ಮೈಸೂರು, ನ.11: ಮೈಸೂರಿನಲ್ಲಿ ನಿರ್ಮಾಣವಾಗಲಿರುವ ಮಹತ್ವಾಕಾಂಕ್ಷೆಯ ಚಿತ್ರ ನಗರಿಗೆ ಕರ್ನಾಟಕದ ಯುವರತ್ನ ಪುನಿತ್ ರಾಜ್ಕುಮಾರ್ ಅವರ ಹೆಸರಿಡಲು ಮುಖ್ಯಮಂತ್ರಿಗಳ ಜೊತೆ ಚರ್ಚಿಸುವುದಾಗಿ ಸಹಕಾರ ಮತ್ತು ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರಾದ ಎಸ್.ಟಿ.ಸೋಮಶೇಖರ್ ಅವರು ಘೋಷಿಸಿದರು.
ಇತ್ತೀಚೆಗೆ ನಮ್ಮನಗಲಿದ ಕನ್ನಡದ ಖ್ಯಾತ ಯುವನಟ ಪುನಿತ್ ರಾಜ್ಕುಮಾರ್ ಅವರಿಗೆ ಮೈಸೂರಿನಲ್ಲಿ ದೊಡ್ಡ ವೇದಿಕೆಯಲ್ಲಿ ನುಡಿನಮನ ಸಲ್ಲಿಸುವ ಕಾರ್ಯಕ್ರಮ ಆಯೋಜಿಸಲು ನಡೆಸಿದ ಪೂರ್ವಭಾವಿ ಸಭೆಯ ನಂತರ ಜಿಲ್ಲಾ ಉಸ್ತುವಾರಿ ಸಚಿವರು ಈ ವಿಷಯ ಪ್ರಕಟಿಸಿದರು. ನುಡಿನಮನ ಕಾರ್ಯಕ್ರಮವನ್ನು ಆಯೋಜಿಸಲು ಉಪಸಮಿತಿಗಳನ್ನು ರಚಿಸಲಾಗುವುದು. ಈ ಸಮಿತಿಗಳು ಚರ್ಚಿಸಿ ನೀಡುವ ಸಲಹೆಯಂತೆ ಅಚ್ಚುಕಟ್ಟಾಗಿ ಕಾರ್ಯಕ್ರಮ ಆಯೋಜಿಸಲಾಗುವುದು ಎಂದರು.
ಮೈಸೂರು ವಿಶ್ವವಿದ್ಯಾಲಯದ ಮಾನಸಗಂಗೋತ್ರಿಯಲ್ಲಿರುವ ಬಯಲುರಂಗ ಮಂದಿರದಲ್ಲಿ ನುಡಿನಮನ ಕಾರ್ಯಕ್ರಮ ಆಯೋಜಿಸಲಾಗುವುದು. ಕಾರ್ಯಕ್ರಮಕ್ಕೆ ಶೀಘ್ರದಲ್ಲೇ ದಿನಾಂಕ ಪ್ರಕಟಿಸಲಾಗುವುದು ಎಂದರು. ಆ ಕಾರ್ಯಕ್ರಮದಲ್ಲಿ ಪುನಿತ್ ರಾಜ್ಕುಮಾರ್ ಕುರಿತು ಪುಸ್ತಕ ಬಿಡುಗಡೆ ಮಾಡಲಾಗುವುದು.ಈ ಪುಸ್ತಕಕ್ಕೆ ಸಾರ್ವಜನಿಕರಿಂದ ಲೇಖನ ಆಹ್ವಾನಿಸಲಾಗುವುದು. ಅಭಿಮಾನಿಗಳು ಲೇಖನ ಕಳುಹಿಸಿಕೊಡಬಹುದು ಎಂದು ಹೇಳಿದರು.
ನುಡಿ ನಮನ ಕಾರ್ಯಕ್ರಮಕ್ಕೆ ಮುಖ್ಯಮಂತ್ರಿಗಳನ್ನು ಸಹ ಆಹ್ವಾನಿಸಲಾಗುವುದು ಎಂದು ಹೇಳಿದರು. ಸಭೆಯಲ್ಲಿ ಶಾಸಕ ಎಲ್. ನಾಗೇಂದ್ರ, ನಿಗಮ ಮಂಡಳಿ ಪ್ರಾಕಾರದ ಅಧ್ಯಕ್ಷರುಗಳಾದ ಹೆಚ್.ವಿ.ರಾಜೀವ್, ಅಪ್ಪಣ್ಣ, ಕೌಟಿಲ್ಯ ರಘು, ಎ.ಹೇಮಂತ್ ಕುಮಾರ್ ಗೌಡ, ಎಲ್.ಆರ್.ಮಹದೇವಸ್ವಾಮಿ, ಫಣೀಶ್, ಕೃಷ್ಣಪ್ಪಗೌಡ, ಕಸಾಪ ಮಾಜಿ ಜಿಲ್ಲಾಧ್ಯಕ್ಷ ಡಾ. ವೈ.ಡಿ.ರಾಜಣ್ಣ, ರಾಜಶೇಖರ್ ಕದಂಬ, ಡಾ. ರಾಜ್ಕುಮಾರ್ ಶಿವರಾಜ್ಕುಮಾರ್ ಸಂಘದ ಅಧ್ಯಕ್ಷರಾದ ರವಿ, ಮಹದೇವ, ನಟ ಜಯಪ್ರಕಾಶ್, ಬಿ.ಎಂ.ರಾಮಚಂದ್ರ, ಬನ್ನೂರು ರಾಜು, ಭಾನು ಮೋಹನ್, ಮುಳ್ಳೂರು ನಂಜುಂಡಸ್ವಾಮಿ, ಮಡ್ಡಿಕೆರೆ ಗೋಪಾಲ್ ಮತ್ತಿತರರು ಉಪಸ್ಥಿತರಿದ್ದರು.