ಮಂಗಳೂರು: ಸುಹಾಸ್ ಶೆಟ್ಟಿ ಹತ್ಯೆಯ ಬೆನ್ನಲ್ಲೇ ಕೊಳತ್ತಮಜಲ್ ಅಬ್ದುಲ್ ರೆಹ್ಮಾನ್ ಹತ್ಯೆ ನಡೆದಿದ್ದು, ದಕ್ಷಿಣ ಕನ್ನಡ ಜಿಲ್ಲೆ ಬೂದಿ ಮುಚ್ಚಿದ ಕೆಂಡದಂತಿದೆ. ಇದರ ಬೆನ್ನಲ್ಲೇ ಹಿಂದೂ ನಾಯಕ ಭರತ್ ಕುಮ್ಡೇಲ್‌ಗೆ ಸೋಷಿಯಲ್ ಮೀಡಿಯಾದ ಮೂಲಕ ಮತ್ತೆ ಬೆದರಿಕೆ ಹಾಕಲಾಗಿದೆ.

ಈ ಮುಂಚೆಯೂ ಬೆದರಿಕೆ ಹಾಕಿದ್ದು, ಪೊಲೀಸರಿಗೆ ದೂರು ನೀಡಲಾಗಿತ್ತು. ಇದೀಗ ಮತ್ತೆ ಇನ್ಸಾಗ್ರಾಮ್‌ ಪೇಜ್‌ನಲ್ಲಿ ಬಜರಂಗದಳ ಮುಖಂಡ ಭರತ್ ಕುಮ್ಡೇಲ್‌ ಫೋಟೋ ಹಾಕಿ ರಿವೇಂಜ್ ಮಾಡುವ ತರ ಪೋಸ್ಟ್ ಮಾಡಿದ್ದಾರೆ. ಶಹೀದ್ ಅಶ್ರಫ್ ಕಲಾಯಿ ಕೊಂದ ಪ್ರಮುಖ ಆರೋಪಿ ಭರತ್ ಕುಂಡೆಲ್ ನಿನ್ನನ್ನು ಮರೆತಿಲ್ಲ, ನಿನ್ನನ್ನು ಮರೆಯುವುದೂ ಇಲ್ಲ ಎಂದು ಪೋಸ್ಟ್ ಮಾಡಲಾಗಿದೆ.

ಭರತ್ ಕುಮ್ಡೇಲ್‌ ಎಸ್‌ಡಿಪಿಐ ಕಾರ್ಯಕರ್ತ ಅಶ್ರಫ್ ಕಲಾಯಿ ಹತ್ಯೆಯ ಪ್ರಮುಖ ಆರೋಪಿಯಾಗಿದ್ದು, ಸುಹಾಸ್‌ ಶೆಟ್ಟಿ ಹತ್ಯೆಯ ಸಂದರ್ಭದಲ್ಲೂ ಈತನಿಗೆ ಹಾಕಿದ ಬೆದರಿಕೆ ಪೋಸ್ಟ್‌ಗಳು ವೈರಲ್ ಆಗಿತ್ತು. ಈ ಬಗ್ಗೆ ನಗರ ಪೊಲೀಸ್ ಆಯುಕ್ತರಿಗೆ ದೂರು ಸಹ ನೀಡಲಾಗಿತ್ತು.

ಇದೀಗ ರಹ್ಮಾನ್ ಹತ್ಯೆಯಾಗುತ್ತಿದ್ದಂತೆ, ಪೊಲೀಸರಿಗೆ ದಾಖಲಿಸಿದ ದೂರನ್ನೂ ಲೆಕ್ಕಿಸದೆ ಕಿಡಿಗೇಡಿಗಳು ಬಹಿರಂಗ ಬೆದರಿಕೆ ಹಾಕಿದ್ದಾರೆ. ಈ ಮೂಲಕ ಸೈಬರ್ ಪೊಲೀಸರಿಗೆ ದುಷ್ಕರ್ಮಿಗಳು ನೇರ ಸವಾಲೊಡ್ಡಿದ್ದಾರೆ.