ಮೈಸೂರು: ನಾಡ ಅಧಿದೇವತೆ ಚಾಮುಂಡಿ ತಾಯಿಯ ಪರಮ ಭಕ್ತರಾದ ಚಾಲೆಜಿಂಗ್ ಸ್ಟಾರ್ ದರ್ಶನ್ ಪ್ರತಿ ವರ್ಷದಂತೆ ಈ ವರ್ಷವೂ ಸಹ ಮೊದಲ ಆಷಾಡ ಶುಕ್ರವಾರದಂದು ಚಾಮುಂಡಿ ಬೆಟ್ಟಕ್ಕೆ ತೆರಳಿ ಚಾಮುಂಡಿ ತಾಯಿಗೆ ವಿಶೇಷ ಪೂಜೆ ಸಲ್ಲಿಸಿದರು.
ಮೊದಲಿನಿಂದಲೂ ಚಾಮುಂಡೇಶ್ವರಿ ತಾಯಿಯ ಭಕ್ತರಾಗಿರುವ ದರ್ಶನ್ ಇಂದು ಲೋಕೋಪಯೋಗಿ ಸಚಿವ ಡಾ.ಎಚ್.ಸಿ ಮಹಾದೇವಪ್ಪ ಅವರ ಪುತ್ರ ಸುನಿಲ್ ಬೋಸ್ ನೊಂದಿಗೆ ಒಂದೇ ಕಾರಿನಲ್ಲಿ ಚಾಮುಂಡಿ ಬೆಟ್ಟಕ್ಕೆ ತೆರಳಿ ತಾಯಿಯ ದರ್ಶನ ಪಡೆದಿರುವುದು ವಿಶೇಷವಾಗಿತ್ತು. ಚಾಮುಂಡೇಶ್ವರಿ ದೇವಾಲಯದಲ್ಲಿ ವಿಶೇಷವಾಗಿ ಮಾಡಲಾಗಿದ್ದ ಹೂವಿನ ಮತ್ತು ದ್ರಾಕ್ಷಿ ಅಲಂಕಾರ ಭಕ್ತ ಕಣ್ಮನ ಸೆಳೆಯುತ್ತಿತ್ತು.
ಸಾರಿಗೆ ಬಸ್’ನಲ್ಲಿ ಬೆಟ್ಟಕ್ಕೆ…
ಆಷಾಡ ಮಾಸದ ಶುಕ್ರವಾರ ವಿವಿಧೆಡೆಯಿಂದ ಸಾವಿರಾರು ಭಕ್ತರು ಆಗಮಿಸುವ ಹಿನ್ನೆಲೆಯಲ್ಲಿ ಚಾಮುಂಡಿಬೆಟ್ಟಕ್ಕೆ ಖಾಸಗಿ ವಾಹನಗಳ ಪ್ರವೇಶ ನಿರ್ಬಂಧಿಸಲಾಗಿತ್ತು. ಖಾಸಗಿ ವಾಹನಗಳಲ್ಲಿ ಆಗಮಿಸುವ ಭಕ್ತರು ಲಲಿತಮಹಲ್ ಹೆಲಿಪ್ಯಾಡ್ ಗೆ ತೆರಳಿ ತಮ್ಮ ಖಾಸಗಿ ವಾಹನಗಳನ್ನು ನಿಲ್ಲಿಸಿ, ಸಾರಿಗೆ ಸಂಸ್ಥೆಯ ಬಸ್ ಗಳಲ್ಲಿ ಉಚಿತವಾಗಿ ಪ್ರಯಾಣಿಸುವುದಕ್ಕೆ ವ್ಯವಸ್ಥೆ ಮಾಡಲಾಗಿತ್ತು.
ಹೆಲಿಪ್ಯಾಡ್ ನಿಂದ ಚಾಮುಂಡಿಬೆಟ್ಟಕ್ಕೆ ಭಕ್ತರನ್ನು ಕರೆದೊಯ್ಯಲು ಸಾರಿಗೆ ಸಂಸ್ಥೆಯ ಬಸ್ ವ್ಯವಸ್ಥೆ ಮಾಡಲಾಗಿತ್ತು. ಉಳಿದಂತೆ ನಗರ ಬಸ್ ನಿಲ್ದಾಣದಿಂದ ಹೆಚ್ಚುವರಿ ಬಸ್ ವ್ಯವಸ್ಥೆ ಮಾಡುವ ಜತೆಗೆ ಭಕ್ತರ ಸಂಖ್ಯೆಗೆ ಅನುಗುಣವಾಗಿ ಹೆಚ್ಚಿನ ಬಸ್ ಸಂಚಾರಕ್ಕೆ ಸಾರಿಗೆ ಸಂಸ್ಥೆ ಕ್ರಮ ಕೈಗೊಂಡಿದ್ದರಿಂದ ಯಾವುದೇ ಗೊಂದಲವಾಗಲಿಲ್ಲ. ಹೆಲಿಪ್ಯಾಡಿನಿಂದ ಬೆಟ್ಟಕ್ಕೆ ಉಚಿತ ಬಸ್ ವ್ಯವಸ್ಥೆ ಇದ್ದ ಕಾರಣ ಸಾವಿರಾರು ಜನರು ವಾಹನ ನಿಲ್ಲಿಸಿ, ಸಾರಿಗೆ ಬಸ್ ನಲ್ಲಿ ತೆರಳಿ ನೆಮ್ಮದಿಯಿಂದ ಕ್ಯೂ ನಿಂತು ದೇವರ ದರ್ಶನ ಪಡೆದರು.