ಮಂಗಳೂರು: ಮಳೆಗಾಲ ಬಂದರೆ ಪಿಲಿಕುಳ ಮೃಗಾಲಯದಲ್ಲಿ ಪ್ರಾಣಿಗಳಿಗೆ ಸಂಕಷ್ಟ ಎದುರಾಗುತ್ತದೆ. ತಗ್ಗು ಪ್ರದೇಶದಲ್ಲಿ ನೀರು ನಿಲ್ಲುವುದರಿಂದ ಜಿಂಕೆ, ಕಾಡು ಕೋಣ, ಕರಡಿ, ಮಂಗಗಳು ಇನ್ನಿತರ ಪ್ರಾಣಿಗಳಿಗೆ ಅಲ್ಲಿ ಸರಿಯಾದ ವ್ಯವಸ್ಥೆ ಇಲ್ಲ. ಈ ಬಾರಿಯೂ ಮೃಗಾಲಯದ ಒಳಗಡೆ ನೀರು ಶೇಖರಣೆಯಾಗಿದ್ದು, ಪ್ರಾಣಿಗಳು ಒದ್ದೆಯಾಗಿ ಸಂಕಷ್ಟ ಪಡುತ್ತಿರುವುದು ಕಂಡುಬಂದಿದೆ.
ಮಳೆಗಾಲ ಬಂದರೆ ಪಿಲಿಕುಳ ಮೃಗಾಲಯದಲ್ಲಿ ಪ್ರಾಣಿಗಳಿಗೆ ಸಂಕಷ್ಟ ಎದುರಾಗುತ್ತದೆ. ತಗ್ಗು ಪ್ರದೇಶದಲ್ಲಿ ನೀರು ನಿಲ್ಲುವುದರಿಂದ ಜಿಂಕೆ, ಕಾಡು ಕೋಣ, ಕರಡಿ, ಮಂಗಗಳು ಇನ್ನಿತರ ಪ್ರಾಣಿಗಳಿಗೆ ಅಲ್ಲಿ ಸರಿಯಾದ ವ್ಯವಸ್ಥೆ ಇಲ್ಲ. ಈ ಬಾರಿಯೂ ಮೃಗಾಲಯದ ಒಳಗಡೆ ನೀರು ಶೇಖರಣೆಯಾಗಿದ್ದು, ಪ್ರಾಣಿಗಳು ಒದ್ದೆಯಾಗಿ ಸಂಕಷ್ಟ ಪಡುತ್ತಿರುವುದು ಕಂಡುಬಂದಿದೆ. ಇದಲ್ಲದೆ, 2-3 ದಿನದಿಂದ ಪ್ರಾಣಿಗಳಿಗೆ ಆಹಾರ ಕೊಡುವುದರಲ್ಲಿಯೂ ವ್ಯತ್ಯಯ ಉಂಟಾಗಿದೆ ಎನ್ನುವ ಆರೋಪ ಕೇಳಿಬಂದಿದೆ.
ಈ ಬಗ್ಗೆ ಪಿಲಿಕುಳ ಪ್ರಾಧಿಕಾರದ ಪ್ರಭಾರ ಆಯುಕ್ತರೂ, ಪಶು ಸಂಗೋಪನಾ ಇಲಾಖೆಯ ಜಿಲ್ಲಾ ಉಪನಿರ್ದೇಶಕ ಅರುಣ್ ಕುಮಾರ್ ಶೆಟ್ಟಿ ಅವರಲ್ಲಿ ಕೇಳಿದಾಗ, ಒಂದನೇದಾಗಿ ಮೃಗಾಲಯ ತಗ್ಗಿನ ಜಾಗದಲ್ಲಿದ್ದು ಅದರಿಂದಾಗಿ ಮಳೆಗಾಲದಲ್ಲಿ ನೀರು ನಿಲ್ಲುತ್ತಿದೆ. ಅದನ್ನು ಸರಿಪಡಿಸುತ್ತಿದ್ದೇವೆ. ಜೊತೆಗೆ, ಈ ಬಾರಿ ಎರಡು ಕಡೆ ತಡೆಗೋಡೆ ಕುಸಿತಗೊಂಡು ನೀರು ಶೇಖರಣೆಯಾಗಿದೆ. ಪ್ರಾಣಿಗಳಿಗೆ ಆಹಾರ ನೀಡಿಕೆಯಲ್ಲಿ ವ್ಯತ್ಯಯ ಆಗಿಲ್ಲ. ವೆಜಿಟೇಬಲ್ ಆಹಾರ ಎಂದಿನಂತೆ ನೀಡುತ್ತಿದ್ದೇವೆ. ಸಸ್ಯಾಹಾರಿ ಪ್ರಾಣಿಗಳ ಬೂಸಾ ನೀಡಿಕೆಯಲ್ಲಿ ವ್ಯತ್ಯಯ ಆಗಿದ್ದು ಅದನ್ನು ಸರಿಪಡಿಸುತ್ತಿದ್ದೇವೆ ಎಂದು ಹೇಳಿದರು.

20 ವರ್ಷದಿಂದ ಒಬ್ಬರಿಗೇ ಟೆಂಡರ್!
ಪರಿಸರ ಪರ ಹೋರಾಟಗಾರ ಭುವನ್ ಹೇಳುವ ಪ್ರಕಾರ, ಮೃಗಾಲಯದಲ್ಲಿ ಪ್ರಾಣಿಗಳಿಗೆ ಆಹಾರ ಪೂರೈಕೆ ಮಾಡುವಲ್ಲಿ ಪ್ರತಿ ವರ್ಷ ಟೆಂಡರ್ ಆಗಬೇಕು. ಆದರೆ ಅಧಿಕಾರಿಗಳು ಸರಿಯಾಗಿ ಟೆಂಡರ್ ಮಾಡುತ್ತಿಲ್ಲ. ಬಿ.ಎ.ಖಾದರ್, ಕಾಸಿಂ ಮತ್ತು ಅಬ್ಬಾಸ್ ಎಂಬ ಮೂವರು ಒಂದೇ ಫ್ಯಾಮಿಲಿಯವರು 20 ವರ್ಷದಿಂದ ವೆಜ್ ಮತ್ತು ನಾನ್ ವೆಜ್ ಆಹಾರ ಪೂರೈಕೆ ಮಾಡುತ್ತಿದ್ದಾರೆ. ಇದು ದೊಡ್ಡ ಹಗರಣವಾಗಿದ್ದು, ಇದಕ್ಕೆ ಲೆಕ್ಕ ಪಕ್ಕ ಇಲ್ಲ. ಪ್ರಾಣಿಗಳನ್ನು ಸರಿಯಾಗಿ ನೋಡಿಕೊಳ್ಳುತ್ತಿಲ್ಲ. ನಾವು ಈ ಬಗ್ಗೆ ಹೈಕೋರ್ಟಿಗೆ ಪಿಐಎಲ್ ಹಾಕಿದ್ದೇವೆ. ಕೋರ್ಟಿಗೆ ಹಾಕಿದ ಬಳಿಕ ಮೃಗಾಲಯ ನೋಡಿಕೊಳ್ಳುತ್ತಿದ್ದ ನಿವೃತ್ತ ಅರಣ್ಯಾಧಿಕಾರಿ ಜಯಕರ ಭಂಡಾರಿ ಕಳೆದ ಮಾರ್ಚ್ ತಿಂಗಳಲ್ಲಿ ತಮ್ಮ ಹುದ್ದೆಗೆ ರಾಜಿನಾಮೆ ಕೊಟ್ಟು ಹೋಗಿದ್ದಾರೆ ಎಂದಿದ್ದಾರೆ.
ಫುಡ್ ಟೆಂಡರ್ ಅಪ್ಪನಿಂದ ಮಗಳಿಗೆ ಅಂತೆ.
ಆಹಾರ ಪೂರೈಕೆ ಟೆಂಡರ್ ಪಡೆದಿರುವ ಬಿ.ಎ.ಖಾದರ್ ಇತ್ತೀಚೆಗೆ ನಿಧನರಾಗಿದ್ದಾರೆ. ಈಗ ಅವರ ಪರವಾಗಿ ಮಕ್ಕಳಲ್ಲಿ ಒಬ್ಬರ ಹೆಸರಿಗೆ ಟೆಂಡರ್ ಹಕ್ಕು ನೀಡಲು ಪ್ರಯತ್ನ ನಡೆದಿದೆ. ಅಪ್ಪನಿಂದ ಮಗಳ ಹೆಸರಿಗೆ ಮಾಡಲು ಹುನ್ನಾರ ನಡೆಸಲಾಗಿದೆ. ಖಾದರ್ ಹೆಸರಲ್ಲೇ ಮಾಂಸ ಪೂರೈಕೆಯ ಟೆಂಡರ್ ಕೂಡ ಇದ್ದು ಅದನ್ನು ಅವರ ಸಂಬಂಧಿಕ ಅಬ್ಬಾಸ್ ಎಂಬವರು ನೋಡಿಕೊಂಡಿದ್ದರು. ಅವರಿಗೆ ಕಸಾಯಿಖಾನೆಯಿಂದ ಮಾಂಸ ಪೂರೈಕೆ ಆಗುತ್ತಿಲ್ಲ. ಮೃಗಾಲಯಕ್ಕೆ ಆಹಾರ ಪೂರೈಕೆಯನ್ನು ಲೈಸನ್ಸ್ ಹೊಂದಿರುವ ಯಾವುದಾದರೂ ಸಂಸ್ಥೆಯ ಹೆಸರಿನಲ್ಲಿ ಗುತ್ತಿಗೆ ನೀಡಬೇಕಿತ್ತು. ಇಲ್ಲಿ ಒಂದು ಕುಟುಂಬವೇ ಟೆಂಡರ್ ವಹಿಸಿಕೊಂಡಿದ್ದು, ಇದರಲ್ಲಿ ಅಧಿಕಾರಿಗಳು ಶಾಮೀಲಾಗಿದ್ದಾರೆ. ಅಲ್ಲಿರುವ ಸ್ಪಾಲ್ ಗಳನ್ನು ಕೂಡ ಖಾದರ್ ಕುಟುಂಬಕ್ಕೇ ಗುತ್ತಿಗೆ ನೀಡಲಾಗಿದೆ. ಇಲ್ಲಿ ಕೊಡು- ಕೊಳ್ಳುವಿಕೆಯ ವ್ಯವಹಾರ ನಡೆದಿದೆ. ಈಗ ಟೆಂಡರ್ ಸಮಸ್ಯೆ ಕಾರಣ ಎರಡು ದಿನಗಳಿಂದ ಪ್ರಾಣಿಗಳಿಗೆ ಆಹಾರ ಪೂರೈಕೆ ಮಾಡಿಲ್ಲ ಎಂಬ ಮಾಹಿತಿ ಇದೆ
ಮಾಂಸ ಪೂರೈಕೆಗೆ ಬಿಡ್ಡಿಂಗ್ ಬಂದಿಲ್ಲ
ಸಸ್ಯಾಹಾರಿ ಆಹಾರದ ಪೈಕಿ ಹಣ್ಣು ತರಕಾರಿ ಪೂರೈಕೆಗೆ ವರ್ಷಕ್ಕೆ 53 ಲಕ್ಷ ಬೇಕಾಗುತ್ತದೆ. ದವಸ ಧಾನ್ಯ, ಬೂಸಾ, ಸೊಪ್ಪುಗಳ ಪೂರೈಕೆಗೆ 55 ಲಕ್ಷ ಆಗುತ್ತದೆ. ಇವೆರಡನ್ನೂ ಈ ಬಾರಿ ಬಿ.ಎ.ಖಾದರ್ ಅಂತ ಒಬ್ಬರೇ 1.8 ಕೋಟಿಗೆ ಟೆಂಡರ್ ಪಡೆದಿದ್ದಾರೆ. ಬೇರೆಯವರು ಟೆಂಡರ್ ಹಾಕದೇ ಇರುವುದರಿಂದ 2024-25ರ ಸಾಲಿಗೂ ಟೆಂಡರ್ ಅವರಿಗೇ ನೀಡಲಾಗಿದೆ. ಟೆಂಡರ್ ನೀಡಿದ ಬಳಿಕ ಅವರು ನಿಧನರಾಗಿದ್ದರು. ಈತನಕ ನಾನ್ ವೆಜ್ ಟೆಂಡರ್ ಕೂಡ ಖಾದರ್ ಹೆಸರಿನಲ್ಲೇ ಇತ್ತು. ಈ ಬಾರಿ, ಬಳ್ಳಾರಿಯ ಹೊಸಪೇಟೆ ಮೂಲದ ಅಮೃತ್ ಪಾಷಾ ಎಂಬವರು ಟೆಂಡರ್ ಹಾಕಿದ್ದಾರೆ. ಎರಡು ಬಾರಿ ಟೆಂಡರ್ ಕರೆದರೂ ಬೇರೆಯವರು ಬಿಡ್ ಹಾಕಿಲ್ಲ. ಪಾಷಾ ಎರಡೂವರೆ ಕೋಟಿ ಬಿಡ್ ಮಾಡಿದ್ದಾರೆ. ಅದನ್ನು ನೆಗೋಷಿಯಬಲ್ ಮಾಡಿ ಫೈನಲ್ ಮಾಡುತ್ತೇವೆ ಎಂದು ಆಯುಕ್ತ ಅರುಣ್ ಕುಮಾರ್ ಶೆಟ್ಟಿ ಹೇಳುತ್ತಾರೆ.
5 ಕೋಟಿ ಕಲೆಕ್ಷನ್, ಖರ್ಚು ಹೆಚ್ಚಿದೆ
ಪಿಲಿಕುಳ ಅಭಿವೃದ್ಧಿ ಪ್ರಾಧಿಕಾರದ ನಿರ್ವಹಣೆಗೆ ರಾಜ್ಯ ಸರಕಾರದಿಂದ ವರ್ಷಕ್ಕೆ 6.7 ಕೋಟಿಯಷ್ಟು ಅನುದಾನ ಬರುತ್ತದೆ. ಮೃಗಾಲಯ, ಪ್ಲಾನಿಟೋರಿಯಂ, ಉದ್ಯಾನವನ ಸೇರಿ ಕಲೆಕ್ಷನ್ 5 ಕೋಟಿ ವರೆಗೆ ಬರುತ್ತದೆ. ಕಳೆದ ಸಾಲಿನಲ್ಲಿ 4.19 ಕೋಟಿ ಕಲೆಕ್ಷನ್ ಬಂದಿತ್ತು. ಅದರಲ್ಲಿ 198 ಕೋಟಿ ಮೃಗಾಲಯ ಒಂದರಿಂದಲೇ ಬಂದಿತ್ತು. ಒಟ್ಟು 288 ಜನ ಗುತ್ತಿಗೆ ಕಾರ್ಮಿಕರಿದ್ದು ಅವರಿಗೆ ಕನಿಷ್ಠ ವೇತನ ರೂಪದಲ್ಲಿ ನೀಡಲು 55 ಲಕ್ಷ ಬೇಕಾಗುತ್ತದೆ. ಮೃಗಾಲಯದಲ್ಲಿ ಪ್ರಾಣಿಗಳಿಗೆ ಆಹಾರ, ಇನ್ನಿತರ ವ್ಯವಸ್ಥೆಗೆ ಮೂರು ಕೋಟಿ ಬೇಕಾಗುತ್ತದೆ. ಪ್ಲಾನಿಟೋರಿಯಂ ಖರ್ಚು ಒಂದು ಕೋಟಿ ಬರುತ್ತದೆ ಸೈನ್ಸ್ ಸೆಂಟರ್ 40 ಲಕ್ಷ, ಇನ್ನೋವೇಶನ್ ಹಬ್ 25 ಲಕ್ಷ ಖರ್ಚಿಗೆ ಬೇಕಾಗುತ್ತದೆ. 2024-25ರ ಸಾಲಿನಲ್ಲಿ 9.97 ಕೋಟಿ ಒಟ್ಟು ಖರ್ಚಾಗಿತ್ತು ಎಂದು ಲೆಕ್ಕ ನೀಡಿದ್ದಾರೆ. ಅರುಣ್ ಶೆಟ್ಟಿ.
ಲೋಕಾಯುಕ್ತ ಅಧಿಕಾರಿಗಳಿಂದ ಪರಿಶೀಲನೆ
ಇತ್ತೀಚೆಗೆ ಪಿಲಿಕುಳ ಪ್ರಾಧಿಕಾರದಲ್ಲಿ ಲೆಕ್ಕ ಪತ್ರ ಸರಿಯಾಗಿಲ್ಲ ಅವ್ಯವಹಾರ ನಡೆದಿದೆ ಎನ್ನುವ ಕುರಿತ ದೂರಿನ ಹಿನ್ನೆಲೆಯಲ್ಲಿ ಲೋಕಾಯುಕ್ತ ದಾಳಿಯಾಗಿತ್ತು. ಅಧಿಕಾರಿಗಳು ಪರಿಶೀಲನೆ ನಡೆಸಿದಾಗ, ಅಲ್ಲಿ ಯಾವುದಕ್ಕೂ ಸರಿಯಾದ ಲೆಕ್ಕ ಪತ್ರ ಇಟ್ಟುಕೊಳ್ಳದಿರುವುದು ಕಂಡುಬಂದಿತ್ತು. ಈ ಬಗ್ಗೆ ಮಾಹಿತಿ ಕೇಳಿದಾಗ, ಅಲ್ಲಿನ ಅಧಿಕಾರಿ ವರ್ಗ ತಡಬಡಾಯಿಸಿತ್ತು. 20 ವರ್ಷಗಳಿಂದ ಮೃಗಾಲಯ ನೋಡಿಕೊಂಡಿದ್ದ ಜಯಕರ ಭಂಡಾರಿ ಪ್ರಾಣಿಗಳ ವಿಚಾರದಲ್ಲಿಯೇ ಸಾಕಷ್ಟು ವ್ಯವಹಾರ ಮಾಡಿಕೊಂಡಿದ್ದಾರೆ ಎಂಬ ಆರೋಪ ಕೇಳಿಬಂದಿತ್ತು. ಹಲವಾರು ವರ್ಷಗಳಿಂದ ಸೈನ್ಸ್ ಸೆಂಟರ್, ಪ್ಲಾನಿಟೋರಿಯಂ ಅನ್ನು ನಿವೃತ್ತ ಅಧಿಕಾರಿ ಕೆ.ವಿ.ರಾವ್ ನೋಡಿಕೊಳ್ಳುತ್ತಿದ್ದಾರೆ. ಉಳಿದಂತೆ, ಪೂರ್ಣಾವಧಿ ಅಧಿಕಾರಿಯೆಂದು ಪಿಲಿಕುಳದಲ್ಲಿ ಯಾರನ್ನೂ ನೇಮಿಸಿಲ್ಲ. ಎಲ್ಲವೂ ತಾತ್ಕಾಲಿಕ ಗುತ್ತಿಗೆ ನೆಪದಲ್ಲಿ ಅಧಿಕಾರಿ ವರ್ಗವಿದ್ದು ಅವರದೇ ಆಡಳಿತ ಇದೆ.
ಪಿಲಿಕುಳ ಮೃಗಾಲಯವನ್ನು ರಾಜ್ಯದ ಇತರೆಡೆ ಝೂಗಳನ್ನು ನಿರ್ವಹಿಸುತ್ತಿರುವ ಕರ್ನಾಟಕ ರಾಜ್ಯ ಮೃಗಾಲಯ ಪ್ರಾಧಿಕಾರದಿಂದಲೇ ನಡೆಸಲು ಪ್ರಸ್ತಾವನೆ ಸಲ್ಲಿಸಲಾಗಿದೆ. ಆ ಬಗ್ಗೆ ರಾಜ್ಯ ಸರಕಾರದ ಮಟ್ಟದಲ್ಲಿ ಕಡತವಿದ್ದು, ಇನ್ನೂ ಯಾವುದೇ ನಿರ್ಧಾರ ಆಗಿಲ್ಲ ಎಂದು ಮೂಲಗಳು ತಿಳಿಸಿವೆ.

