ಮೈಸೂರು: ನಾಡಿನ ಅಧಿದೇವತೆ ಚಾಮುಂಡೇಶ್ವರಿ ಅಮ್ಮನವರ ಸನ್ನಿಧಿಯಲ್ಲಿ ಪ್ರತಿ ಆಷಾಢ ಮಾಸದ ಕಡೇ ಶುಕ್ರವಾರದ ವಿಶೇಷ ಪೂಜೆಗೆ ಸಾವಿರಾರು ಸಂಖ್ಯೆಯಲ್ಲಿ ಭಕ್ತರು ನೆರೆದು ದೇವಿಯ ದರ್ಶನ ಪಡೆದರು.
ಕಡೇ ಶುಕ್ರವಾರದ ಅಂಗವಾಗಿ ಅಮ್ಮನವರಿಗೆ ಅಭಿಷೇಕ, ವಿಶೇಷ ಅಲಂಕಾರ ಮಾಡಲಾಗಿತ್ತು. ಎಂದಿನಂತೆ ಮುಂಜಾನೆಯಿಂದಲೇ ಸರತಿ ಸಾಲಿನಲ್ಲಿ ನಿಂತು ಭಕ್ತರು ಅಮ್ಮನವರ ದರ್ಶನ ಪಡೆದರು. ಮುಂಜಾನೆ 3.30ಕ್ಕೆ ಚಾಮುಂಡೇಶ್ವರಿಗೆ ಅಭಿಷೇಕ, ಕುಂಕುಮಾರ್ಚನೆ, ಮಂಗಳಾರತಿ ಸೇರಿದಂತೆ ಧಾಕ ಕೈಂಕರ್ಯಗಳು ನಡೆದು, ನಂತರ 5.30ರಿಂದ ದೇವಿ ದರ್ಶನಕ್ಕೆ ಭಕ್ತರಿಗೆ ಅವಕಾಶ ಕಲ್ಪಿಸಲಾಯಿತು. ಶಶಿಶೇಖರ್ ದೀಕ್ಷಿತ್ ನೇತೃತ್ವದಲ್ಲಿ ಅರ್ಚಕರು ದೇವಿಗೆ ಪಂಚಾಮೃತ ಅಭಿಷೇಕ ನೆರವೇರಿಸಿ ವಿಶೇಷವಾಗಿ ದೇವಿಯ ಮೂರ್ತಿಗೆ ವಿಶೇಷ ವಾಹನ ಅಲಂಕಾರ ಮಾಡಲಾಗಿತ್ತು.
ಪೊಲೀಸ್ ಬಂದೋಬಸ್ತ್:
ಕಡೇ ಆಷಾಢ ಶುಕ್ರವಾರಕ್ಕೆ ಭಕ್ತ ಸಾಗರವೇ ಹರಿದು ಬರುವುದರಿಂದ ಎಂದಿನಂತೆ ಚಾಮುಂಡಿ ಬೆಟ್ಟದಲ್ಲಿ ವ್ಯಾಪಕ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿತ್ತು. ಸರತಿ ಸಾಲಿನಲ್ಲಿ ನಿಂತಿದ್ದ ಭಕ್ತರು ಬಿಸಿಲಿನ ತಾಪ ತಾಳಲಾರದೆ ಬ್ಯಾರಿಕೇಡ್ ತಳ್ಳಿ ದೇವಾಲಯ ಪ್ರವೇಶ ದ್ವಾರಕ್ಕೆ ಬರುತ್ತಿದ್ದರು. ಇದರಿಂದ ಎಚ್ಚೆತ್ತ ಪೊಲೀಸರು, ಒಳನುಸುಳದಂತೆ ತಡೆದು ಜನರನ್ನು ವಾಪಸ್ ಕಳುಹಿಸಿದರು.
ನಟ, ನಿರ್ದೇಶಕ ಪವನ್ ಒಡೆಯರ್, ಹಾಗೂ ಚಿತ್ತನಟಿ ಪ್ರೇಮಾ, ಮತ್ತು ಚಾಲೆಂಜಿಗ್ ಸ್ಟಾರ್ ದರ್ಶನ್ ಕೂಡ ಚಾಮುಂಡಿಬೆಟ್ಟಕ್ಕೆ ಭೇಟಿ ನೀಡಿ ಚಾಮುಂಡೇಶ್ವರಿ ದರ್ಶನ ಪಡೆದರು. ಬೆಟ್ಟಕ್ಕೆ ಬಂದು ದೇವಿ ದರ್ಶನ ಪಡೆದರೆ ನನಗೆ ವಿಶೇಷ ಶಕ್ತಿ ಬರಲಿದೆ. ಈ ಬಾರಿ ಕಡೇ ಆಷಾಢ ಶುಕ್ರವಾರಕ್ಕೆ ಬಂದು ಚಾಮುಂಡಿ ದರ್ಶನ ಪಡೆದಿದ್ದು, ಸಂತಸ ತಂದಿದೆ ಎಂದು ಚಿತ್ರನಟಿ ಪ್ರೇಮಾ ಹಾಗೂ ದರ್ಶನ್ ಹೇಳಿದರು. ದರ್ಶನ್ ನೋಡಲು ಅಭಿಮಾನಿಗಳ ನೂಕನುಗ್ಗಲು ಶುರುವಾಯಿತು. ಪೋಲಿಸರಿಗೆ ಅಭಿಮಾನಿಗಳನ್ನು ನಿಯಂತ್ರಿಸಲು ಹರಸಾಹಸ ಪಡಬೇಕಾಯಿತು.