ಮಂಗಳೂರು : ಮುಂಬೈನ ಛತ್ರಪತಿ ಶಿವಾಜಿ ಮಹಾರಾಜ್ ಟರ್ಮಿನಸ್ ನಿಲ್ದಾಣದಲ್ಲಿ ಪ್ಲಾಟ್‌ಫಾರ್ಮ್ ವಿಸ್ತರಣೆ ಕಾಮಗಾರಿ ಮುಂದುವರಿದಿರುವ ಹಿನ್ನೆಲೆಯಲ್ಲಿ, ಕೆಲವು ಪ್ರಮುಖ ರೈಲುಗಳ ಸಂಚಾರವನ್ನು ದಾದರ್ ಮತ್ತು ಠಾಣೆ ನಿಲ್ದಾಣಗಳಲ್ಲೇ ಭಾಗಶಃ ರದ್ದುಗೊಳಿಸುವ ಅವಧಿಯನ್ನು ಮಧ್ಯ ರೈಲ್ವೆಯು ಮತ್ತಷ್ಟು ವಿಸ್ತರಿಸಿದೆ.

ಈ ನಿಯಮವು ಮುಂದಿನ 25 ದಿನಗಳವರೆಗೆ, ಅಂದರೆ 12 ಜೂನ್‌ವರೆಗೆ ಜಾರಿಯಲ್ಲಿರಲಿದೆ ಎಂದು ಮಧ್ಯ ರೈಲ್ವೆಯ ಮುಖ್ಯ ಸಾರ್ವಜನಿಕ ಸಂಪರ್ಕ ಅಧಿಕಾರಿ ಸುನಿಲ್ ಬಿ. ನಾರ್ಕರ್ ತಿಳಿಸಿದ್ದಾರೆ.

ಮೇ 27 ರಿಂದ ಜೂನ್ 12 ರವರೆಗೆ ಮಡ್ಗಾಂವ್‌ನಿಂದ ಹೊರಡುವ ಮಡ್ಗಾಂವ್ – ಮುಂಬೈ ಸಿಎಸ್‌ಎಂಟಿ ತೇಜಸ್ ಎಕ್ಸ್‌ಪ್ರೆಸ್ (ರೈಲು ಸಂಖ್ಯೆ: 22120) ರೈಲು ಮುಂಬೈ ಸಿಎಸ್‌ಎಂಟಿ ಬದಲಿಗೆ ದಾದರ್ ನಿಲ್ದಾಣದಲ್ಲೇ ತನ್ನ ಪ್ರಯಾಣವನ್ನು ಕೊನೆಗೊಳಿಸಲಿದೆ.

ಮೇ 27 ರಿಂದ ಜೂನ್ 12 ರವರೆಗೆ ಮಂಗಳೂರು ಜಂಕ್ಷನ್‌ನಿಂದ ಹೊರಡುವ ಮಂಗಳೂರು ಜಂಕ್ಷನ್ – ಮುಂಬೈ ಸಿಎಸ್‌ಎಂಟಿ ಎಕ್ಸ್‌ಪ್ರೆಸ್ (ರೈಲು ಸಂಖ್ಯೆ: 12134) ರೈಲನ್ನು ಮುಂಬೈ ಸಿಎಸ್‌ಎಂಟಿ ಬದಲಿಗೆ ಠಾಣೆ ನಿಲ್ದಾಣದಲ್ಲೇ ಮೊಟಕುಗೊಳಿಸಲಾಗುತ್ತದೆ.

ಕಾಮಗಾರಿಯ ಕಾರಣದಿಂದಾಗಿ ರೈಲುಗಳ ವೇಳಾಪಟ್ಟಿಯಲ್ಲಿ ಈ ತಾತ್ಕಾಲಿಕ ಬದಲಾವಣೆ ಮಾಡಲಾಗಿದ್ದು, ಮಂಗಳೂರು ಮತ್ತು ಗೋವಾ ಭಾಗದಿಂದ ಮುಂಬೈಗೆ ಪ್ರಯಾಣಿಸುವ ಸಾರ್ವಜನಿಕರು ಇದನ್ನು ಗಮನಿಸಿ ಸಹಕರಿಸಬೇಕಾಗಿ ವಿನಂತಿಸಲಾಗಿದೆ. ಪ್ರಯಾಣಿಕರಿಗೆ ಉಂಟಾಗುವ ಅನಾನುಕೂಲತೆಗೆ ರೈಲ್ವೆ ಇಲಾಖೆ ವಿಷಾದಿಸಿದೆ.