ಮೈಸೂರು: ಮಗನ ಸಾಲಕ್ಕೆ ಹೆದರಿ ಸಾಲಕ್ಕೊಟ್ಟವರ ಕಾಟ ತಾಳಲಾರದೇ ತಂದೆ ಸಿಮೇ ಎಣ್ಣೆ ಸುರಿದು ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಹೃದಯ ವಿದ್ರಾವಕ ಘಟನೆ ನಗರದ ಬಿಜಿಎಸ್ ವಿದ್ಯಾಪೀಠದಲ್ಲಿ ನಡೆದಿದೆ.
ಮೈಸೂರಿನ ಕುವೆಂಪುನಗರ ಆದಿಚುಂಚನಗಿರಿ ರಸ್ತೆಯಲ್ಲಿರುವ ಬಿಜಿಎಸ್ ವಿದ್ಯಾಪೀಠದ ಆವರಣದಲ್ಲಿರುವ ಬಿಜಿಎಸ್ ಬೇಕರಿ ನಡೆಸುತ್ತಿದ್ದ ರಘುನಾಥ್ ರಾವ್(57) ಅವರೇ ಹೀಗೆ ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆ ಮಾಡಿಕೊಂಡವರಾಗಿದ್ದಾರೆ. ಬೆಳ್ಳಗ್ಗೆ 6.30 ರ ಸುಮಾರಿಗೆ ಬೇಕರಿಗೆ ಬಂದ ಇವರು ಮುಂಜಾನೆ ಬೇಕರಿ ಶೌಚಾಲಯದಲ್ಲಿ ಬೆಂಕಿ ಹಚ್ಚಿಕೊಂಡು ಸಾವಿಗೆ ಶರಣಾಗಿದ್ದಾರೆ.
ಮಗ ಪ್ರಶಾಂತ್ ರೈಲ್ವೆ ಇಲಾಖೆ ಕೆಲಸ ಮಾಡಿಕೊಂಡಿದ್ದು, ವಿಪರೀತ ಕೈ ಸಾಲ ಮಾಡಿಕೊಂಡಿದ್ದನು. ಸಾಲಗಾರರ ಮನೆಗೆ ಬಂದು ಗಲಾಟೆ ಮಾಡುತ್ತಿದ್ದಾಗ ಮಗನ ಸಾಲವನ್ನು ಪ್ರತಿದಿನ ಕಂತಿನಲ್ಲಿ ನಾನು ಸಾಲ ತೀರಿಸುತ್ತೇನೆ ಎಂದು ತಂದೆ ರಘುನಾಥ್ ರಾವ್ ತಿಳಿಸಿದ್ದರು. ಅದರಂತೆ ಸಾಲಗಾರರು ವಿದ್ಯಾಪೀಠ ಆವರಣದೊಳಗಿರುವ ಬೇಕರಿ ನಡೆಸುತ್ತಿದ್ದ ರಘುನಾಥ್ ಅವರ ಬಳಿಗೆ ಬಂದು ಹಣಕ್ಕಾಗಿ ಗಲಾಟೆ ಮಾಡುತ್ತಿದ್ದರು. ಈ ಬಗ್ಗೆ ತಿಳಿದ ಸ್ವಾಮೀಜಿಯವರು ವಿದ್ಯಾಪೀಠದಲ್ಲಿ ಇಂತಹ ಜಗಳದ ವಾತಾವರಣ ಇರಬಾರದು ಹಾಗಾಗಿ ಮಾರ್ಚ್ 1 ಕ್ಕೆ ಬೇಕರಿ ಖಾಲಿ ಮಾಡುವಂತೆ ತಿಳಿಸಿದರು.
ಇತ್ತ ಸಾಲಗಾರರ ಕಾಟ ಅತ್ತ ಜೀವನ ಆಧಾರಕ್ಕೆ ಇದ್ದ ಒಂದು ಬೇಕರಿಯನ್ನು ಬಿಡುವಂತೆ ಸ್ವಾಮೀಜಿ ಹೇಳಿದ ಮಾತಿನಿಂದ ಮನನೊಂದ ರಘುನಾಥ್ ರಾವ್ ಇಂದು ಬೇಕರಿಯ ಶೌಚಾಲಯಲ್ಲಿ ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಸ್ಥಳಕ್ಕೆ ಆಗಮಿಸಿರುವ ಆಶೋಕಪುರಂ ಠಾಣೆಯ ಪೊಲೀಸರು ಸಂಬಂಧಿಕರು ಹಾಗೂ ವಿದ್ಯಾಪೀಠದ ವಿಚಾರಣೆ ಕೈಗೊಂಡಿದ್ದಾರೆ.