ಮೈಸೂರು: ಮನೆ ಕಳ್ಳತನ ಮಾಡಿದ್ದ ಆರೋಪಿಗಳಿಬ್ಬರನ್ನು ಬಂಧಿಸುವಲ್ಲಿ ಮಂಡಿ ಠಾಣೆಯ ಪೊಲೀಸರು, ಯಶಸ್ವಿ ಆಗಿದ್ದು ಬಂಧಿತ ಆರೋಪಿಗಳಿಂದ 8 ಲಕ್ಷ ರೂ.ಮೌಲ್ಯದ ಚಿನ್ನಾಭರಣದ ಮತ್ತು ಗೃಹಪಯೋಗಿ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ.
ಬಂಧಿತರನ್ನು ಇಲ್ಲಿನ ಅಜೀಜ್ ಸೇಠ್ ನಗರದ ನಿವಾಸಿ ಮುಜ್ಜು ಅಹಮ್ಮದ್ ಅಲಿಯಾಸ್ ಮುಜ್ಜು (35), ಮುಜಾಮಿಲ್ ಅಹಮ್ಮದ್ ಅಲಿಯಾಸ್ ಬಾಬು (40) ಎಂದು ಗುರುತಿಸಲಾಗಿದ್ದು ಇವರು ಕಳೆದ ಡಿಸೆಂಬರ್ 18 ರಂದು ರಾತ್ರಿ ಮಂಡಿ ಪೊಲೀಸ್ ಠಾಣಾ ಸರಹದ್ದಿನ ಲಷ್ಕರ್ ಮೊಹಲ್ಲದ ಮನೆಯೊಂದರ ಬಾಗಿಲನ್ನು ಮುರಿದು ಚಿನ್ನ, ಡೈಮಂಡ್, ಪ್ಲಾಟಿನಂ ಆಭರಣಗಳು ಮತ್ತು ಗೃಹೋಪಯೋಗಿ ವಸ್ತುಗಳನ್ನು ಕಳ್ಳತನ ಮಾಡಿದ್ದರು.
ಈ ಸಂಬಂಧ ಮಂಡಿ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ತನಿಖೆ ಕೈಗೊಂಡ ಮಂಡಿ ಠಾಣಾ ಪೊಲೀಸರು ಪ್ರಕರಣದಲ್ಲಿ ದೊರೆತ ಸುಳಿವುಗಳ ಆಧಾರದ ಮೇರೆಗೆ ಕಳೆದ 8 ವರ್ಷಗಳಿಂದ ನ್ಯಾಯಾಲಯಕ್ಕೆ ಹಾಜರಾಗದೇ ತಲೆಮರೆಸಿಕೊಂಡಿದ್ದ ಹಳೆಯ ಕಳವು ಪ್ರಕರಣದ ಈ ಇಬ್ಬರು ಆರೋಪಿಗಳನ್ನು ವಶಕ್ಕೆ ಪಡೆದು ವಿಚಾರಣೆ ಮಾಡಲಾಗಿ, ಇವರುಗಳು ಲಷ್ಕರ್ ಮೊಹಲ್ಲಾದ ಮನೆಯಲ್ಲಿ ಕಳ್ಳತನ ಮಾಡಿರುವ ಬಗ್ಗೆ ಬಾಯಿ ಬಿಟ್ಟಿದ್ದಾರೆ. ಆರೋಪಿಗಳಿಂದ ರೂ. 8 ಲಕ್ಷ ಬೆಲೆ ಬಾಳುವ 225 ಗ್ರಾಂ ತೂಕದ ಚಿನ್ನದ ಆಭರಣಗಳು, ಡೈಮಂಡ್ ಮತ್ತು ಪ್ಲಾಟಿನಂ ಆಭರಣಗಳು ಹಾಗೂ ಗೃಹೋಪಯೋಗಿ ವಸ್ತುಗಳಾದ ಎಲ್.ಸಿ.ಡಿ ಟಿವಿ, ಸೆಟಪ್ ಬಾಕ್ಸ್, ಡಿವಿಡಿ ಪ್ಲೆಯರ್ ಹಾಗೂ ಕೃತ್ಯಕ್ಕೆ ಬಳಸಿದ್ದ ಮಾರುತಿ 800 ಕಾರನ್ನು ವಶಪಡಿಸಿಕೊಂಡಿದ್ದಾರೆ.
ಡಿಸಿಪಿ ಗೀತಪ್ರಸನ್ನ, ನರಸಿಂಹರಾಜ ವಿಭಾಗದ ಎಸಿಪಿ ಶಿವಶಂಕರ್ ಮಾರ್ಗದರ್ಶನದಲ್ಲಿ ಪೊಲೀಸರು ಕಾರ್ಯಾಚರಣೆ ನಡೆಸಿದ್ದರು.