಾಡಹಬ್ಬ ದಸರಾ ಮಹೋತ್ಸವದ ಜಂಬೂ ಸವಾರಿಯ ದಿನ ಖಾಸಗಿ ಆಂಗ್ಲ ಭಾಷೆಯ ವಿದ್ಯುನ್ಮಾನ ಮಾಧ್ಯಮದವರು ದಸರಾ ಹಬ್ಬದ ಕಾರ್ಯಕ್ರಮದ ಕುರಿತು ಇಂಗ್ಲೀಷ್ ನಲ್ಲಿ ಮಾತನಾಡುವಂತೆ ಕೇಳಿದಾಗ ಮೇಯರ್ ಕಷ್ಟಪಟ್ಟು ತಪ್ಪಾಗಿ ಇಂಗ್ಲಿಷ್ ನಲ್ಲಿ ಮಾತನಾಡಿದರು. ಈ ವಿಡಿಯೋವನ್ನು ದಸರಾ ಮುಗಿದ ಬಳಿಕ ಕಿಡಿಗೇಡಿಗಳು ಸಾಮಾಜಿಕ ಜಾಲತಾಣಗಳಲ್ಲಿ ನಮ್ಮ ಮೈಸೂರು ಇಂಗ್ಲಿಷ್ ಎಂಬ ಶೀರ್ಷಿಕೆಯೊಂದಿಗೆ ಹರಿಬಿಟ್ಟಿದ್ದು, ಈಗ ಈ ವಿಡಿಯೋ ವೈರಲ್ ಆಗಿದೆ.
ಮಾನನಷ್ಟ ಮೊಕದ್ದಮೆ ಹೂಡಲು ನಿರ್ಧಾರ
ಮಾಧ್ಯಮ ಪ್ರತಿನಿಧಿಗಳು ಇಂಗ್ಲಿಷ್ ನಲ್ಲಿ ಪ್ರತಿಕ್ರಿಯೆ ನೀಡಿ ಎಂದು ಕೇಳಿಕೊಂಡ ಹಿನ್ನೆಲೆಯಲ್ಲಿ ಮೈಸೂರು ದಸರಾ ಹಾಗೂ ಪ್ರವಾಸಿ ತಾಣಗಳ ಬಗ್ಗೆ ಆಂಗ್ಲ ಭಾಷೆಯಲ್ಲಿ ಮಾತನಾಡಿದ್ದೇನೆ. ಅದನ್ನ ಕೆಲ ಕಿಡಿಗೇಡಿಗಳು ವಾಟ್ಸ್ ಆಫ್ ಮೂಲಕ ಹರಿಬಿಟ್ಟ ವ್ಯಂಗ್ಯವಾಗಿ ಬಿಂಬಿಸಿದ್ದಾರೆ. ಇದು ನನಗೆ ವೈಯಕ್ತಿವಾಗಿ ಮಾಡಿದ ಅವಮಾನವಲ್ಲ, ಮೈಸೂರು ಮೇಯರ್ ಸ್ಥಾನಕ್ಕೆ ಮಾಡಿದ ಅವಮಾನ, ನನ್ನ ಜ್ಞಾನದ ಮಟ್ಟಕ್ಕೆ ನಾನು ಮಾತನಾಡಿದ್ದೇನೆ. ಅದನ್ನೇ ದೊಡ್ಡ ತಪ್ಪೆಂದು ಬಿಂಬಿಸುವ ಮೂಲಕ ಮೇಯರ್ ಸ್ಥಾನಕ್ಕೆ ಅಗೌರವ ತಂದ ಬಗ್ಗೆ ನೋವುಂಟಾಗಿದೆ. ಆ ವಿಡಿಯೋವನ್ನು ಮೊದಲು ಸಾಮಾಜಿಕ ಜಾಲತಾಣಗಳಿಗೆ ಹರಿ ಬಿಟ್ಟವರನ್ನ ಪತ್ತೆ ಮಾಡಿ ಅವರ ವಿರುದ್ಧ ನ್ಯಾಯಾಲಯದಲ್ಲಿ ಮಾನನಷ್ಟ ಮೊಕದ್ದಮೆ ಹೂಡುತ್ತೇನೆ ಎಂದು ಮೈಸೂರು ಮೇಯರ್ ಎಂ.ಜೆ ರವಿಕುಮಾರ್ ತಿಳಿಸಿದ್ದಾರೆ.