ಉಜಿರೆ: ಕಾಲೇಜಿನಲ್ಲಿ ಯಾವುದೇ ವಿಭಾಗದ ಚಟುವಟಿಕೆಗಳು ಸಂಸ್ಥೆಯ ಮೌಲ್ಯವರ್ಧನೆಗೆ ಕಾರಣವಾಗುತ್ತವೆ. ಆದರೆ ವಿದ್ಯಾರ್ಥಿಗಳ ಭಾಗವಹಿಸುವಿಕೆ ಇಲ್ಲದೆ ಯಾವುದೂ ಫಲಪ್ರದವಾಗುವುದಿಲ್ಲ ಎಂದು ಉಜಿರೆಯ ಎಸ್.ಡಿ.ಎಂ. ಸ್ವಾಯತ್ತ ಕಾಲೇಜಿನ ಪರೀಕ್ಷಾಂಗ ಕುಲಸಚಿವೆ, ರಸಾಯನಶಾಸ್ತ್ರ ವಿಭಾಗ ಮುಖ್ಯಸ್ಥೆ ಪ್ರೊ. ನಂದಾಕುಮಾರಿ ಹೇಳಿದರು.

ಕಾಲೇಜಿನಲ್ಲಿ ಜು.11ರಂದು ಅವರು ಸಂಖ್ಯಾಶಾಸ್ತ್ರ ವಿಭಾಗದ ‘ಸಾಂಖ್ಯ’ ಸಂಘ ಉದ್ಘಾಟಿಸಿ ಮಾತನಾಡಿದರು. ನಮ್ಮ ಕಾಲೇಜು ಸಹಪಠ್ಯ ಚಟುವಟಿಕೆಗಳ ಕೇಂದ್ರವಾಗಿದ್ದು, ವಿದ್ಯಾರ್ಥಿಗಳ ವ್ಯಕ್ತಿತ್ವ ವಿಕಸನಕ್ಕೆ ಹೇರಳ ಅವಕಾಶ ಒದಗಿಸುತ್ತದೆ. ಸಂಘಗಳ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳಿ. ನಿಮ್ಮ ಗುರಿ ಸೇರಲು ನೀವು ಚಾಣಾಕ್ಷತನನಿಂದ ಕೆಲಸ ಮಾಡಿದರೆ ಜೀವನದಲ್ಲಿ ಯಶಸ್ವಿ ವ್ಯಕ್ತಿಯಾಗುತ್ತೀರಿ ಮತ್ತು ಬಲವಾದ ವೃತ್ತಿಜೀವನವನ್ನು ನಿರ್ಮಿಸಬಹುದು ಎಂದರು.

ಸಂಖ್ಯಾಶಾಸ್ತ್ರ ವಿಭಾಗ ಮುಖ್ಯಸ್ಥೆ ಡಾ. ಸವಿತಾ ರಾವ್ ಮಾತನಾಡಿ, ನಾನು ಎಂಬ ಅಹಂ ಇಟ್ಟುಕೊಳ್ಳದೆ ನಾವು ಎಂಬ ಭಾವನೆಯನ್ನು ಹೊಂದಿದ್ದರೆ ನಾವು ಮಾಡುವ ಎಲ್ಲಾ ಕೆಲಸಗಳು ಯಶಸ್ಸು ಕಾಣಲು ಸಾಧ್ಯ ಎಂದು ಕಿವಿಮಾತು ಹೇಳಿದರು.

ವಿಭಾಗದ ಭಿತ್ತಿಪತ್ರಿಕೆ ಬಿಡುಗಡೆಗೊಳಿಸಲಾಯಿತು. ನೂತನ ವಿದ್ಯಾರ್ಥಿಗಳನ್ನು ಸ್ವಾಗತಿಸಲಾಯಿತು. ಸಹಾಯಕ ಪ್ರಾಧ್ಯಾಪಕಿ ಮಂಜುಳಾ, ಸಾಂಖ್ಯ ಸಂಘದ ಅಧ್ಯಕ್ಷೆ ಗಾನಶ್ರೀ, ಕಾರ್ಯದರ್ಶಿ ವಿಷತ್ ಉಪಸ್ಥಿತರಿದ್ದರು. ಅಮೂಲ್ಯ ಸ್ವಾಗತಿಸಿ, ಬ್ರಿಜಿನ್ಯ ವಂದಿಸಿ, ಪ್ರತೀಕ್ಷಾ ನಿರೂಪಿಸಿದರು.