ದಕ್ಷಿಣ ಕನ್ನಡ : ಸುಮಾರು 16 ವರ್ಷಗಳ ಬಳಿಕ ಇದೇ ಮುಂಗಾರು ಮಳೆ ನಿಗದಿತ ಸಮಯಕ್ಕಿಂತ ಮೊದಲೆ ದೇಶಕ್ಕೆ ಪ್ರವೇಶವಾಗಲಿದೆ. ಕೇರಳಕ್ಕೆ ನೈಋತ್ಯ ಮಾನ್ಸೂನ್ ಮಳೆ ಮೇ 27ರಂದು ಪ್ರವೇಶಿಸುವ ಸಾಧ್ಯತೆ ಇದೆ ಎಂದು ಭಾರತೀಯ ಹವಾಮಾನ ಇಲಾಖೆ (ಐಎಂಡಿ) ಮುನ್ಸೂಚನೆ ನೀಡಿದೆ.
ವಾಡಿಕೆಯಂತೆ ಜೂನ್ 1ರಂದು ಮಳೆ ಕೇರಳಕ್ಕೆ ಕಾಲಿಡುತ್ತದೆ. ಆದರೆ ಈ ಬಾರಿ 5 ದಿನ ಮುಂಚಿತವಾಗಿ ಪ್ರವೇಶಿಸುವ ಸಾಧ್ಯತೆಯಿದೆ ಎಂದು ಇಲಾಖೆ ತಿಳಿಸಿದೆ. ಮಳೆ ಕೇರಳವನ್ನು ಪ್ರವೇಶಿಸಿದ ನಂತರ ಭಾರತದ ಮುಖ್ಯ ಭೂಭಾಗದ ಮೇಲೆ ಮಳೆಯ ಆಗಮನವನ್ನು ಅಧಿಕೃತವಾಗಿ ಘೋಷಿಸಲಾಗುತ್ತದೆ.
ಸಾಮಾನ್ಯವಾಗಿ, ನೈಋತ್ಯ ಮಾನ್ಸೂನ್ ಜೂನ್ 1ರ ವೇಳೆಗೆ ಕೇರಳಕ್ಕೆ ಕಾಲಿಟ್ಟು, ಜುಲೈ 8ರ ವೇಳೆಗೆ ಇಡೀ ದೇಶವನ್ನು ಆವರಿಸುತ್ತದೆ. ಕೇರಳಕ್ಕೆ ಮುಂಗಾರ ಮಳೆ ಆಗಮಿಸಿದ ಒಂದು ಅಥವಾ ಎರಡು ದಿನಗಳ ಅಂತರದಲ್ಲಿ ಕರ್ನಾಟಕದ ಕರಾವಳಿಯಲ್ಲಿ ಮುಂಗಾರು ಮಳೆ ಆಗಮನವಾಗಲಿದೆ.

