ಮೈಸೂರು: ಸಾಮಾಜಿಕ ಜಾಲತಾಣದಲ್ಲಿ ಐಎಎಸ್-ಐಪಿಎಸ್ ಅಧಿಕಾರಿಗಳ ಫ್ಯಾನ್ಸ್ ಪೇಜ್ ನಿಷೇಧಕ್ಕೆ ಮೈಸೂರು ಸಂಸದ ಪ್ರತಾಪಸಿಂಹ ಒತ್ತಾಯಿಸಿದ್ದಾರೆ.
ಸಂಸದ ಪ್ರತಾಪಸಿಂಹ ಮೈಸೂರಿನ ಹಿಂದಿನ ಜಿಲ್ಲಾಧಿಕಾರಿ, ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ ವಿರುದ್ಧದ ವಾಕ್ ಸಮರವನ್ನು ಮತ್ತೊಂದು ಮಜಲಿಗೆ ತೆಗೆದುಕೊಂಡು ಹೋಗಿದ್ದಾರೆ.
ಈ ಸಂಬಂಧ ಸರ್ಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ರಮಣ ರೆಡ್ಡಿಗೆ ಪ್ರತಾಪ್ ಸಿಂಹ ಮನವಿ ಮಾಡಿಕೊಂಡಿದ್ದು, ಐಎಎಸ್ ಮತ್ತು ಐಪಿಎಸ್ ಅಧಿಕಾರಿಗಳು ಏನೂ ಕೆಲಸ ಮಾಡದಿದ್ದರೂ ಸಾಮಾಜಿಕ ಜಾಲತಾಣಗಳಲ್ಲಿ ಹೆಚ್ಚಾಗಿ ಬಿಂಬಿಸಿಕೊಳ್ಳುತ್ತಿದ್ದಾರೆ. ಇದಕ್ಕೆ ಕಡಿವಾಣ ಹಾಕಬೇಕು. ಬೇಕಿದ್ದರೆ ಅಧಿಕಾರಿಗಳು ಮಾಡಿದ ಕೆಲಸಗಳನ್ನ ಜಿಲ್ಲೆಯ ಖಾತೆಯಿಂದ ಒಂದು ಅಕೌಂಟ್ ತೆರೆದು ಅದರಲ್ಲಿ ಮಾಹಿತಿ ಹಾಕಲಿ ಎಂದು ಮನವಿಯಲ್ಲಿ ಉಲ್ಲೇಖಿಸಿದ್ದಾರೆ.
ಐಎಎಸ್ ಮತ್ತು ಐಪಿಎಸ್ ಅಧಿಕಾರಿಗಳ ಪರ ಸಾಮಾಜಿಕ ಜಾಲತಾಣದ ಫ್ಯಾನ್ಸ್ ಫೇಜ್ ಗಳಿಂದ ಹೊಗಳಿಕೆಗಳು ಸೃಷ್ಟಿಯಾಗುತ್ತಿವೆ. ಯಾರೋ ಒಬ್ಬ ಲಾಠಿ ಹಿಡಿದು ಓಡಾಡಿದ್ರೆ ಹಾಗೆ-ಹೀಗೆ ಅಂತೆಲ್ಲಾ ಬಿಂಬಿಸಲಾಗ್ತಿದೆ. ಐಎಎಸ್, ಐಪಿಎಸ್ ಅಧಿಕಾರಿಗಳು ಉತ್ತಮ ಕೆಲಸಗಳನ್ನ ಮಾಡಬೇಕು ಎಂದು ಸಂಸದ ಪ್ರತಾಪಸಿಂಹ ಹೇಳಿದ್ದಾರೆ.