ಮೈಸೂರು: ಮಾನಸ ಸರೋವರ ಯಾತ್ರೆಯಲ್ಲಿ ಸಿಲುಕಿರುವ ಎಲ್ಲಾ ಯಾತ್ರಿಗಳಿಗೆ ಆಹಾರ ಮತ್ತು ಔಷಧಿ ಸಿಗುತ್ತಿದ್ದು, ಸದಕ್ಕೆ ಎಲ್ಲಾ ಯಾತ್ರಿಗಳು ಸುರಕ್ಷಿತವಾಗಿದ್ದಾರೆ ಎಂದು ಮೈಸೂರು ಜಿಲ್ಲಾಧಿಕಾರಿ ಅಭಿರಾಮ್ ಜಿ.ಶಂಕರ್ ಮಾಹಿತಿ ನೀಡಿದರು.
ಇಂದು ನಗರದ ಜಿಲ್ಲಾಧಿಕಾರಿ ಕಚೇರಿಯಲ್ಲಿ ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ಜಿಲ್ಲಾಧಿಕಾರಿ ಅಭಿರಾಮ್ ಜಿ.ಶಂಕರ್, ಈ ವರ್ಷದ ಮಾನಸ ಸರೋವರ ಯಾತ್ರೆಯಲ್ಲಿ ಒಂದಷ್ಟು ಯಾತ್ರಿಗಳು ಹವಾಮಾನ ವೈಪರೀತ್ಯದ ಹಿನ್ನೆಲೆಯಲ್ಲಿ ನೇಪಾಳ ಮತ್ತು ಟಿಬೆಟ್ ನಲ್ಲಿ ಸಿಲುಕಿಕೊಂಡಿದ್ದಾರೆಂಬ ಮಾಹಿತಿ ಬಂದಿದೆ. ಜಿಲ್ಲಾಡಳಿತ, ಸಿಎಂ ಕಚೇರಿ, ಭಾರತದ ರಾಯಭಾರಿ ಕಚೇರಿ ಮತ್ತು ದೆಹಲಿಯ ಕರ್ನಾಟಕ ಭವನದ ಅಧಿಕಾರಿಗಳ ಜೊತೆ ನಿರಂತರವಾಗಿ ಸಂಪರ್ಕದಲ್ಲಿದ್ದೇವೆ. ನಮ್ಮ ರಾಜ್ಯದಿಂದ ಮತ್ತು ಮೈಸೂರು ಜಿಲ್ಲೆಯಿಂದ ಎಷ್ಟು ಜನ ಯಾತ್ರಿಗಳು ಇದ್ದಾರೆ ಎಂಬ ಮಾಹಿತಿ ಇನ್ನೂ ಬಂದಿಲ್ಲ. ನಮಗೆ ಬಂದಿರುವ ಮಾಹಿತಿಗಳ ಪ್ರಕಾರ ನೇಪಾಳದ ಎರಡು ಕಡೆ ಸೆಮಿಕೋಟ್ ಮತ್ತು ಹಿಲ್ಸಾ ಎಂಬ ಜಾಗದಲ್ಲಿ 500 ಗುಂಪಿನ ಎರಡು ತಂಡ ಈ ಎರಡು ಜಾಗದಲ್ಲಿ ಸಿಲುಕಿಕೊಂಡಿದ್ದಾರೆ. ಹವಾಮಾನ ವೈಪರೀತ್ಯ ಹಿನ್ನೆಲೆಯಲ್ಲಿ ಮುಂದೆ ಹೋಗಲು ಅವರಿಗೆ ಸಾಧ್ಯವಾಗಿಲ್ಲ ಎಂದು ಮಾಹಿತಿ ಬಂದಿದೆ.
ಆದರೆ ಭಾರತೀಯ ರಾಯಭಾರಿ ಕಚೇರಿಯಿಂದ ನಮಗೆ ಬಂದಿರುವ ಮಾಹಿತಿಯ ಪ್ರಕಾರ ಆಹಾರ ಮತ್ತು ಔಷಧಿಗಳು ಯಾತ್ರಿಗಳಿಗೆ ಸಿಗುತ್ತಿದೆ. ಪೊಲೀಸರು ಯಾತ್ರಿಗಳ ವಿವರವನ್ನು ಕಲೆ ಹಾಕುತ್ತಿದ್ದು, ಸದ್ಯಕ್ಕೆ ಯಾವುದೇ ತೊಂದರೆಗಳಾಗಿಲ್ಲ. ಇಂದು ವಾತಾವರಣ ಸರಿಹೋದರೆ ಯಾತ್ರಿಗಳನ್ನು ಸುರಕ್ಷಿತ ಸ್ಥಳಗಳಿಗೆ ಕಳುಹಿಸಲಾಗುವುದು. ಯಾತ್ರಿಗಳ ಅನುಕೂಲಕ್ಕಾಗಿ ಭಾರತ ಸರ್ಕಾರ ಕನ್ನಡ, ತಮಿಳು, ತೆಲುಗು ಮತ್ತು ಮಲಯಾಳಂ ಭಾಷೆಗಳಲ್ಲಿ ಹಾಟ್ ಲೈನ್ ಗಳನ್ನು ತೆರೆದಿದ್ದು, ಸದ್ಯಕ್ಕೆ ಎಲ್ಲಾ ಯಾತ್ರಿಗಳು ಸುರಕ್ಷಿರಾಗಿದ್ದಾರೆ. ಯಾರು ಆತಂಕಪಡುವ ಅಗತ್ಯವಿಲ್ಲ ಎಂದರು.