ಮೈಸೂರು : ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ದಿನಾಂಕ ೧೬ ರಂದು ಪ್ರಾರಂಭವಾದ ಅಭಿವ್ಯಕ್ತಿ ಕಲಾ ಮತ್ತು ಸಾಂಸ್ಕೃತಿಕ ಕೇಂದ್ರದ ವಾರ್ಷಿಕ ಕಾರ್ಯಕ್ರಮ ಅಭಿವ್ಯಕ್ತಿ ಹಬ್ಬ ನಿನ್ನೆಯ ದಿನ ನವೋಲ್ಲಾಸ ಕಾರ್ಯಕ್ರಮದೊಂದಿಗೆ ಮುಕ್ತಾಯಗೊಂಡಿತು.
ಮೊದಲ ದಿನ ನಡೆದ ನೃತ್ಯೋಲ್ಲಾಸ ಕಾರ್ಯಕ್ರಮದಲ್ಲಿ ನಾಡಿನ ಹೆಸರಾಂತ ನೃತ್ಯಕಲಾವಿದೆಯರಾದ ವಿ. ಪ್ರತಿಭಾ ರಾಮಸ್ವಾಮಿ ಮತ್ತು ವಿ.ಕರುಣಸಾಗರಿ ಅವರು ಅಮೋಘವಾದ ನೃತ್ಯ ಪ್ರದರ್ಶನ ನೀಡಿ ಕಲಾರಸಿಕರ ಮನಸೂರೆಗೊಳಿಸಿದರು.
ಈ ವೇಳೆ ಮೈಸೂರಿನ ಹಿರಿಯ ಗಮಕಿಗಳಾದ ಕೃ.ರಾಮಚಂದ್ರ ಅವರು ಕಾರ್ಯಕ್ರಮವನ್ನು ಉದ್ಘಾಟಿಸಿದರು. ಕಲಾ ಪೋಷಕ ಶ್ರೀ ಹಿಮಾಂಶು ಅವರು ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.
ಎರಡನೆಯ ದಿನದ ನವೋಲ್ಲಾಸ ಕಾರ್ಯಕ್ರಮದಲ್ಲಿ ಅಭಿವ್ಯಕ್ತಿಯ ವಿದ್ಯಾರ್ಥಿನಿಯರು ಮತ್ತು ಅಭಿವ್ಯಕ್ತಿಯ ನಿರ್ದೇಶಕಿ ವಿ. ಸುಹಾಸಿನಿ ಕೌಲಗಿ ಅವರು ಪ್ರದರ್ಶಿಸಿದ ಎರಡೂವರೆ ತಾಸಿನ ಕಾರ್ಯಕ್ರಮ ನೋಡುಗರ ಮನಮುಟ್ಟಿತು.
ವಿ, ಸುಹಾಸಿನಿ ಅವರು ನೃತ್ಯ ಸಂಯೋಜನೆ ಮಾಡಿದ ನರ್ತಿಸಿದ ಅಷ್ಟಪದಿಯು ಕಾರ್ಯಕ್ರಮದ ಪ್ರಮುಖ ಆಕರ್ಷಣೆಯಾಯಿತು. ಮುಖ್ಯ ಅತಿಥಿಗಳಾಗಿ ಮೈಸೂರಿನ ಹಿರಿಯ ನೃತ್ಯ ಕಲಾವಿದೆ ತುಳಸಿ ರಾಮಚಂದ್ರ ಮತ್ತು ಕೊಯಮತ್ತೂರಿನ ಪ್ರಸಿದ್ಧ ನೃತ್ಯ ಕಲಾವಿದೆ ಕರುಣಸಾಗರಿ ಆಗಮಿಸಿದ್ದರು.