ಮೈಸೂರು:ಕೊರೊನಾ ಹಿನ್ನೆಲೆಯಲ್ಲಿ ಭಕ್ತರಿಲ್ಲದೆ ಚಾಮುಂಡಿಬೆಟ್ಟದ ಚಾಮುಂಡೇಶ್ವರಿಗೆ ಆಷಾಢ ಕೊನೆ ಶುಕ್ರವಾರದ ವಿಶೇಷ ಪೂಜೆಗಳು ಸರಳವಾಗಿ ನಡೆದವು. ಪ್ರತಿ ವರ್ಷವೂ ಆಷಾಢ ಶುಕ್ರವಾರದಂದು ಕಿಕ್ಕಿರಿದು ಭಕ್ತರು ನೆರೆಯುತ್ತಿದ್ದರು. ಆದರೆ ಈ ಬಾರಿ ಭಕ್ತರಿಲ್ಲದೆ ದೇಗುಲವು ಭಣಗುಟ್ಟುತ್ತಿತ್ತು.
ಕೊರೊನಾ ಸೋಂಕು ಹರಡುವುದನ್ನು ತಡೆಗಟ್ಟುವ ಉದ್ದೇಶದಿಂದ ಜಿಲ್ಲಾಡಳಿತ ಸಾರ್ವಜನಿಕರ ಪ್ರವೇಶ ನಿರ್ಬಂಧಿಸಿರುವುದರಿಂದ ಭಕ್ತರ ಅನುಪಸ್ಥಿತಿಯಲ್ಲಿ ಪೂಜಾ ವಿಧಿವಿಧಾನಗಳು ನೆರವೇರಿದವು. ದೇವಸ್ಥಾನದ ಆವರಣವನ್ನು ವಿವಿಧ ಬಗೆಯ ಹೂಗಳಿಂದ ಸಿಂಗರಿಸಲಾಗಿ ತ್ತು. ಬೆಳಗ್ಗೆ ೫.೩೦ಕ್ಕೆ ದೇವಾಲಯದ ಪ್ರಧಾನ ಆಗಮಿಕ ಡಾ.ಎನ್.ಶಶಿಶೇಖರ್ ದೀಕ್ಷಿತ್ ನೇತೃತ್ವದಲ್ಲಿ ತಾಯಿ ಚಾಮುಂಡೇಶ್ವರಿಗೆ ಮಹಾನ್ಯಾಸ ಪೂರ್ವಕ ಅಭಿಷೇಕ, ರುದ್ರಾಭಿಷೇಕ, ಅರ್ಚನೆ ಸೇರಿದಂತೆ ನಾನಾ ಧಾರ್ಮಿಕ ಕೈಂಕರ್ಯಗಳನ್ನು ನಡೆಸಿದರು.
ಚಾಮುಂಡಿಬೆಟ್ಟಕ್ಕೆ ಸಾರ್ವಜನಿಕರಿಗೆ ಪ್ರವೇಶ ಇಲ್ಲದಿದ್ದರೂ ಕಳೆದ ವಾರ ಸಾರ್ವಜನಿಕರು ದೇವಸ್ಥಾನಕ್ಕೆ ತೆರಳುವ ಪ್ರಯತ್ನ ಮಾಡಿದ್ದರು. ಈ ಬಾರಿ ಚಾಮುಂಡಿಬೆಟ್ಟದ ಪಾದದವರೆಗೆ ತೆರಳಲು ಅವಕಾಶ ಮಾಡಿಕೊಡಲಾಗಿತ್ತು. ಹೀಗಾಗಿ ಭಕ್ತರು ಪಾದದಲ್ಲಿಯೇ ಪೂಜೆ ಸಲ್ಲಿಸಿ ಹಿಂತಿರುಗಿದರು. ಚಾಮುಂಡಿಬೆಟ್ಟಕ್ಕೆ ತೆರಳದಂತೆ ಎಲ್ಲೆಡೆಯೂ ನಿರ್ಬಂಧ ಹೇರಿದ್ದರಿಂದ ಭಕ್ತರು ಅತ್ತ ಮುಖ ಮಾಡಲಿಲ್ಲ..