ಮೈಸೂರು: ಬೆಂಗಳೂರಿನ 7ನೇ ಏರ್ಮೆನ್ ಸೆಲ್ಕಷನ್ ಕಚೇರಿ ವತಿಯಿಂದ ಮೈಸೂರು ನಗರದ ಚಾಮುಂಡಿ ವಿಹಾರ್ ಸ್ಟೇಡಿಯಂನಲ್ಲಿ ಡಿ.5 ರಿಂದ 11 ರವರೆಗೆ ವಾಯು ಸೇನಾ ನೇಮಾಕಾತಿಯನ್ನು ಹಮ್ಮಿಕೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ಅಭಿರಾಂ ಜಿ. ಶಂಕರ್ ಅವರು ತಿಳಿಸಿದರು.
ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ, ಪೂರ್ವಸಿದ್ಧತಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, ಕರ್ನಾಟಕ ರಾಜ್ಯದ ಅಭ್ಯರ್ಥಿಗಳನ್ನು ವಾಯು ಸೇನೆಗೆ ಆಯ್ಕೆ ಮಾಡಿಕೊಳ್ಳಲಾಗುತ್ತಿದ್ದು, ಇದಕ್ಕೆ ಬೇಕಿರುವ ಅಗತ್ಯ ಸಿದ್ಧತೆ ಮಾಡಿಕೊಳ್ಳಲು ವಾಯು ಸೇನಾ ಅಧಿಕಾರಿಗಳೊಂದಿಗೆ ಸಮನ್ವಯತೆ ವಹಿಸುವಂತೆ ಸೈನಿಕ ಕಲ್ಯಾಣ ಇಲಾಖೆಯ ಉಪನಿರ್ದೇಶಕರಿಗೆ ತಿಳಿಸಿದರು.
ವಾಯು ಸೇನಾ ಅಧಿಕಾರಿಗಳು ಹಾಗೂ ಸಿಬ್ಬಂದಿ ಅಂದಾಜು 75 ಜನರು ಡಿ.3 ರಿಂದ 11 ರವರೆಗೆ ಮೈಸೂರಿನಲ್ಲಿ ವಾಸ್ತವ್ಯ ಹೂಡಲಿದ್ದಾರೆ. ಇವರ ವಾಸ್ತವ್ಯಕ್ಕೆ ವ್ಯವಸ್ಥೆ ಮಾಡುವಂತೆ ಅಧಿಕಾರಿಗಳಿಗೆ ತಿಳಿಸಿದರು.
ಡಿಸೆಂಬರ್ 5 ರಂದು 9 ಜಿಲ್ಲೆಗಳ ಅಭ್ಯರ್ಥಿಗಳು ಹಾಗೂ ಡಿಸೆಂಬರ್ 7 ರಂದು ಉಳಿದ ಜಿಲ್ಲೆಗಳ ಅಭ್ಯರ್ಥಿಗಳು ದೈಹಿಕ ಪರೀಕ್ಷೆಯಲ್ಲಿ ಪಾಲ್ಗೊಳ್ಳಲಿದ್ದಾರೆ. ಈ ಎರಡು ದಿನಗಳು ಆರೋಗ್ಯ ಇಲಾಖೆ ಅವರು ಒಂದು ಆಂಬ್ಯೂಲೆನ್ಸ್ ಹಾಗೂ ತುರ್ತು ಸಂದರ್ಭದಲ್ಲಿ ಬೇಕಿರುವ ಔಷಧೋಪಚಾರಗಳ ವ್ಯವಸ್ಥೆ ಮಾಡಿಕೊಡುವಂತೆ ತಿಳಿಸಿದರು.
ದೈಹಿಕ ಪರೀಕ್ಷೆಯ ಜೊತೆಗೆ ಲಿಖಿತ ಪರೀಕ್ಷೆಗಳ ಸಹ ನಡೆಯಲಿದ್ದು, ಲಿಖಿತ ಪರೀಕ್ಷೆಯನ್ನು ಚಾಮುಂಡಿ ವಿಹಾರ ಸ್ಟೇಡಿಯಂನಲ್ಲಿ ಒಳ ಕ್ರೀಡಾಂಗಣದಲ್ಲಿ ನಡೆಸಲಾಗುವುದು. ಕರ್ನಾಟಕ ರಾಜ್ಯದ ಅಭ್ಯರ್ಥಿಗಳಿಗೆ ಮಾತ್ರ ರಾಲಿಯನ್ನು ನಡೆಸಲಿದ್ದು, ಭಾಗವಹಿಸುವ ಅಭ್ಯರ್ಥಿಗಳ ದಾಖಲಾತಿಗಳನ್ನು ಪರಿಶೀಲಿಸಲು ಕಂದಾಯ ಹಾಗೂ ಸಾರ್ವಜನಿಕ ಶಿಕ್ಷಣ ಇಲಾಖೆಯ ಇಬ್ಬರು ಸಿಬ್ಬಂದಿಗಳನ್ನು ನೇಮಿಸುವಂತೆ ಸೂಚಿಸಿದರು.
ನೇಮಕಾತಿ ರಾಲಿಯಲ್ಲಿ ಭಾಗವಹಿಸಲು ಅಭ್ಯರ್ಥಿಗಳು ಮೈಸೂರಿಗೆ ಹಿಂದಿನ ದಿನದಂದೇ ಆಗಮಿಸುವ ಸಾಧ್ಯತೆಗಳು ಇರುತ್ತದೆ. ಅವರ ವಾಸ್ತವ್ಯಕ್ಕಾಗಿ ಶಿಕ್ಷಕರ ಭವನ ಅಥವಾ ನಂಜರಾಜ ಬಹದ್ದೂರು ಛತ್ರದಲ್ಲಿ ಮಾಡುವಂತೆ ತಿಳಿಸಿದರು.
ಅಂದಾಜು 1000-1200 ಅಭ್ಯರ್ಥಿಗಳು ಭಾಗವಹಿಸಬಹುದು ಅವರಿಗೆ ಬೇಕಿರುವ ಕುಡಿಯುವ ನೀರು, ಶೌಚಾಲಯಗಳ ವ್ಯವಸ್ಥೆಯನ್ನು ಮೈಸೂರು ಮಹಾನಗರಪಾಲಿಕೆ ವತಿಯಿಂದ, ಬ್ಯಾರಿಕ್ಯಾಡಿಂಗ್ ಹಾಗೂ ರಕ್ಷಣಾ ವ್ಯವಸ್ಥೆಯನ್ನು ಪೊಲೀಸ್ ಇಲಾಖೆಯಿಂದ ಕಲ್ಪಿಸುವಂತೆ ತಿಳಿಸಿದರು.
ಸಭೆಯಲ್ಲಿ ಬೆಂಗಳೂರಿನ 7 ನೇ ಏರ್ಮೆನ್ ಸೆಲ್ಕಷನ್ ಕಚೇರಿ ಎಸ್.ಕೆ ಅರೋರಾ, ಜಿಲ್ಲಾ ಉದ್ಯೋಗ ವಿನಿಮಯ ಕಚೇರಿಯ ಸಹಾಯಕ ನಿರ್ದೇಶಕಿ ರಾಣಿ ಸೇರಿದಂತೆ ಇನ್ನಿತರ ಅಧಿಕಾರಿಗಳು ಉಪಸ್ಥಿತರಿದ್ದರು.