ಬಂಟ್ವಾಳ: ಅಮಾಯಕ ಪ್ರವಾಸಿಗರನ್ನು ಕರಳು ಹಿಂಡುವ ರೀತಿಯಲ್ಲಿ ಕೊಂದ ಉಗ್ರರ ಕೃತ್ಯವನ್ನು ಸಹಿಸಲು ಸಾಧ್ಯವಿಲ್ಲ,  ಭಯೋತ್ಪಾದನೆ ನಾಶವಾದರೆ ಮಾತ್ರ ಜಗತ್ತಿಗೆ ನೆಮ್ಮದಿ ಸಿಗಬಹುದು ಎಂದು ಪುತ್ತೂರು ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷ  ಡಾ.ಪ್ರಭಾಕರ ಭಟ್‌ ಕಲ್ಲಡ್ಕ ಹೇಳಿದ್ದಾರೆ.

ಜಮ್ಮು ಕಾಶ್ಮೀರದ ಪಹಲ್ಗಾಮ್ ನಲ್ಲಿ ಅಪಾಯಕರ ಮೇಲಿನ ದಾಳಿಯನ್ನು ಖಂಡಿಸಿ ಕಲ್ಲಡ್ಕ ಪೇಟೆಯಲ್ಲಿ ಶುಕ್ರವಾರ ಸಂಜೆ ನಡೆದ ಬೃಹತ್ ಪ್ರತಿಭಟನಾ ಸಭೆಯನ್ನು ಉದ್ದೇಶಿಸಿ ಅವರು ಮಾತನಾಡಿದರು. ಭಯೋತ್ಪಾದನೆ ಮತ್ತು ಮತಾಂತರ ಮಾಡುವವರ ನೀಚ ಕೃತ್ಯಕ್ಕೆ  ತಕ್ಕ ಉತ್ತರ ನೀಡುವುದಕ್ಕೆ ಭಾರತ ದೇಶದಿಂದ ಮಾತ್ರ ಸಾಧ್ಯ ಎಂದ ಅವರು,  ಪ್ರಧಾನಿ ನರೇಂದ್ರ ಮೋದಿಯವರು ತಕ್ಕುದಾದ ಉತ್ತರ ನೀಡಿಯೇ ನೀಡುತ್ತಾರೆ ಎನ್ನುವ ಭರವಸೆ ನಮಗಿದೆ.

ಪಾಕಿಸ್ತಾನದ ಮೇಲೆ ಬಾಂಬ್ ಸಿಡಿಸಿಯಾದರೂ ನಾಶ ಮಾಡುವ ಕಾಲ ಸನ್ನಿಹಿತವಾಗಿದೆ ಎಂದ ಅವರು, ಮೋದಿಯವರು ಪಾಕಿಸ್ತಾನವನ್ನು ನಾಶಮಾಡುವ ಸಂಕಲ್ಪವನ್ನು ಕೈಗೆತ್ತಿಕೊಂಡಿದ್ದಾರೆ,ಇದಕ್ಕೆ ಇಡೀ ದೇಶ ಸಹಕಾರ ನೀಡಬೇಕಾಗಿದೆ, ನಾವೆಲ್ಲರೂ ಒಗ್ಗಟ್ಟಿನಿಂದ ಅವರ ದಿಟ್ಟ ಕ್ರಮಕ್ಕೆ ಕೈ ಜೋಡಿಸುವ ಕಾರ್ಯ ಮಾಡಬೇಕು ಎಂದು ಕರೆ ನೀಡಿದರು.

ಮುಸ್ಲಿಮರು ಬಹುಸಂಖ್ಯೆಯಲ್ಲಿರುವ  ಸ್ಥಳಗಳನ್ನು ಸೂಕ್ಷ್ಮ ಬೂತ್ ಎಂದು ಸರಕಾರವೇ ಘೋಷಣೆ ಮಾಡಿದೆ ಎಂದ ಅವರು, ವಕ್ಫ್ ಕಾರ್ಯಕ್ರಮಕ್ಕೆ ಹೋದ ನೀವುಗಳು ದೇಶಪ್ರೇಮಿಗಳಾ? ಹಿಂದೂಗಳ ಜಾಗವನ್ನು ಅತಿಕ್ರಮಣ ಮಾಡಲು ಹೊರಟ ನಿಮ್ಮನ್ನು ನಾವು ನಂಬಬೇಕಾ? ಧರ್ಮಭೂಮಿ ಕರ್ಮ ಭೂಮಿಯಾದ ಭಾರತದ ದೇಶದಲ್ಲಿ ಹಿಂದುಗಳಿಗೆ ಅನ್ಯಾಯ ಮಾಡಿದರೆ ಯಾರಿಗೂ ಉಳಿಗಾಲವಿಲ್ಲ.ಇದಕ್ಕೆ ಅನೇಕ ‌ನಿದರ್ಶನಗಳಿವೆ. ಹಿಂದೂ ಸಮಾಜ ಎಲ್ಲಿಯಾದರೂ ಮುಸ್ಲಿಂ ಸಮಾಜದ ಮೇಲೆ ಅಕ್ರಮಣ ಮಾಡಿದ ಇತಿಹಾಸ ಇದೆಯಾ?  ಆದರೆ ಅನ್ಯಾಯವಾದಾಗ ಮಾತ್ರ ತಿರುಗಿ ನಿಂತ ಸರಿಯಾದ ಉತ್ತರ ನೀಡಿದ್ದು ಇದೆ, ಮುಂದೆಯೇ ಇರುತ್ತದೆ ಎಂದ ಅವರು, ಹಿಂದೂಗಳ ತಾಳ್ಮೆಯನ್ನು ಕೆಣಕಿ ಪರೀಕ್ಷೆ ಮಾಡಲು ಹೋಗಬೇಡಿ,ಅದರ ಪರಿಣಾಮ ಬೇರೆಯದೇ ರೀತಿಯಲ್ಲಿ ಆಗುತ್ತದೆ ಎಂದರು.

ದೇಶದ ಭದ್ರತೆಯನ್ನು ಬಲಪಡಿಸುವ ನಿಟ್ಟಿನಲ್ಲಿ ಮಾತನಾಡಬೇಕು ಹೊರತು ಸಿದ್ದರಾಮಯ್ಯನ ರೀತಿಯಲ್ಲಿ ದೇಶದ ಗುಪ್ತಚರ ಇಲಾಖೆಯ ಬಗ್ಗೆ ಪ್ರಶ್ನೆ ಮಾಡುವುದು ಸರಿಯಾದ ಕ್ರಮವಲ್ಲ, ಅವರಿಗೆ ಕಾಂಗ್ರೆಸ್ ಪಕ್ಷದ ಪ್ರಮುಖರನ್ನು ಗುಂಡಿಕ್ಕಿ ಕೊಲ್ಲುವಾಗ ಇವರ ಆಡಳಿತ ಪಕ್ಷದ ಅಧಿಕಾರದ ಗುಪ್ತಚರ ಇಲಾಖೆ ಎಲ್ಲಿ ಹೋಗಿತ್ತು? ವಾಲ್ಮೀಕಿ ನಿಗಮದ ಕೋಟ್ಯಾಂತರ ರೂ ಹಣ ದುರ್ಬಳಕೆ ಮಾಡಿದಾಗ ಇವರಿಗೆ ಗೊತ್ತಾಗಿಲ್ಲವಾ? ಎಂದು ಪ್ರಶ್ನಿಸಿದರು.

ಹಿಂದೂ ಸಮಾಜ ಒಗ್ಗೂಡುವ ಕ್ಷಣಬಂದಿದೆ, ಇಲ್ಲಿಯೂ ಬಾಂಗ್ಲಾದೇಶವರು ಇದ್ದಾರೆ, ಭಯೋತ್ಪಾದಕರು ಇದ್ದಾರೆ, ನಮಗೂ ಗೊತ್ತು,ಇಲ್ಲಿಯೂ ಬ್ಯಾಟ್ ಬೀಸಲು ಗೊತ್ತಿದೆ, ನಾವೇನು ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ, ಕ್ಷಣಗಣನೆ ಆರಂಭವಾಗಿದೆ ಎಲ್ಲದ್ದಕ್ಕೂ ನಾವು ಸಿದ್ದರಾಗಿದ್ದೇವೆ ಎಂಬ ಸಂದೇಶವನ್ನು ಕಲ್ಲಡ್ಕದಿಂದ ರವಾನೆಯಾಗಿದೆ ಎಂದು ಅವರು ತಿಳಿಸಿದರು. ರಾಧಾಕೃಷ್ಣ ಅಡ್ಯಂತ್ಯಾಯ ವೇದಿಕೆಯಲ್ಲಿ ಉಪಸ್ಥಿತರಿದ್ದು ಘಟನೆಯ ಕುರಿತು ಮಾತನಾಡಿದರು.

ಮಾಜಿ ಶಾಸಕರಾದ ಎ.ರುಕ್ಮಯ ಪೂಜಾರಿ, ಪದ್ಮನಾಭ ಕೊಟ್ಟಾರಿ, ಚೆನ್ನಪ್ಪ ಆರ್.ಕೋಟ್ಯಾನ್, ದಿನೇಶ್ ಅಮ್ಟೂರು, ಕ.ಕೃಷ್ಣಪ್ಪ ಕಲ್ಲಡ್ಕ, ಸುಜಿತ್ ಕೊಟ್ಟಾರಿ, ಮೋನಪ್ಪ ದೇವಸ್ಯ, ಲಖಿತಾ ಆರ್.ಶೆಟ್ಟಿ, ಯತೀನ್ ಕುಮಾರ್, ಮಿಥುನ್ ಪೂಜಾರಿ, ಅಮಿತ್ ಪೂಜಾರಿ, ಪ್ರೇಮ ಪೂಜಾರಿ, ಜಯಶ್ರೀ, ಸುಲೋಚನ ಜಿ.ಕೆಭಟ್, ರತ್ನಾಕರ್ ಶೆಟ್ಟಿ, ನರಸಿಂಹ ಮಾಣಿ, ಪುಷ್ಪರಾಜ್ ಶೆಟ್ಟಿಗಾರ್, ಜಿನರಾಜ್ ಕೋಟ್ಯಾನ್, ಮತ್ತಿತರರು ಉಪಸ್ಥಿತರಿದ್ದರು