ಮಂಗಳೂರು: ದ.ಕ. ಜಿಲ್ಲೆಯ ಮಂಗಳೂರು ಸಹಿತ ಕೆಲವೆಡೆ ಹಳದಿ ಕಾಮಾಲೆ (ಹೆಪಟೈಟಿಸ್ ಎ ಮತ್ತು ಇ) ಪ್ರಕರಣಗಳು ಕಳೆದೊಂದು ತಿಂಗಳಿನಿಂದ ಹೆಚ್ಚಳ ಆಗುತ್ತಿವೆ. ಹಾಗಾಗಿ ಜನರೂ ಎಚ್ಚರಿಕೆ ವಹಿಸಬೇಕು ಎಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ| ಎಚ್.ಆರ್. ತಿಮ್ಮಯ್ಯ ಹೇಳಿದ್ದಾರೆ.
ಜೂನ್ 23ರಿಂದ ಜುಲೈ 9ರವರೆಗಿನ ಕೇವಲ ಎರಡು ವಾರಗಳ ಅವಧಿಯಲ್ಲಿಯೇ 19 ಹೊಸ ಪ್ರಕರಣಗಳು ಪತ್ತೆಯಾಗಿರುವುದು ಜಿಲ್ಲಾ ಆರೋಗ್ಯ ಇಲಾಖೆಯನ್ನು ಎಚ್ಚೆತ್ತುಕೊಳ್ಳುವಂತೆ ಮಾಡಿದೆ.
ಮಂಗಳೂರಿನ ಡೋಂಗರಕೇರಿ, ಅಳಕೆ ಮತ್ತು ಕುದ್ರೋಳಿ ಸುತ್ತಮುತ್ತಲಿನ ಎರಡು ವಾರ್ಡ್ಗಳಲ್ಲಿ ಈ ಸೋಂಕು ಪ್ರಮುಖವಾಗಿ ಕಾಣಿಸಿಕೊಂಡಿದ್ದು, ಇಲಾಖೆ ಯುದ್ಧೋಪಾದಿಯಲ್ಲಿ ನಿಯಂತ್ರಣ ಕ್ರಮಗಳನ್ನು ಕೈಗೊಳ್ಳುತ್ತಿದೆ.
ಕಾಮಾಲೆ ನಿಯಂತ್ರಣಕ್ಕೆ ಮುನ್ನೆಚ್ಚರಿಕೆ ಕ್ರಮಗಳು
-ಆಹಾರ ಸೇವಿಸುವ ಮೊದಲು ಮತ್ತು ಶೌಚಾಲಯ ಬಳಕೆ ಬಳಿಕ ಸಾಬೂನಿನಿಂದ ಕೈಗಳನ್ನು ಚೆನ್ನಾಗಿ ತೊಳೆದುಕೊಳ್ಳಬೇಕು.
-ತಾಜಾ ಹಾಗೂ ಸ್ವತ್ಛವಾಗಿ ತಯಾರಿಸಿದ ಆಹಾರಗಳನ್ನು ಸೇವಿಸಬೇಕು.
-ಬೀದಿ ಬದಿಯ ಪರಿಸರದಲ್ಲಿ ತಯಾರಿಸಿದ ಆಹಾರ ಸೇವಿಸುವುದನ್ನು ತಪ್ಪಿಸಬೇಕು.
-ಹೆಪಟೈಟಿಸ್- ಇ ಸೋಂಕು ಗರ್ಭಿಣಿಯರಲ್ಲಿ ತೀವ್ರ ಸ್ವರೂಪ ಪಡೆಯುವ ಕಾರಣ ಹೆಚ್ಚು ಮುಂಜಾಗ್ರತೆ ವಹಿಸಿ ವೈದ್ಯಕೀಯ ಸಲಹೆ ಪಾಲಿಸಬೇಕು ಎಂದು ಜಿಲ್ಲಾ ಆರೋಗ್ಯಾಧಿಕಾರಿ ಸಲಹೆ ನೀಡಿದ್ದಾರೆ.

