ಮಂಗಳೂರು: ಮಂಗಳೂರು ರಸ್ತೆಯಲ್ಲೇ ನಮಾಜ್ ಮಾಡಿದ ಪ್ರಕರಣ ದಿನದಿಂದ ದಿನಕ್ಕೆ ತಿರುವು ಪಡೆದುಕೊಳ್ಳುತ್ತಿದೆ. ಈ ಕೇಸ್‌ ಬಗ್ಗೆ ಇಂದು ನಗರದಲ್ಲಿ ಮಾಜಿ ಸಚಿವ ರಮನಾಥ್ ರೈ ಪ್ರತಿಕ್ರಿಯೆ ನೀಡಿದ್ದಾರೆ.

ಇದೊಂದು ಅನಗತ್ಯವಾದ ವಿಚಾರ. ನಮಗೆ ದೇವರು ಒಬ್ಬನೇ. ನಿಮ್ಮ ದೇವರು ಬೇರೆ ನಮ್ಮ ದೇವರು ಬೇರೆ ಅಲ್ಲ. ಮಸೀದಿಯಲ್ಲಿ ಸ್ಥಳಾವಕಾಶ ಕೊರತೆಯಿತ್ತು.

ಹಿಂದೂ ಮುಸ್ಲಿಂ ಕ್ರಿಶ್ಚಿಯನ್ ಕಾರ್ಯಕ್ರಮ ಆಗುತ್ತೆ. ಸಣ್ಣ ಸಮಸ್ಯೆಯನ್ನು ಇಷ್ಟೊಂದು ರಂಪಾಟ ಮಾಡಿದ್ದು ಸರಿಯಲ್ಲ. ಅಲ್ಪಸಂಖ್ಯಾತ ಮತೀಯವಾದ ಬಹುಸಂಖ್ಯಾತ ಮತೀಯವಾದವನ್ನು ಕಾಂಗ್ರೆಸ್ ಒಪ್ಪಲ್ಲ. ಏನೋ ಒಂದು ಸಂದರ್ಭದಲ್ಲಿ ಈ ಪ್ರಕರಣ ಆಗಿದೆ. ಅದನ್ನು ಸರಿ ಮಾಡಿಕೊಂಡು ರದ್ದುಗೊಳಿಸುವುದನ್ನು ಮಾಡಲಾಗಿದೆ.

ಈ ಹಿಂದೆ ಈ ರೀತಿಯಾಗಿ ಸುಮೋಟೊ ಪ್ರಕರಣ ಆಗಿಲ್ಲ. ಇದಕ್ಕಿಂತ ದೊಡ್ಡ ಪ್ರಚೋದನಕಾರಿ ಮಾತುಗಳನ್ನು ಈ ಜಿಲ್ಲೆಯಲ್ಲಿ ಮಾತನಾಡಿದ್ದಾರೆ. ಮಸೀದಿಯಲ್ಲಿ ಜಾಗ ಇಲ್ಲದಾಗ ಹೊರಗೆ ಬಂದಿದ್ದನ್ನು ದೊಡ್ಡದು ಮಾಡಲಾಗಿದೆ. ಇದು ಅಲ್ಲಲ್ಲಿ ಬಗೆಹರಿಸಬೇಕಾದ ವಿಚಾರ. ಮತೀಯ ಸಾಮರಸ್ಯಕ್ಕೆ ತೊಂದರೆಯಾಗಿ ಘರ್ಷಣೆ ಆಗಬೇಕೆಂದು ಈ ರೀತಿ ಮಾಡಲಾಗಿದೆ ಎಂದು ಮಾಜಿ ಸಚಿವ ರಮನಾಥ್ ರೈ ಹೇಳಿಕೆ ನೀಡಿದ್ದಾರೆ.