ಮಂಗಳೂರು: 1971 ರ ಭಾರತ ಪಾಕ್ ಯುದ್ಧದಲ್ಲಿ ಭಾಗವಹಿಸಿದ ಯುದ್ಧ ವೀರ ಗರೊಡಿ ತಿಮ್ಮಪ್ಪ ಆಳ್ವ ಮಂಗಳೂರಿನ  ಲೋಹಿತ್ ನಗರದ ತನ್ನ ನಿವಾಸದಲ್ಲಿ ನಿಧನ ಹೊಂದಿದರು. ಅವರಿಗೆ 85 ವರ್ಷ ವಯಸ್ಸಾಗಿತ್ತು.

ಇತ್ತೀಚೆಗೆ ಅವರ ಅನುಭವ ಕಥನ ಗರೋಡಿ ಮನೆಯಿಂದ ಸೇನಾ ಗರಡಿಗೆ ಪ್ರಕಟವಾಗಿತ್ತು. ತುಳುನಾಡಿನ ಕ್ರಷಿ ಕುಟುಂಬವೊಂದರಲ್ಲಿ ಜನಿಸಿದ ಯುವಕ ದೇಶಕಾಯುವ ಸೈನಿಕನಾಗಿ 1971ರ ಯುದ್ಧದಲ್ಲಿ ಹೆಲಿಕಾಫ್ಟರ್ ನಲ್ಲಿ ಯುದ್ಧ ಶಿಬಿರಕ್ಕೆ ಪ್ರಯಾಣಿಸುವ ವೇಳೆ ಪಾಕ್ ಸೈನಿಕರ ಫಿರಂಗಿ ದಾಳಿಗೆ ತುತ್ತಾಗಿ ಚಿತ್ತಗಾಂಗ್ ಪ್ರದೇಶದ ಕಾಡಿನಲ್ಲಿ ಬಿದ್ದು  ಜೀವನ್ಮರಣ ಹೋರಾಟ ನಡೆಸಿ ಬದುಕಿ ಉಳಿದ ಅನುಭವ ಕಥನ  ಕಿರು ಪುಸ್ತಕವಾಗಿ ಪ್ರಕಟವಾಗಿದೆ.

1971ರ ಭಾರತ -ಪಾಕ್ ಯುದ್ಧದಲ್ಲಿ , ಭಾರತ ಜಗತ್ತು ಬೆರಗಾಗುವ  ರೀತಿಯಲ್ಲಿ ಜಯ ಗಳಿಸಿತು. ದೇಶದ ಅಂದಿನ ಪ್ರಧಾನಿ ಶ್ರೀಮತಿ ಇಂದಿರಾಗಾಂಧಿಯವರ ದಿಟ್ಟ  ನಿರ್ಧಾರ,  ಅಂತಾರಾಷ್ಟ್ರೀಯ ಸಂಬಂಧಗಳನ್ನು ನಿಭಾಯಿಸಿದ ಚಾಣಾಕ್ಷತೆ,  ಸೇನಾ ದಂಡನಾಯಕ ಮಾಣಿಕ್ ಶಾ ರೂಪಿಸಿದ ಯುದ್ಧ ತಂತ್ರ  ಜೊತೆಗೆ ಸಾವಿರಾರು ಭಾರತೀಯ ಸೇನಾ ಜವಾನರ ಬಲಿದಾನದಿಂದ  ವಿಶ್ವದ ಎದುರು ಪ್ರಜಾಪ್ರಭುತ್ವ  ಭಾರತ ದೇಶ ತನ್ನ ಅಂತಾರಾಷ್ಟ್ರೀಯ ಬದ್ದತೆ ಮತ್ತು ನಾಯಕತ್ವವನ್ನು ಸ್ಪಷ್ಟಪಡಿಸಲು ಸಾಧ್ಯಮಾಡಿಸಿದ ಯುದ್ಧ ಅದು.  ಪಾಕ್ ವಿರುದ್ಧದ ಮೂರೂ ಯುದ್ಧದಲ್ಲಿ ಭಾಗವಹಿಸಿದ್ದ ಹಿರಿಮೆ ಜಿ ಟಿ ಆಳ್ವರದ್ದು.