ಯಳಂದೂರು: ತಾಲೂಕಿನ ಬಿಆರ್ಟಿ ಅರಣ್ಯ ವ್ಯಾಪ್ತಿಯಲ್ಲಿ ಆಮೆಕೆರೆ ಬಳಿಯಿರುವ ಇಟ್ಟಿಗೆ ಕಾರ್ಖಾನೆಯ ಬಳಿ ಬೆಳೆದಿದ್ದ ಅಕ್ರಮ ಗಾಂಜಾ ಗಿಡವನ್ನು ಯಳಂದೂರು ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಆಮೆಕೆರೆ ಬಳಿ ಹಲವು ವರ್ಷಗಳಿಂದಲೂ ಇಟ್ಟಿಗೆ ಕಾರ್ಖಾನೆ ನಡೆಯುತ್ತಿದ್ದು, ಕಾರ್ಖಾನೆಯಲ್ಲಿ ಕೆಲಸ ಮಾಡುವ ಕೂಲಿ ಕಾರ್ಮಿಕರಿಗೆ ನಿರ್ಮಾಣವಾಗಿರುವ ಮನೆ ಮುಂಭಾಗ ಬೆಳೆದಿದ್ದ 3.5 ಕಿಲೋ ತೂಕದ ಗಾಂಜಾ ಗಿಡವನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
10 ಎಕರೆ ಪ್ರದೇಶದಲ್ಲಿರುವ ಈ ಭೂಮಿ ಮಮ್ತಾಜ್ ಬೇಗಂ, ಮುಖ್ತಾರ್ ಪಾಷ ಮಕ್ಸೂದ್ ಪಾಷ ಎಂಬುವವರ ಹೆಸರಿನಲ್ಲಿದ್ದು, ಮದ್ದೂರು ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಒಳಪಡುತ್ತಿದೆ. ಇಲ್ಲಿನ ಕೂಲಿ ಕಾರ್ಮಿಕ ಒರಿಸ್ಸಾ ಮೂಲದ ರಾಜುಲಿಯಾ ಅಲಿಯಾಸ್ ಸುಭಾಷ್ ಎಂಬಾತ ಗಾಂಜಾ ಬೆಳೆದಿದ್ದನು ಎನ್ನಲಾಗಿದ್ದು ಇದೀಗ ಆತನನ್ನು ಬಂಧಿಸಲಾಗಿದೆ.
ಈ ಸಂಬಂಧ ಯಳಂದೂರು ಪಟ್ಟಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಕಾರ್ಯಾಚರಣೆಯಲ್ಲಿ ಸಬ್ ಇನ್ಸ್ ಪೆಕ್ಟರ್ ಕೆ.ಕೆ. ಶ್ರೀಧರ್, ಸಿಬ್ಬಂದಿ ಸೂರ್ಯನಾರಾಯಣ, ಪರಶಿವಮೂರ್ತಿ, ರಾಘವೇಂದ್ರ ಭಾಗವಹಿಸಿದ್ದರು.