ಮಂಗಳೂರು : ಕಳೆದ ಹಲವು ದಿನದಿಂದ ಸುರಿದ ಭಾರೀ ಮಳೆಯಿಂದಾಗಿ ರಾ.ಹೆ.66ರ ಕೆಐಒಸಿಎಲ್ ಜಂಕ್ಷನ್ ಮತ್ತು ಕೂಳೂರು ಕಮಾನು ಸೇತುವೆಯ ನಡುವಿನ ಸಂಪರ್ಕದ ರಸ್ತೆ ಸಂಪೂರ್ಣ ಹಾನಿಯಾಗಿದೆ.

ಅದನ್ನು ದುರಸ್ತಿಪಡಿಸುವ ಸಲುವಾಗಿ ಜು.21ರ ರಾತ್ರಿ 8ರಿಂದ 24ರವರೆಗೆ ಬೆಳಗ್ಗೆ 8ರವರೆಗೆ ಈ ಸೇತುವೆಯಲ್ಲಿ ವಾಹನಗಳ ಸಂಚಾರ ಸ್ಥಗಿತಗೊಳಿಸಲು ಎನ್‌ಎಚ್‌ಎಐ ಮುಂದಾಗಿದೆ. ಈ ರಸ್ತೆಯು ಸಾರ್ವಜನಿಕರ, ವಾಹನಿಗರ ಓಡಾಟಕ್ಕೆ ತೊಡಕಾಗಿದೆ.

ಆಗಾಗ ಸಣ್ಣಪುಟ್ಟ ದುರಸ್ತಿ ಕೈಗೊಳ್ಳಲಾಗಿದ್ದರೂ ನಿರಂತರ ಮಳೆಯಿಂದಾಗಿ ರಸ್ತೆ ಮತ್ತೆ ಮತ್ತೆ ಹಾಳಾಗುತ್ತಿದೆ. ಸದ್ಯ ಡಾಮಾರೀಕರಣ ಅಸಾಧ್ಯವಾದ ಕಾರಣ ಪೇವರ್ ಬ್ಲಾಕ್‌ಗಳನ್ನು ಸರಿಪಡಿಸಲು ಮುಂದಾಗಿದೆ. ಹಾಗಾಗಿ ಸಾರ್ವಜನಿಕರು, ವಾಹನಿಗರು ಸಹಕರಿಸಬೇಕು ಎಂದು ಎನ್‌ಎಚ್‌ಎಐ ಮನವಿ ಮಾಡಿದೆ.