ಮಂಗಳೂರು: ಕದ್ರಿ ಪಾರ್ಕ್ ಬಳಿ ಬೀದಿಬದಿ ವ್ಯಾಪಾರ ಮಾಡುತಿದ್ದ ಪಾಲಿಕೆಯ ಅಧಿಕೃತ ಐಡಿ ಕಾರ್ಡ್ ಹೊಂದಿರುವ ಬೀದಿ ವ್ಯಾಪಾರಿಗಳನ್ನು ತೆರವುಗೊಳಿಸಿರುವ ನಗರ ಪಾಲಿಕೆಯ ಕ್ರಮವನ್ನು ಖಂಡಿಸಿ ಇಂದು ಮಹಾ ನಗರ ಪಾಲಿಕೆ ಎದುರು ಸಿಐಟಿಯು ನೇತೃತ್ವದ ದಕ್ಷಿಣ ಕನ್ನಡ ಜಿಲ್ಲಾ ಬೀದಿಬದಿ ವ್ಯಾಪಾರಸ್ಥರ ಸಂಘದ ನೇತೃತ್ವದಲ್ಲಿ ಬೀದಿಬದಿ ವ್ಯಾಪಾರಸ್ಥರು ಪ್ರತಿಭಟನೆ ನಡೆಸಿದರು.

ಪ್ರತಿಭಟನೆ ಉದ್ದೇಶಿಸಿ ಮಾತನಾಡಿದ ಸಿಐಟಿಯು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸುನಿಲ್ ಕುಮಾರ್ ಬಜಾಲ್ ಮಾತನಾಡುತ್ತಾ ಕದ್ರಿ ಪಾರ್ಕಿಗೆ ಬರುವ ವಿಹಾರಿಗಳಿಗೆ ತಂಪು ತಂಪಾದ ಪಾನೀಯ ನೀಡಿ, ರುಚಿ ರುಚಿಯಾದ ತಿಂಡಿ ತಿನಿಸುಗಳನ್ನು ಮಾರಾಟ ಮಾಡಿ ಜೀವನ ನಿರ್ವಹಣೆ ಮಾಡುತ್ತಿದ್ದ ಬಡ ಬೀದಿ ವ್ಯಾಪಾರಿಗಳ ಮೇಲೆ ಕಾನೂನು ಬಾಹಿರ ದಾಳಿ ಮಾಡುತ್ತಿದ್ದರೂ ಜನಪ್ರತಿನಿದಿನಗಳು ಮೌನ ವಹಿಸುತ್ತಿದ್ದಾರೆ ಬಡ ಬೀದಿ ವ್ಯಾಪಾರಿಗಳನ್ನು ಅಪರಾದಿಗಳಂತೆ ಬಿಂಬಿಸಿ ಪಾಲಿಕೆ ಅಧಿಕಾರಿಗಳು ದೌರ್ಜನ್ಯ ನಡೆಸುತ್ತಿದ್ದಾರೆ. ಧಾಳಿ ಮುಂದುವರಿದರೆ ಹೋರಾಟ ತೀವ್ರಗೊಳಿಸಲಾಗುವುದು ಎಂದು ಅವರು ಎಚ್ಚರಿಕೆ ನೀಡಿದರು.

ಸಂಘದ ಗೌರವಧ್ಯಕ್ಷರಾದ ಬಿ.ಕೆ ಇಮ್ತಿಯಾಜ್ ಮಾತನಾಡುತ್ತಾ ಕದ್ರಿ ಪಾರ್ಕಿನಲ್ಲ ಕಳೆದ 30ವರ್ಷಗಳಿಂದ ಬೀದಿಬದಿಯಲ್ಲಿ ವ್ಯಾಪಾರ ಮಾಡಿಕೊಂಡು ಜೀವನ ಸಾಗಿಸುತ್ತಿದ್ದ ಬೀದಿ ವ್ಯಾಪಾರಿಗಳನ್ನು ಇತ್ತೀಚಿಗೆ ನಗರ ಪಾಲಿಕೆ ಅಧಿಕಾರಿಗಳು ಯಾವುದೇ ನೋಟೀಸ್ ನೀಡದೆ ಏಕಾಏಕಿ ದಾಳಿ ನಡೆಸಿ ಅವರ ಸರಕು, ಮತ್ತು ಗಾಡಿಗಳನ್ನು ವಶಪಡಿಸಿಕೊಂಡಿರುವುದು ಬೀದಿಬದಿ ವ್ಯಾಪಾರಿಗಳ ಬದುಕುವ ಹಕ್ಕಿನ ಮೇಲೆ ಸವಾರಿ ಮಾಡಿದಂತಾಗಿದೆ.

ಕದ್ರಿ ಪಾರ್ಕಿನ ಬೀದಿ ವ್ಯಾಪಾರಿಗಳಲ್ಲಿ ಮಹಾನಗರ ಪಾಲಿಕೆ ನೀಡಿರುವ ಐಡಿ ಕಾರ್ಡ್ ಮತ್ತು ವ್ಯಾಪಾರದ ಪ್ರಮಾಣ ಪತ್ರ, ಮತ್ತು ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಇಲಾಖೆಯ ಪ್ರಮಾಣ ಪತ್ರಗಳು ಇದ್ದರೂ ಸಹ ಅವರಿಗೆ ವ್ಯಾಪಾರ ಮಾಡಲು ಅವಕಾಶ ನಿರಾಕರಿಸಿರುವುದು ಬೀದಿಬದಿ ವ್ಯಾಪಾರಸ್ಥರ ಸಂರಕ್ಷಣೆ ಮತ್ತು ನಿಯಂತ್ರಣ ಕಾಯಿದೆಯ ಸ್ಪಷ್ಟ ಉಲ್ಲಂಘನೆಯಾಗಿದೆ ಎಂದು ಅವರು ಆಪಾದಿಸಿದರು.

ಬೀದಿಬದಿ ವ್ಯಾಪಾರ ಕಾಯಿದೆಯ ಪ್ರಕಾರ ಬೀದಿಬದಿ ವ್ಯಾಪಾರಿಗಳ ಮೇಲೆ ಧಾಳಿ ನಡೆದಾಗ ನ್ಯಾಯ ಪಡೆಯಲು ಮಂಗಳೂರಿನಲ್ಲಿ ನಿವೃತ್ತ ನ್ಯಾಯಾಧೀಶರ ನೇತೃತ್ವದಲ್ಲಿ ಕುಂದುಕೊರತೆ ನಿವಾರಣಾ ಸಮಿತಿಯು ಅಸ್ತಿತ್ವದಲ್ಲಿ ಇರುವುದಿಲ್ಲ. ಅಲ್ಲದೆ ತಾತ್ಕಾಲಿಕ ಪಟ್ಟಣ ವ್ಯಾಪಾರ ಸಮಿತಿಯು ಅಸ್ತಿತ್ವದಲ್ಲಿ ಇಲ್ಲದ ಸಮಯದಲ್ಲಿ ಬೀದಿ ವ್ಯಾಪಾರಿಗಳ ಮೇಲೆ ಕಾರ್ಯಾಚರಣೆ ನಡೆಸುತ್ತಿರುವುದು ಕಾನೂನಿನ ಉಲ್ಲಂಘನೆ ಆಗುತ್ತದೆ ಎಂದು ಟೀಕಿಸಿದರು.

ಅಲ್ಲದೆ ಏರ್ ಪೋರ್ಟ್ ರಸ್ತೆಯಲ್ಲಿ ವ್ಯಾಪಾರ ಮಾಡುತ್ತಿರುವ ವ್ಯಾಪಾರಿಗಳಿಗೆ ಪರ್ಯಾಯ ವ್ಯವಸ್ಥೆಯನ್ನು ಮಾಡದೆ ಏರ್ ಪೋರ್ಟ್ ರಸ್ತೆಯನ್ನು ಬೀದಿ ವ್ಯಾಪಾರ ನಿಷೇಧ ರಸ್ತೆ ಎಂದು ಆದೇಶ ನೀಡಿರುವುದರಿಂದ ಏರ್ ಪೋರ್ಟ್ ರಸ್ತೆಯಲ್ಲಿ ವ್ಯಾಪಾರ ಮಾಡುತ್ತಿರುವ ಬೀದಿ ವ್ಯಾಪಾರಿಗಳಿಗೆ ತೀವ್ರ ಸಂಕಷ್ಟ ತಂದೊಡ್ಡಲಿದೆ ಪ್ರತಿನಿತ್ಯ ಬೀದಿ ವ್ಯಾಪಾರಿಗಳು ಪಾಲಿಕೆ ಅಧಿಕಾರಿಗಳ ದಾಳಿಯ ಭೀತಿಯಿಂದ ಕಂಗಾಲಾಗಿದ್ದಾರೆ ಬಡವರು ರಾಜ ಮಾರ್ಗದಲ್ಲಿ ಹೊಟ್ಟೆಪಾಡಿಗೆ ದುಡಿಮೆ ಮಾಡಬಾರದೇ ಎಂದು ಪ್ರಶ್ನಿಸಿದರು.

ಪ್ರತಿಭಟನೆಯಲ್ಲಿ ಕಾರ್ಮಿಕ ಮುಂದಾಳು ಯೋಗೀಶ್ ಜಪ್ಪಿನಮೊಗರು, ಡಿವೈಎಫ್ಐ ಮುಂದಾಳುಗಳಾದ ಸಂತೋಷ್ ಬಜಾಲ್, ತಯ್ಯುಬ್ ಬೆಂಗ್ರೆ, ಹನೀಫ್ ಬೆಂಗ್ರೆ, ರಿಜ್ವಾನ್ ಹರೇಕಳ, ಜಗದೀಶ್ ಬಜಾಲ್, ಬೀದಿಬದಿ ವ್ಯಾಪಾರಸ್ಥರ ಸಂಘದ ನಾಯಕರಾದ ಸಂತೋಷ್ ಆರ್. ಎಸ್, ಮುಜಾಫರ್ ಅಹ್ಮದ್, ಹಂಝ ಮೊಹಮ್ಮದ್,ಶಿವಪ್ಪ, ಹಸನ್ ಕುದ್ರೋಳಿ, ಅಬ್ದುಲ್ ಖಾದರ್, ಸ್ಟ್ಯಾನಿ ಡಿಸೋಜಾ, ವಿಶ್ವನಾಥ್ ಕದ್ರಿ, ಗಂಗಾಧರ್ ಕದ್ರಿ, ಬ್ರಹ್ಮ ಪುತ್ರ, ವಿಶ್ವರಾಜ್, ರಾಜೀವಿ, ಶಾಲಿನಿ, ಗಂಗಮ್ಮ, ಶೈಲಾ ಸುರತ್ಕಲ್, ಫೇಲಿಕ್ಸ್ ಸುರತ್ಕಲ್, ಬಾಲಕೃಷ್ಣ,ವಿಜಯ್ ಜೈನ್, ಸಿಕಂದರ್ ಬೇಗ್, ಕಾಜ ಮೋಹಿಯುದ್ದಿನ್, ರಫೀಕ್ ಪಾಂಡೇಶ್ವರ, ನೌಶಾದ್ ಕಣ್ಣೂರು, ರಿಯಾಜ್ ಮದಕ, ರಾಮಚಂದ್ರ ಭಟ್,ಚಂದ್ರಹಾಸ್ ಪಡೀಲ್ ಗುಡ್ಡಪ್ಪ, ಸೆಲ್ವಾ ರಾಜ್, ಮುಂತಾದವರು ಉಪಸ್ಥಿತರಿದ್ದರು. ಪಾಲಿಕೆಯ ಅಧಿಕಾರಿಗಳಾದ ಮಾಲಿನಿ ಮತ್ತು ಚಿತ್ತರಂಜನ್ ಮನವಿ ಸ್ವೀಕರಿಸಿದರು.

ಬೇಡಿಕೆಗಳು:

1. ಕದ್ರಿ ಪಾರ್ಕಿನಲ್ಲಿ ಕಳೆದ ಹಲವಾರು ವರ್ಷಗಳಿಂದ ವ್ಯಾಪಾರ ಮಾಡುತ್ತಿರುವ ಬೀದಿ ವ್ಯಾಪಾರಿಗಳಿಗೆ ವ್ಯಾಪಾರ ಮಾಡಲು ಅವಕಾಶ ಮುಂದುವರಿಸಬೇಕು.

2. ಕದ್ರಿ ಪಾರ್ಕಿನ ಮುಖ್ಯ ದ್ವಾರದ ಎದುರುಗಡೆ ಬೀದಿ ಆಹಾರ ಮಾರಾಟಗಾರರಿಗೆ ಆಹಾರ ವಲಯ ನಿರ್ಮಿಸಬೇಕು.

3. ಪಟ್ಟಣ ವ್ಯಾಪಾರ ಸಮಿತಿ ಮತ್ತು ಕುಂದುಕೊರತೆ ನಿವಾರಣಾ ಸಮಿತಿ ರಚನೆ ಆಗುವವರೆಗೆ ನಗರ ಪಾಲಿಕೆ ವ್ಯಾಪ್ತಿಯಲ್ಲಿ ಎಲ್ಲಿಯೂ ಕೂಡ ಬೀದಿ ವ್ಯಾಪಾರಿಗಳ ಮೇಲೆ ಕಾರ್ಯಾಚರಣೆ ನಡೆಸಬಾರದು.

4. ಕೂಡಲೇ ನಗರದಲ್ಲಿ ತಾತ್ಕಾಲಿಕ ಪಟ್ಟಣ ವ್ಯಾಪಾರ ಸಮಿತಿ ರಚಿಸಬೇಕು.

5. ಬೀದಿ ವ್ಯಾಪಾರಿಗಳ ಮೇಲೆ ದಾಳಿ ನಡೆಸಿದ ಸಂಧರ್ಭದಲ್ಲಿ ವಶಪಡಿಸುವ ಸರಕು, ಗಾಡಿಗಳಿಗೆ ಹಾನಿ ಮಾಡದೆ ಮಹಜರು ನಡೆಸಿ ಬೀದಿ ವ್ಯಾಪಾರಿಗೆ ಹಿಂದಿರುಗಿಸಬೇಕು.

6. ಏರ್ ಪೋರ್ಟ್ ರಸ್ತೆಯಲ್ಲಿ ಬೀದಿ ವ್ಯಾಪಾರ ನಿಷೇಧ ಆದೇಶ ಹಿಂಪಡೆಯಬೇಕು

ಮೇಲಿನ ಎಲ್ಲಾ ಬೇಡಿಕೆಗಳನ್ನು ಕೂಡಲೇ ಈಡೇರಿಸಲು ಕೂಡಲೇ ಕ್ರಮ ಕೈಗೊಳ್ಳಬೇಕೆಂದು ಮನವಿಯಲ್ಲಿ ಒತ್ತಾಯಿಸಲಾಯಿತು.