ಮಂಗಳೂರು : “ರಂಗಭೂಮಿಯ ಬಗ್ಗೆ ಸಮಾಜದಲ್ಲಿ ಗೌರವದ ಮನೋಭಾವ ಹೆಚ್ಚುತ್ತಿದೆ. ಮಕ್ಕಳು ಮತ್ತು ಯುವಕರು ನಾಟಕದಲ್ಲಿ ಅಭಿನಯಿಸಲು ತೋರಿಸುತ್ತಿರುವ ಆಸಕ್ತಿ ಅಶಾದಾಯಕ. ರಂಗಾಸಕ್ತರನ್ನು ಕಲಾವಿದರನ್ನಾಗಿ ಬೆಳೆಸಲು ಮಂಗಳೂರಿನಲ್ಲಿ ರಂಗ ತರಬೇತಿ ಕೇಂದ್ರವೊಂದನ್ನು ತೆರೆಯುವ ಸಿದ್ಧತೆ ನಡೆದಿದೆ,” ಎಂದು ನಟ, ನಿರ್ದೇಶಕ ಡಾ. ದೇವದಾಸ್ ಕಾಪಿಕಾಡ್ ತಿಳಿಸಿದರು.

ನಗರದ ಪತ್ರಿಕಾ ಭವನದಲ್ಲಿ ಮಂಗಳವಾರ ಮಂಗಳೂರು ಪ್ರೆಸ್‌ಕ್ಲಬ್‌ ಆಯೋಜಿಸಿದ್ದ ಗೌರವ ಅತಿಥಿ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು, ಮುಂದಿನ ವರ್ಷದಿಂದ ಕೇಂದ್ರ ಕಾರ್ಯಾರಂಭವಾಗಲಿದೆ. ಬಾಲ್ಯದ ಬಡತನ, ಶಾಲಾ ದಿನಗಳ ಕಲಾಸಕ್ತಿ, ಮಂಗಳೂರಿನ ಸರ್ಕಾರಿ ಕಾಲೇಜಿನಲ್ಲಿ ಪದವಿ ವಿದ್ಯಾಭ್ಯಾಸ ಪಡೆದ ಅನುಭವ, ಬಿ.ವಿ. ಕಿರೋಡಿಯನ್ ಅವರ ಮಾರ್ಗದರ್ಶನ, ಹಾಗೂ ‘ಚಾ ಪರ್ಕ’ ತಂಡದ ಮೂಲಕ ನೀಡಿದ ಶುದ್ಧ ಹಾಸ್ಯನಾಟಕ- ಇವುಗಳ ನೆನಪನ್ನು ಹಂಚಿಕೊಂಡ ಕಾಪಿಕಾಡ್, “ಪ್ರಸ್ತುತ ಪ್ರದರ್ಶನವಾಗುತ್ತಿರುವ ಎನ್ನನೇ ಕಥೆ ನನ್ನ 60ನೇ ನಾಟಕ,” ಎಂದರು.

“ಶಾಲಾ ದಿನಗಳಲ್ಲಿ ಹಿಂದಿ ನಾಟಕವೊಂದರಲ್ಲಿ ದ್ರೋಣನ ಪಾತ್ರ ನನಗೆ ಬಂದಿತ್ತು. ಬಣ್ಣ ಹಚ್ಚಿ ಗಡ್ಡ ಕಟ್ಟಿ ಸಿದ್ಧರಾಗಿದ್ದೆ. ಆದರೆ ಸಮಯದ ಅಭಾವದಿಂದ ನಾಟಕಹ ರದ್ದು. ಗಡ್ಡ ಬಿಚ್ಚಿದಾಗ ಕಣ್ಣಲ್ಲಿ ನೀರು ತುಂಬಿಕೊಂಡಿತ್ತು,” ಎಂದು ಕಾಪಿಕಾಡ್ ತಮ್ಮ ಮೊದಲ ರಂಗಾನುಭವವನ್ನು ಹಂಚಿಕೊಂಡರು.

ಮಂಗಳೂರು ಪ್ರೆಸ್‌ಕ್ಲಬ್ ಅಧ್ಯಕ್ಷ ಪಿ.ಬಿ. ಹರೀಶ್ ರೈ ಅಧ್ಯಕ್ಷತೆ ವಹಿಸಿದ್ದರು. ದ.ಕ. ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶ್ರೀನಿವಾಸ ನಾಯಕ್ ಇಂದಾಜೆ, ಪತ್ರಿಕಾ ಭವನ ಟ್ರಸ್ಟ್ ಅಧ್ಯಕ್ಷ ಆನಂದ ಶೆಟ್ಟಿ, ಮಹಾರಾಷ್ಟ್ರ-ಕನ್ನಡಿಗ ಪತ್ರಕರ್ತರ ಸಂಘದ ಅಧ್ಯಕ್ಷ ರೋನ್ಸ್ ಬಂಟ್ವಾಳ್ ಉಪಸ್ಥಿತರಿದ್ದರು. ಪ್ರೆಸ್‌ಕ್ಲಬ್‌ ಪ್ರಧಾನ ಕಾರ್ಯದರ್ಶಿ ಇಬ್ರಾಹಿಂ ಅಡ್ಕಸ್ಥಳ ವಂದಿಸಿದರು. ಪತ್ರಕರ್ತ ಸಂತೋಷ್ ಮೊಂತೆರೊ ನಿರೂಪಿಸಿದರು.