ಮಂಗಳೂರು : ಶ್ರೀ ಜಗನ್ನಾಥ ರಥಯಾತ್ರೆಯು ಪ್ರಪಂಚದಾದ್ಯಂತ ಪ್ರಸಿದ್ಧವಾದ ಕಾರ್ಯಕ್ರಮವಾಗಿದ್ದು, ಇದು ಮುಖ್ಯವಾಗಿ ಶ್ರೀ ಜಗನ್ನಾಥ ಪುರಿಯಲ್ಲಿ ನಡೆಯುತ್ತದೆ ಮತ್ತು ಲಕ್ಷಾಂತರ ಜನರು ಇದರಲ್ಲಿ ಪಾಲ್ಗೊಳ್ಳುತ್ತಾರೆ.

ಈ ವರ್ಷ, ನಮ್ಮ ನಗರವಾದ ಮಂಗಳೂರಿನಲ್ಲಿ, ಕುಡುಪು ಕಟ್ಟೆಯ ಇಸ್ಕಾನ್ (ISKCON) ಶ್ರೀ ಜಗನ್ನಾಥ ಮಂದಿರದ ಆಶ್ರಯದಲ್ಲಿ, 2026ರ ಜುಲೈ 16 ರ ಗುರುವಾರದಂದು ಪ್ರಸಿದ್ದ ಜಗನ್ನಾಥ ರಥೋತ್ಸವವು ನಡೆಯಲಿದೆ ಎಂದು ದೇವಸ್ಥಾನದ ಕಮಿಟಿ ಮೆಂಬರ್ ಪ್ರೇಮ ಭಕ್ತಿ ದಾಸ್ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು.

ಇಸ್ಕಾನ್‌ನ ಸಂಸ್ಥಾಪಕ ಆಚಾರ್ಯರಾದ ಶ್ರೀಲ ಪ್ರಭುಪಾದರ ಸ್ಫೂರ್ತಿಯಿಂದಾಗಿ, ನಮ್ಮ ಸಂಸ್ಥೆಯು ಪ್ರಪಂಚದಾದ್ಯಂತ ನ್ಯೂಯಾರ್ಕ್, ಲಂಡನ್, ಮಾಂಟ್ರಿಯಲ್, ಲಾಸ್ ಏಂಜಲೀಸ್, ಮೆಕ್ಸಿಕೋ, ಮೆಲ್ಬರ್ನ್ ಹಾಗೂ ಭಾರತದ ನವದೆಹಲಿ, ಮುಂಬೈ, ಕೋಲ್ಕತ್ತಾ, ಬೆಂಗಳೂರು, ಚೆನ್ನೈ, ಹೈದರಾಬಾದ್ ಮತ್ತು ಕೊಯಮತ್ತೂರು ಮುಂತಾದ ನಗರಗಳಲ್ಲಿ ಜಗನ್ನಾಥ ರಥಯಾತ್ರೆಯನ್ನು ಆಯೋಜಿಸುತ್ತಾ ಬಂದಿದೆ.

ಈ ಉತ್ಸವದಲ್ಲಿ ನೂರಾರು ಭಾರತೀಯ ಮತ್ತು ವಿದೇಶಿ ಪ್ರತಿನಿಧಿಗಳು ಭಾಗವಹಿಸುವ ನಿರೀಕ್ಷೆಯಿದೆ. ಉದ್ಘಾಟನಾ ಸಮಾರಂಭದಲ್ಲಿ ಹಿರಿಯ ಇಸ್ಕಾನ್ ಸನ್ಯಾಸಿಗಳು ಮತ್ತು ಮಂಗಳೂರಿನ ಗಣ್ಯರು ಭಾಗವಹಿಸಲಿದ್ದಾರೆ ಎಂದು ದೇವಧರ್ಮ ಅವರು ಹೇಳಿದರು.

ರಥಯಾತ್ರೆಯು ಮಧ್ಯಾಹ್ನ 3:30ಕ್ಕೆ ಲೇಡಿ ಹಿಲ್ ಸರ್ಕಲ್‌ನಿಂದ ಪ್ರಾರಂಭವಾಗಿ, ಎಂಸಿಸಿ (MCC) ಜಂಕ್ಷನ್-> ಟಿಎಂಎ ಪೈ ಹಾಲ್ > ಪಿವಿಎಸ್ ಸರ್ಕಲ್ -> ನವಭಾರತ ಸರ್ಕಲ್> ಕೋಡಿಯಾಲ್‌ ಬೈಲ್ ಹಂಪನಕಟ್ಟೆ > ಕ್ಲಾಕ್ ಟವರ್ -> ಸಿಟಿ ಸೆಂಟರ್ ಮಾಲ್ -> ಕೆ.ಎಸ್. ರಾವ್ ರಸ್ತೆ ಮಾರ್ಗವಾಗಿ ಸಾಗಿ ಟೌನ್ ಹಾಲ್‌ನಲ್ಲಿ ಸಮಾಪ್ತಿಯಾಗಲಿದೆ.

ರಥವು ಸಂಜೆ 5:30 ರ ಸುಮಾರಿಗೆ ಟೌನ್ ಹಾಲ್ ತಲುಪುವ ನಿರೀಕ್ಷೆಯಿದೆ; ನಂತರ ಪ್ರಸಾದ ವಿತರಣೆ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ.

ಭಗವಂತನ ರಥವನ್ನು ಎಳೆಯುವವರು ಜನನ-ಮರಣಗಳ ಚಕ್ರದಿಂದ ಮುಕ್ತರಾಗುತ್ತಾರೆ ಎಂದು ಪುರಾಣಗಳಲ್ಲಿ ಹೇಳಲಾಗಿದೆ. ಮಂಗಳೂರಿನ ಎಲ್ಲಾ ನಾಗರಿಕರು ತಮ್ಮದೇ ನಗರದಲ್ಲಿ ದೊರೆಯುತ್ತಿರುವ ಈ ಶುಭ ಅವಕಾಶದ ಸದುಪಯೋಗವನ್ನು ಪಡೆದುಕೊಳ್ಳಬೇಕೆಂದು ಮನವಿ ಮಾಡಿದರು.