ಮಂಗಳೂರು : ಸಂತ ಜೋಸೆಫರ ದೇವಾಲಯ, ಕಳವಾರು, ಪೆಜಾರ್ ಇಲ್ಲಿ ಸುಮಾರು ಎರಡುವರೆ ಶತಮಾನಗಳ ಹಿಂದೆ ಆರಂಭವಾದ ಯೇಸು ಕ್ರಿಸ್ತರ ಬದುಕಿನ ಕೊನೆಯ ದಿನದ ಕಷ್ಟ ಮತ್ತು ಯಾತನೆಯ ಕ್ಷಣಗಳನ್ನು ಸ್ಮರಿಸುವ ಪವಿತ್ರ ಶಿಲುಬೆಯ ಹಾದಿ ಕಾರ್ಯಕ್ರಮವನ್ನು ನಿರಂತರವಾಗಿ ನಡೆಸಿಕೊಂಡು ಬರಲಾಗುತ್ತಿದ್ದು, ಈ ವರ್ಷ 242 ನೇ ಚಾರಿತ್ರಿಕ ಪವಿತ್ರ ಶಿಲುಬೆಯ ಹಾದಿಯನ್ನು ನಡೆಸಲಾಗುತ್ತದೆ. 2026 ನೇ ಸಾಲಿನ ಶಿಲುಬೆಯ ಹಾದಿ ಕಾರ್ಯಕ್ರಮ ಮಾರ್ಚ್ 31 ರಂದು ಮಂಗಳವಾರ ಸಂಜೆ 5 ಗಂಟೆಗೆ ನಡೆಯಲಿದೆ.

ಈ ವರ್ಷದ ವಿಷಯ: ಯಾತನೆ ಪಡುವ ಪ್ರಭು ಕ್ರಿಸ್ತರ ಶರೀರವನ್ನು ಸ್ಪರ್ಶಿಸಲು ಯಾತ್ರಿಕ ಪಯಣ ಎಂಬುದಾಗಿದೆ. ಆ ದಿನ ಬೆಳಗ್ಗೆ 10 ಗಂಟೆಗೆ ಕಾರ್ಯಕ್ರಮ ಆರಂಭವಾಗುತ್ತದೆ. ಬೆಳಗ್ಗೆ 10 ಗಂಟೆಯಿಂದ ಅಪರಾಹ್ನ 3 ಗಂಟೆ ತನಕ ನಿರಂತರ ಪ್ರಾರ್ಥನೆ, ಸ್ತುತಿ ಆರಾಧನೆ ಮತ್ತು ದೇವರ ವಾಕ್ಯದ ಮನನ ಕಾರ್ಯಕ್ರಮ ನಡೆಯಲಿದೆ. ಮಂಗಳೂರು ಧರ್ಮ ಪ್ರಾಂತ್ಯದ ಕ್ಯಾರಿಸ್ಮಾಟಿಕ್ ಸಂಚಾಲನವು ಈ ಕಾರ್ಯಕ್ರಮವನ್ನು ನಡೆಸಿ ಕೊಡಲಿದೆ.

3 ಗಂಟೆಗೆ ದೇವರ ಕೃಪೆಯ ಭಕ್ತಿಯಾಚರಣೆ ನಡೆಯಲಿದೆ. 3.30 ಕ್ಕೆ ಪರಮ ಪವಿತ್ರ ಪ್ರಸಾದದ ಆರಾಧನೆ ನಡೆಯಲಿದ್ದು, ಆಂತರಿಕ ಆರೋಗ್ಯಕ್ಕಾಗಿ ಪ್ರಾರ್ಥನೆ ನಡೆಯುವುದು. ಇದನ್ನು ಮಂಗಳೂರು ಧರ್ಮ ಪ್ರಾಂತ್ಯದ ಕ್ಯಾರಿಸ್ಮಾಟಿಕ್ ಸಂಚಾಲನದ ನಿರ್ದೇಶಕ ವಂದನೀಯ ಫಾ. ಕ್ಲಿಫರ್ಡ್ ಫೆರ್ನಾಂಡಿಸ್ ಅವರು ನಡೆಸಿ ಕೊಡುವರು.

ಸಂಜೆ 5 ಗಂಟೆಗೆ ಪವಿತ್ರ ಬಲಿಪೂಜೆ ನಡೆಯಲಿದೆ. ಸಂಜೆ 6 ಗಂಟೆಗೆ ಶಿಲುಬೆಯ ಹಾದಿ ಹಾಗೂ ಬಳಿಕ ಮಂಗಳೂರು ಧರ್ಮ ಪ್ರಾಂತ್ಯದ ಧರ್ಮಾಧ್ಯಕ್ಷರಾದ ಅತಿ ವಂದನೀಯ ಡಾ. ಪೀಟರ್ ಪಾವ್ಲ್ ಸಲ್ದಾನ್ಹಾ ಅವರಿಂದ ಪ್ರವಚನ ಇರುತ್ತದೆ. ರಾತ್ರಿ 9 ಗಂಟೆ ವೇಳೆಗೆ ಕಾರ್ಯಕ್ರಮ ಮುಕ್ತಾಯ ಗೊಳ್ಳುತ್ತದೆ. ಬಳಿಕ ವಿಶ್ವಾಸಿಗಳಿಗೆ ಊಟದ ವ್ಯವಸ್ಥೆ ಇರುತ್ತದೆ.

ಪಾದಯಾತ್ರೆ: ಈ ಚಾರಿತ್ರಿಕ ಕಾರ್ಯಕ್ರಮದ ಭಾಗವಾಗಿ ಪಾದ ಯಾತ್ರೆಯು ಅಪರಾಹ್ನ 2.45 ಕ್ಕೆ ಬಜಪೆ ಚೆಕ್ ಪೋಸ್ಟ್ ಬಳಿಯಿಂದ ಕಳವಾರು ಚರ್ಚ್ ಗೆ ಹಾಗೂ ಅಪರಾಹ್ನ 3.30 ಕ್ಕೆ ಜೋಕಟ್ಟೆ ಕೆಬಿಎಸ್ ನಿಂದ ಕಳವಾರು ಚರ್ಚ್ ಗೆ ನಡೆಯಲಿರುವುದು. 241 ವರ್ಷಗಳ ಹಿಂದೆ ವಿಭೂತಿಯ ಬುಧವಾರದಂದು ಈ ಚಾರಿತ್ರಿಕ ಶಿಲುಬೆಯ ಯಾತ್ರೆ ಕಾರ್ಯಕ್ರಮವನ್ನು ಆರಂಭಿಸಲಾಗಿತ್ತು.

ಪತ್ರಿಕಾಗೋಷ್ಠಿಯಲ್ಲಿ ವಂದನೀಯ ಡಾ. ರೊನಾಲ್ಡ್ ಡಿ ಸೋಜಾ, ಧರ್ಮಗುರುಗಳು, ಸಂತ ಜೋಸೆಫರ ಚರ್ಚ್, ಕಳವಾರು.ವಂದನೀಯ ಫಾ. ರುಡಾಲ್ಫ್ ರವಿ ಡೆಸಾ, ವಲಯ ಪ್ರಧಾನ ಗುರುಗಳು, ಪೇಜಾರ್ ವಲಯ , ಕ್ಲಿಫರ್ಡ್ ಡಿ ಸೋಜಾ, ಪಾಲನಾ ಸಮಿತಿಯ ಉಪಾಧ್ಯಕ್ಷರು , ಸಿಲ್ವಿಯಾ ಪೆರಿಸ್, ಕಾರ್ಯದರ್ಶಿ, ಪಾಲನಾ ಸಮಿತಿ , ವಾಲ್ಟರ್ ಮೊಂತೇರೊ, ಸಿಲಾ ಎಡ್ವರ್ಟೈಸರ್ಸ್ ,ಎಲಿಯಾಸ್ ಫೆರ್ನಾಂಡಿಸ್, ಇದ್ದರು.

View this post on Instagram

A post shared by News Karnataka (@newskarnataka)