ಪುತ್ತೂರು : ನವೆಂಬರ್ ತಿಂಗಳೊಳಗೆ ಸಿದ್ದರಾಮಯ್ಯ ಅವರು ರಾಜೀನಾಮೆ ನೀಡುತ್ತಾರೆ ಎಂದು ಸುಳ್ಯದ ಕುಂಜಾಡಿಯಲ್ಲಿ ಗಂಗಾವತಿ ಶಾಸಕ ಗಾಲಿ ಜನಾರ್ದನ ರೆಡ್ಡಿ ಸ್ಫೋಟಕ ಹೇಳಿಕೆ ನೀಡಿದ್ದಾರೆ.

ರಾಜ್ಯದಲ್ಲಿ ದೇವರಾಜು ಅರಸು ಅವರು ಅತೀ ಹೆಚ್ಚು ದಿನಗಳ ಮುಖ್ಯಮಂತ್ರಿಯಾಗಿದ್ದರು. ಅದಕ್ಕಿಂತ ಒಂದು ದಿನ ಹೆಚ್ಚು ಮುಖ್ಯಮಂತ್ರಿ ಆದ ಮೇಲೆ ನಾನು ಸೀಟು ಬಿಟ್ಟು ಕೊಡುತ್ತೇನೆ. ಸಿದ್ದರಾಮಯ್ಯ ಅವರು ಹೈಕಮಾಂಡ್ ಮುಂದೆ ಒಂದು ಒಪ್ಪಂದ ಮಾಡಿಕೊಂಡಿದ್ದರು.

ಡಿಕೆಶಿ-ಸಿದ್ದರಾಮಯ್ಯ ಅವರು ಅಧಿಕಾರ 50-50 ಮಾಡಿಕೊಂಡಿದ್ದರು ಎಂದು ನಾನು ಸಂಡೂರಿನಲ್ಲಿ ಉಪಚುನಾವಣೆ ಸಂದರ್ಭ ಹೇಳಿದ್ದೆ, ಅದರ ಮುಂದುವರಿದ ಭಾಗವಾಗಿ ಡಿಕೆಶಿ ಈಗಾಗ್ಲೇ ಬುನಾದಿ ಹಾಕೋದು ಶುರು ಮಾಡಿದ್ದಾರೆ. ದೇವರಾಜು ಅರಸು ಅವರಕ್ಕಿಂತ ಒಂದು ದಿನ ಹೆಚ್ಚು ಮುಖ್ಯಮಂತ್ರಿಯಾಗಿ ಸಿದ್ದರಾಮಯ್ಯ ಅಧಿಕಾರ ಮಾಡ್ತಾರೆ.

ನನಗೆ ಮಾಹಿತಿ ತಿಳಿದ ಪ್ರಕಾರ ಸಿದ್ದರಾಮಯ್ಯ ಅವರು ರಾಜೀನಾಮೆ ನೀಡ್ತಾರೆ. ಬಳಿಕ ಡಿಕೆ ಶಿವಕುಮಾರ್ ಅವರಿಗೆ ಸಿಎಂ ಸ್ಥಾನ ಬಿಟ್ಟು ಕೊಡುತ್ತಾರೆ. ಇಲ್ಲದಿದ್ದಲ್ಲಿ ಬಲವಂತವಾಗಿ ಆದ್ರೂ ಕುರ್ಚಿಯನ್ನ ಎಲ್ಕೊಂಡು ಅದರಲ್ಲಿ ಕೂತ್ಕೊಳ್ಳುತ್ತಾರೆ. ಈ ವಿಚಾರದಲ್ಲಿ ಯಾವುದೇ ಅನುಮಾನ ಬೇಡ. ಅಧಿಕಾರ ಪಡೀಲೇಬೇಕು ಅನ್ನೋ ಆತುರದಲ್ಲಿ ಡಿಕೆಶಿ ಇದ್ದಾರೆ ಎಂದರು.

ರಾಜ್ಯದಲ್ಲಿ ಬಿಜೆಪಿ ಮತ್ತೆ ದೊಡ್ಡ ಮಟ್ಟದ ಗೆಲುವು ಕಾಣಲಿದೆ. ಪಕ್ಷದ ತೀರ್ಮಾನದಂತೆ ಮುಂದಿನ ಬಾರಿ ನಾವೆಲ್ಲ ಒಗ್ಗಟ್ಟಾಗಿ ಬಿಜೆಪಿಯನ್ನ ಅಧಿಕಾರಕ್ಕೆ ತರುತ್ತೇವೆ. ಬಿಜೆಪಿ ಪಕ್ಷದಲ್ಲಿರುವ ಬಣ ರಾಜಕೀಯದ ಬಗ್ಗೆ ವರಿಷ್ಠರು ತೀರ್ಮಾನಿಸುತ್ತಾರೆ. ಬಿಜೆಪಿ ಶಿಸ್ತಿನ ಪಕ್ಷ, ಪಕ್ಷ ಸಂಘಟನೆ ಬಗ್ಗೆ ಹೈಕಮಾಂಡ್ ನಿರ್ದೇಶನ ನೀಡುತ್ತೆ ಎಂದರು.