ಮಂಡ್ಯ: ಇಲ್ಲಿನ ಪಶ್ಚಿಮ ಪೊಲೀಸ್ ಠಾಣೆಯಲ್ಲಿ ವ್ಯಕ್ತಿಯೊಬ್ಬ ಅನುಮಾನಾಸ್ಪದವಾಗಿ ಸಾವನ್ನಪ್ಪಿದ್ದು, ಲಾಕಪ್ ಡೆತ್ ಎಂಬ ಆರೋಪ ಕೇಳಿ ಬಂದಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ವರನ್ನು ಅಮಾನತುಗೊಳಿಸಲಾಗಿದೆ.
ಮೂರ್ತಿ ಎಂಬಾತನೇ ಅನುಮಾನಾಸ್ಪದವಾಗಿ ಸಾವನ್ನಪ್ಪಿದ ದುರ್ದೈವಿ. ಈತನನ್ನು ಜು.9ರಂದು ದ್ವಿಚಕ್ರ ವಾಹನಗಳ ಕಳವು ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದರು. ಆದರೆ ಗುರುವಾರ ಮಧ್ಯರಾತ್ರಿ ಈತ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ಪೋಷಕರಿಗೆ ಶುಕ್ರವಾರ ಪೊಲೀಸರು ತಿಳಿಸಿದ್ದಾರೆ.
ಆದರೆ ದಿನದ 24 ಗಂಟೆಗಳ ಕಾಲ ತೆರೆದಿರುವ ಪೊಲೀಸ್ ಠಾಣೆಯಲ್ಲಿಯೇ ಆರೋಪಿಯೊಬ್ಬ ಆತ್ಮಹತ್ಯೆ ಮಾಡಿಕೊಳ್ಳಲು ಹೇಗೆ ಸಾಧ್ಯ? ಹಾಗೂ ಸಾವಿನ ವಿಚಾರವನ್ನು ತಾಸುಗಳವರೆಗೆ ಮುಚ್ಚಿಟ್ಟ ಕ್ರಮವೇನು? ಎಂದು ಪೋಷಕರು, ಪರಿಚತರು ಹಾಗೂ ದಲಿತ ಸಂಘಟನೆಗಳ ಸದಸ್ಯರು ಠಾಣೆಯ ಮುಂದೆ ಪ್ರತಿಭಟನೆ ನಡೆಸಿದ್ದಾರೆ.
ಅಲ್ಲದೆ ಕಾನೂನು ಮೀರಿ ಮೂರು ದಿನಗಳ ಕಾಲ ಅಕ್ರಮವಾಗಿ ಠಾಣೆಯಲ್ಲಿರಿಸಿಕೊಂಡಿದ್ದಲ್ಲದೆ, ಆರೋಪಿ ಮೂರ್ತಿಯನ್ನು ಉಪವಾಸ ಕೆಡವಲಾಗಿತ್ತು. ಜೊತೆಗೆ ಚಿತ್ರಹಿಂಸೆ ನೀಡಲಾಗಿತ್ತು ಎಂಬ ಆರೋಪವೂ ಕೇಳಿ ಬಂದಿದೆ.
ಘಟನಾ ಸ್ಥಳಕ್ಕೆ ಎಸ್ಪಿ ರಾಧಿಕಾ ಹಾಗೂ ಎಎಸ್ಪಿ ಲಾವಣ್ಯ ಅವರು ಭೇಟಿ ನೀಡಿ ಪರಿಶೀಲನೆ ನಡೆಸಿದರು. ಅಲ್ಲದೆ, ದಲಿತ ಸಂಘಟನೆಗಳ ಕಾರ್ಯಕರ್ತರು ಪ್ರತಿಭಟಿಸುತ್ತಿದ್ದ ಮಿಮ್ಸ್ನ ಶವಾಗಾರದ ಬಳಿ ತೆರಳಿ ಸಂಘಟನೆಗಳ ಮುಖಂಡರೊಂದಿಗೆ ಮಾತುಕತೆ ನಡೆಸಿ, ತಪ್ಪಿತಸ್ಥರ ವಿರುದ್ಧ ಕ್ರಮಕೈಗೊಳ್ಳುವುದಾಗಿ ಭರವಸೆ ನೀಡಿದರು.
ಈ ನಡುವೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪಶ್ಚಿಮ ಠಾಣೆಯ ಪಿಎಸ್ಐ ಆನಂದ್ ಕುಮಾರ್, ಹೆಡ್ಕಾನ್ಸ್ಟೇಬಲ್ ಮಾದೇಶ್, ಪೇದೆಗಳಾದ ಮಲ್ಲಿಕಾರ್ಜುನ ಜಳಕಿ ಹಾಗೂ ವರದರಾಜು ಅವರನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಿ.ರಾಧಿಕಾ ಅವರು ಕರ್ತವ್ಯಲೋಪದ ಹಿನ್ನೆಲೆಯಲ್ಲಿ ಅಮಾನತು ಮಾಡಿ ಆದೇಶ ಹೊರಡಿಸಿದ್ದಾರೆ.