ದಕ್ಷಿಣ ಕನ್ನಡ: ಅಡಿಕೆ ಧಾರಣೆ ಕಡಿಮೆಯಾಯಿತೆಂಬ ಕಾರಣಕ್ಕೆ ಕೃಷಿಕರು ರಬ್ಬರ್ ಬೆಳೆಗೆ ಆಸಕ್ತಿ ತೋರಿದ್ದರು. ಇದೀಗ ರಬ್ಬರ್ ಧಾರಣೆ ಕಡಿಮೆಯಾಗಿ ಉತ್ಪಾದನಾ ವೆಚ್ಚ ಹೆಚ್ಚಿರುವ ಕಾರಣ ಕೃಷಿಕರು ರಬ್ಬರ್ ಕೃಷಿಯಿಂದ ಹಿಂದೆ ಸರಿಯುತ್ತಿದ್ದಾರೆ.
ವರ್ಷದಿಂದೀಚೆಗೆ ಉಭಯ ಜಿಲ್ಲೆಗಳಲ್ಲಿ ರಬ್ಬರ್ ಮರಗಳನ್ನು ನಿರಂತರವಾಗಿ ಕಡಿಯಲಾಗುತ್ತಿದೆ. ಕಾಲ ಮಿಂಚುತ್ತಿದ್ದಂತೆ ಕೃಷಿಕರ ಹಿತ ಕಾಯುವುದಕ್ಕೆ ಹಿತರಕ್ಷಣಾ ವೇದಿಕೆ ಸಮ್ಮೇಳನ ನಡೆಸಲು ಮುಂದಾಗಿದೆ. ಕೃಷಿ ಕಾರ್ಮಿಕರ ಅಭಾವ ಹೆಚ್ಚಾಗುತ್ತಿದೆ. ಲಾಭದಾಯವಾಗುವುದಕ್ಕಿಂತಲೂ ಉತ್ಪಾದನಾ ವೆಚ್ಚವನ್ನು ಹೊಂದಾಣಿಕೆ ಮಾಡಲಾಗದ ಸ್ಥಿತಿಗೆ ರಬ್ಬರ್ ಬಂದಿದೆ. ಕರ್ನಾಟಕದಲ್ಲಿ ೫೧ ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ರಬ್ಬರ್ ಬೆಳೆಯಿದ್ದು, ಈಗ ೫೦ ಸಾವಿರ ಹೆಕ್ಟೇರ್ಗಿಂತಲೂ ಕಡಿಮೆಯಾಗಿದೆ. ಆದರೆ ಉತ್ಪಾದನೆಯಲ್ಲಿ ೪೧ ಸಾವಿರ ಟನ್ನಿಂದ ೫೨ ಸಾವಿರ ಟನ್ಗೆ ಏರಿಕೆ ಕಂಡಿದೆ.
ಸದ್ಯ ರಬ್ಬರ್ ಕೆ.ಜಿ.ಗೆ ೧೮೨ ರೂ. ಸಿಗುತ್ತಿದ್ದು, ಉತ್ಪಾದನಾ ವೆಚ್ಚ ೨೫೮ ರೂ.ಗೂ ಅಧಿಕವಿದೆ. ರಬ್ಬರ್ಶೀಟ್ ಮಾರುವ ಸಂದರ್ಭ ಕೆ.ಜಿ.ಗೆ ಸುಮಾರು ೬೮ ರೂ. ನಷ್ಟವಾಗುತ್ತಿದೆ. ರಬ್ಬರ್ ಟ್ಯಾಪರ್ ಸಿಗದೆ ಕೃಷಿಕರು ಕಂಗಾಲಾಗುತ್ತಿದ್ದಾರೆ. ಟ್ಯಾಪಿಂಗ್ಗೆ ಕನಿಷ್ಠ ೩ ರೂ. ಎಂದು ನಿಗದಿಯಾದ ಬಳಿಕ ಗುತ್ತಿಗೆ ನೀಡುವುದಕ್ಕೆ ಆರಂಭವಾಗಿದೆ. ೬೦:೪೦ ಅನುಪಾತದಲ್ಲಿ ಗುತ್ತಿಗೆ ನೀಡುವುದರಿಂದ ರಬ್ಬರ್ ಹೆಚ್ಚು ಬರಬೇಕೆಂಬ ನಿಟ್ಟಿನಲ್ಲಿ ಮರಗಳಿಗೆ ಹಾನಿಯಾಗಿ ಉತ್ಪಾದಕರಿಗೆ ನಷ್ಟವಾಗುತ್ತಿದೆ.
ರಬ್ಬರ್ ಆಮದು ಆಂತರಿಕ ಬೆಲೆ ಕುಸಿತಕ್ಕೆ ಕಾರಣವಾಗಿದೆ. ಮುಕ್ತ ವ್ಯಾಪಾರ ಒಂಪ್ಪದದ ಪ್ರಕಾರ ಹಂತ ಹಂತವಾಗಿ ಸುಂಕ ಕಡಿಮೆ ಮಾಡಬೇಕಾಗಿದ್ದು, ರಬ್ಬರು ಬೆಳೆಗಾರರ ನಿದ್ದೆಗೆಡಿಸುತ್ತಿದೆ. ಈ ನಿಟ್ಟಿನಲ್ಲಿ ವಿವಿಧ ಬೇಡಿಕೆಗಳನ್ನಿಟ್ಟುಕೊಂಡು ನ.೨೯ರಂದು ಉಜಿರೆ ಶ್ರೀ ಕೃಷ್ಣಾನುಗ್ರಹ ಸಭಾಭವನದಲ್ಲಿ ಕರ್ನಾಟಕ ರಾಜ್ಯ ರಬ್ಬರ್ ಬೆಳೆಗಾರರ ಸಮ್ಮೇಳನ ಆಯೋಜಿಸಲಾಗಿದೆ.
ಕೃಷಿಯೂ ಅಲ್ಲ ಕೈಗಾರಿಕೆಯೂ ಅಲ್ಲದಂಥ ತ್ರಿಶಂಕು ಸ್ಥಿತಿಯಲ್ಲಿ ರಬ್ಬರ್ ಇದೆ. ಸರ್ಕಾರದ ಸವಲತ್ತುಗಳೂ ರಬ್ಬರ್ಗೆ ಸಿಗುತ್ತಿಲ್ಲ. ಕೇರಳ ಹೈಕೋರ್ಟ್ ೨೦೦೨ರಲ್ಲಿ ರಬ್ಬರನ್ನು ಕೃಷಿ ಉತ್ಪನ್ನ ಎಂದು ಉಲ್ಲೇಖಿಸಿದೆ. ೨೦೧೦ರಲ್ಲಿ ರಬ್ಬರ್ ಟಾಸ್ಕ್-ರ್ಸ್ ಕೃಷಿ ಉತ್ಪನ್ನ ಎಂದು ಗಣನೆಗೆ ತೆಗೆದುಕೊಳ್ಳುವಂತೆ ಹೇಳಿದೆ. ಆಮದು ಆಗುವ ರಬ್ಬರ್ನಲ್ಲಿ ಅತಿಸೂಕ್ಷ್ಮ ಉತ್ಪನ್ನ ಎಂದು ಹೇಳಲಾಗಿದೆ. ಕೃಷಿ ಉತ್ಪನ್ನ ಹೇಳುವ ಜತೆಗೆ ಕನಿಷ್ಠ ಬೆಂಬಲ ನೀಡುವ ವಿಚಾರದಲ್ಲಿ ಕೇರಳದ ಕೃಷಿಕರು ರಿಟ್ ಸಲ್ಲಿಸಿದ್ದು, ಇದನ್ನು ಕೇಂದ್ರ ಸರ್ಕಾರ ಗಣನೆಗೆ ತೆಗೆದುಕೊಳ್ಳುವಂತೆ ನ್ಯಾಯಾಲಯ ಸೂಚನೆ ನೀಡಿದೆ. ಕೇರಳ ಸರ್ಕಾರ ಮಾರುಕಟ್ಟೆ ಮಧ್ಯ ಪ್ರವೇಶ ಮಾಡಿ ಇತ್ತೀಚೆಗೆ ಕೆ.ಜಿ.ಗೆ ೨೦೦ ರೂ. ನಿಗದಿ ಮಾಡಿದೆ. ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ರಬ್ಬರನ್ನು ಕೃಷಿ ಉತ್ಪನ್ನ ಎಂದು ಪರಿಗಣಿಸಬೇಕಿದೆ.

