ಹನಗೋಡು : ನಾಗರಹೊಳೆ ಕಾಡಂಚಿನ ಜನ ಕಾಡಾನೆಗಳ ಕಾಟದಿಂದ ಮುಕ್ತಿಪಡೆಯುವುದು ಕನಸಿನ ಮಾತಾಗಿದೆ. ಕಾಡಾನೆಗಳು ಕಾಡಿನಿಂದ ನಾಡಿಗೆ ಬಾರದಂತೆ ಅರಣ್ಯ ಇಲಾಖೆ ಕೈಗೊಂಡಿದ್ದ ಕೆಲವು ಕ್ರಮಗಳು ವಿಫಲಗೊಂಡಿದ್ದರಿಂದ ಮತ್ತೆ ಕಾಡಾನೆಗಳು ನಾಡಿಗೆ ಲಗ್ಗೆಯಿಡುತ್ತಿದ್ದು ರೈತರು ಕಂಗಾಲಾಗಿದ್ದಾರೆ.
ನಾಗರಹೊಳೆ ರಾಷ್ಟ್ರೀಯ ಉದ್ಯಾನವನದ ಕಾಡಂಚಿನ ಗ್ರಾಮಗಳಲ್ಲಿ ಮೇಲಿಂದ ಮೇಲೆ ಕಾಡಾನೆಗಳು ನಾಡಿಗೆ ಲಗ್ಗೆಯಿಟ್ಟು ರೈತರು ಬೆಳೆದಿದ್ದ ಬೆಳೆಯನ್ನೆಲ್ಲ ತಿಂದು ತುಳಿದು ನಾಶ ಮಾಡುತ್ತಿರುವುದು ಹೊಸತೇನಲ್ಲ. ಹಿಂದಿನಿಂದಲೂ ಇದು ಮುಂದುವರೆದುಕೊಂಡು ಬಂದಿದೆ.
ಹೀಗಾಗಿ ಕಾಡಾನೆಯ ಹಾವಳಿ ತಪ್ಪಿಸಲು ಸರ್ಕಾರ ಮೊದಲಿಗೆ ಆನೆ ಕಂದಕ ನಿರ್ಮಾಣ ಮಾಡಿತ್ತು. ಒಂದಷ್ಟು ದಿನಗಳ ಕಾಲ ಕಾಡಾನೆಗಳು ಕಂದಕ ದಾಟಲು ಹಿಂದೇಟು ಹಾಕಿದವು. ಬಳಿಕ ಬುದ್ದಿವಂತ ಆನೆಗಳು ಉಪಾಯ ಹೂಡಿದವು ಅದೇನೆಂದರೆ ಕಂದಕಕ್ಕೆ ಮಣ್ಣು ತಳ್ಳಿ ಸಮತಟ್ಟು ಮಾಡಿಕೊಂಡು ಹೊರಗಡೆ ದಾಟಲು ಆರಂಭಿಸಿದವು. ಜತೆಗೆ ಸಕಾಲದಲ್ಲಿ ಕಂದಕವನ್ನು ದುರಸ್ತಿ ಮಾಡದ ಕಾರಣ ಕಂದಕ ಕುಸಿದು ಕಾಡಾನೆಗಳು ಹೊರಗೆ ಬರಲು ರಾಜಮಾರ್ಗ ಮಾಡಿಕೊಟ್ಟಂತಾಯಿತು.
ಯಾವಾಗ ಕಂದಕದ ಯೋಜನೆ ವಿಫಲವಾಯಿತೋ ಪಕ್ಕದಲ್ಲಿ ಸೋಲಾರ್ ಬೇಲಿಯನ್ನು ಅರಣ್ಯ ಇಲಾಖೆ ಅಳವಡಿಸಿತು. ಕ್ರಮೇಣ ಕಾಡಾನೆಗಳು ಸೋಲಾರ್ ಬೇಲಿಗೆ ಒಣ ಮರಗಳನ್ನು ತಂದು ಅದರ ಮೇಲೆ ಹಾಕಿ ಬೇಲಿಯನ್ನು ಮುರಿದು ದಾಟಲು ಮುಂದಾದವು. ಪರಿಣಾಮ ಅರಣ್ಯ ಇಲಾಖೆಗೆ ಮತ್ತಷ್ಟು ಒತ್ತಡ ಹೆಚ್ಚಾಯಿತು. ಹೊಸ ಯೋಜನೆಗಳನ್ನು ಹುಡುಕಲು ಇಲಾಖೆ ಪ್ರಾರಂಭಿಸಿತು.ಆಗ ಸರ್ಕಾರ ಆಫ್ರಿಕಾ ಮಾದರಿಯಲ್ಲಿ ರೈಲ್ವೆ ಕಂಬಿಗಳ ಬೇಲಿಯನ್ನು ಅಳವಡಿಸುವ ಸಲಹೆ ನೀಡಿತು.
ಈ ಯೋಜನೆ ಅರಣ್ಯ ಇಲಾಖೆಗೂ ಸರಿ ಎನಿಸಿತು. ಹಾಗಾಗಿ ಆಫ್ರಿಕಾಕ್ಕೆ ನುರಿತ ತಜ್ಞರು ಮತ್ತು ಹಿರಿಯ ಅಧಿಕಾರಿಗಳ ತಂಡವನ್ನು ಕಳುಹಿಸಿ ಅದರ ಬಗ್ಗೆ ಅಧ್ಯಯನ ಮಾಡಿ ಕರ್ನಾಟಕದಲ್ಲಿ ಮೊಟ್ಟಮೊದಲ ಬಾರಿಗೆ ನಾಗರಹೊಳೆ ರಾಷ್ಟ್ರೀಯ ಉದ್ಯಾನವನದ ಕಾಡಂಚಿನ ಗ್ರಾಮಗಳ ಸುತ್ತ ಕೋಟ್ಯಂತರ ರೂಪಾಯಿ ಹಣವನ್ನು ಬಜೆಟ್ ನಲ್ಲಿ ಘೋಷಿಸಿ ಕಾಮಗಾರಿ ಪ್ರಾರಂಭಿಸಿ ರೈಲ್ವೆ ಕಂಬಿಗಳ ಬೇಲಿಯನ್ನು ಅಳವಡಿಸಲಾಯಿತು. ಇದರ ಬಗ್ಗೆ ತಿಳಿದ ನಾಗರಹೊಳೆ ರಾಷ್ಟ್ರೀಯ ಉದ್ಯಾನವನದಂಚಿನ ರೈತರು ಮತ್ತು ಗ್ರಾಮಸ್ಥರು ನೆಮ್ಮದಿಯುಸಿರು ಬಿಟ್ಟರು.
ಆದರೆ ಈ ನೆಮ್ಮದಿ ಹೆಚ್ಚು ದಿನ ಉಳಿಯಲೇ ಇಲ್ಲ. ಒಂದೆರಡು ವರ್ಷದ ಬಳಿಕ ಆನೆಗಳು ರೈಲ್ವೆ ಕಂಬಿಗಳ ಬೇಲಿಯನ್ನು ದಾಟಲು ಪ್ರಾರಂಭಿಸಿದೆವು ಅದರ ನಂತರದಲ್ಲಿ ಅರಣ್ಯ ಇಲಾಖೆ ಟೆಂಟ್ ಕಲ್ ಅಂದರೆ (ರೈಲ್ವೆ ಕಂಬಿಗಳ ಬೇಲಿಯ ಮೇಲೆ ಆನೆಗಳು ನೆಗೆಯದಂತೆ ಸೋಲಾರ್ ತಂತಿ)ಯನ್ನು ಸಹ ಹಾಕಿಸಿದರು. ಅದು ಕೂಡ ಪ್ರಯೋಜನಕ್ಕೆ ಬರಲಿಲ್ಲ. ಪರಿಣಾಮ ಕಾಡಾನೆಗಳು ಆಗಾಗ್ಗೆ ನಾಡಿಗೆ ಬರಲಾರಂಭಿಸಿವೆ.
ಪ್ರಶಕ್ತ ವರ್ಷ ಉತ್ತಮ ಮಳೆಯಾಗಿದ್ದು ಬೆಳೆಯು ಹುಲುಸಾಗಿ ಬಂದಿದೆ. ಪೆಂಜಳ್ಳಿ ಗುರುಪುರ ಭರತವಾಡಿ ವೀರನಹೊಸಳ್ಳಿ ಬಿಲ್ಲನ ಹೊಸಳ್ಳಿ ಅಗಸನಹುಂಡಿ ರಾಜೇಗೌಡ ನಹುಂಡಿ ಅಣ್ಣೂರು ಮೇಟಿಕುಪ್ಪೆ ಈ ಗ್ರಾಮಗಳಿಗೊಂದು ಸುತ್ತು ಹೊಡೆದರೆ ರೈತರು ಬೆಳೆ ಬೆಳೆ ಆಶಾ ಭಾವನೆ ಹುಟ್ಟಿಸುತ್ತಿದೆ. ಆದರೆ ಇದೇ ಸಮಯದಲ್ಲಿ ಆನೆಗಳ ಉಪಟಳವೂ ಹೆಚ್ಚಾಗುತ್ತಿದೆ.
ಜೋಳ, ಬಾಳೆ, ಹತ್ತಿ, ರಾಗಿ ಬೆಳೆಗಳನ್ನು ತಿಂದು ತುಳಿದುಹಾಕುತ್ತಿವೆ. ಅರಣ್ಯ ಇಲಾಖೆಗೆ ಬೆಳೆ ಪರಿಹಾರದ ಅರ್ಜಿಗಳು ತುಂಬಾ ಕಡಿಮೆಯಾಗಿದ್ದವು. ಆದರೆ 2019 ರಿಂದ 2021ನೇ ಸಾಲಿನವರೆಗೆ ಸುಮಾರು 400 ಅರ್ಜಿಗಳು ಬಂದಿದ್ದು 30ಲಕ್ಷದಷ್ಟು ಪರಿಹಾರ ಕೊಡಲಾಗಿದೆ. ಕಳೆದೊಂದು ವಾರದಿಂದ ಆನೆಗಳು ಗುರುಪುರ ಟಿಬೆಟ್ ಕ್ಯಾಂಪ್ ಪೆಂಜಹಳ್ಳಿ ಹತ್ತಿರ ಹಗಲು ಸಮಯದಲ್ಲಿಯೇ ಬರುತ್ತಿವೆ. ಇದರಿಂದ ರೈತರು ತಮ್ಮ ಜಮೀನುಗಳಲ್ಲಿ ಕೃಷಿ ಕಾರ್ಯ ನಡೆಸಲು ಭಯಪಡುತ್ತಿದ್ದಾರೆ.
ಈ ಕುರಿತಂತೆ ಮಾತನಾಡಿರುವ ಎಪಿಎಂಸಿ ಅಧ್ಯಕ್ಷ ಮುದನೂಗರು ಸುಭಾಷ್ ಅವರು ಅರಣ್ಯ ಇಲಾಖೆ ರೈಲ್ವೆ ಕಂಬಿಗಳನ್ನು ಹಾಕಿರುವುದು ಎತ್ತರ ಕಡಿಮೆಯಾಗಿದೆ. ಅದನ್ನು ಹೆಚ್ಚಿಸಬೇಕು ಮತ್ತು ಒಂದು ಕಂಬಿಯಿಂದ ಮತ್ತೊಂದು ಕಂಬಿಗೆ ಅಂತರವನ್ನು ಸಹ ಕಡಿಮೆ ಮಾಡಬೇಕು. ಇದರಿಂದ ಬೇಲಿ ಮಧ್ಯದಲ್ಲಿ ನುಗ್ಗುವುದನ್ನು ಸಹ ತಡೆಯಬಹುದು ಇದನ್ನು ಇಲಾಖೆ ತ್ವರಿತವಾಗಿ ಮಾಡಬೇಕು ಎಂದು ಒತ್ತಾಯಿಸಿದ್ದಾರೆ.