ಮಂಗಳೂರು: ಕ್ರೈಸ್ತ ಐಕ್ಯತೆಯ ಕ್ರಿಸ್ಮಸ್ ಆಚರಣೆಯನ್ನು, ಆಲ್ ಕರ್ನಾಟಕ ಯುನೈಟಡ್ ಕ್ರಿಶ್ಚಿಯನ್ ಫೋರಮ್ ಫೊರ್ ಹ್ಯೂಮನ್ ರೈಟ್ಸ್ ಹಾಗೂ ಮ್ಯಾಂಗಲೋರ್ ಕ್ರಿಸ್ಚಿಯನ್ ಕೌನ್ಸಿಲ್ ಇವರ ಜಂಟಿ ಆಶ್ರಯದಲ್ಲಿ, ಇದೇ ಡಿಸೆಂಬರ್ 14 ರಂದು ಶನಿವಾರ ಮಂಗಳೂರಿನ ಕಾಸ್ಸಿಯಾ ಮೋರ್ಗನ್ಸ್ಗೇಟ್ ಚರ್ಚ್ ಸಭಾಂಗಣದಲ್ಲಿ ಸಂಜೆ 6.00 ಗಂಟೆಯಿಂದ ಆಚರಿಸಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಮಂಗಳೂರು ಬಿಷಪ್ ಅತೀ ಪೂಜ್ಯ ಪೀಟರ್ ಪಾವ್ಲ್ ಸಲ್ಡಾನ್ಹಾ ಮಾತಾನಾಡಿ, ಪ್ರೀತಿ ಮತ್ತು ಶಾಂತಿಯ ಸಂದೇಶ ನೀಡಿರು. ಕ್ರಿಸ್ಮಸ್ ಸಂದೇಶವನ್ನು ನೃತ್ಯ, ಹಾಡುಗಳು ಮತ್ತು ಕಿರುನಾಟಕಗಳ ಮೂಲಕ ಸುಂದರವಾಗಿ ಪ್ರಸ್ತುತಪಡಿಸಿದ ಕಲಾವಿದರನ್ನು ಅವರು ಶ್ಲಾಘಿಸಿದರು. “ಕ್ರಿಸ್ಮಸ್ ಉಡುಗೊರೆಗಳ ಸಮಯ. ದೇವರು ಜಗತ್ತನ್ನು ತುಂಬಾ ಪ್ರೀತಿಸಿದನು, ಅವನು ತನ್ನ ಒಬ್ಬನೇ ಮಗನನ್ನು ನಮಗೆ ಉಡುಗೊರೆಯಾಗಿ ಕೊಟ್ಟನು.
ನಾವು ಕ್ರಿಸ್ತನ ದೇಹದ ಅಂಗಗಳು. ದೈವಿಕವಾಗುವುದು ಹೇಗೆ ಎಂದು ಅವರು ನಮಗೆ ಕಲಿಸಿದ್ದಾರೆ. ಜೀಸಸ್ ನಮ್ಮ ಮುಂದೆ ಇರುವಾಗ ನಾವು ಮಾನವೀಯರಾಗಿರಲು ನಮಗೆ ಯಾರೂ ಹೇಳುವ ಅಗತ್ಯವಿಲ್ಲ. ಕ್ರಿಸ್ಮಸ್ ನಮ್ಮನ್ನು ಉಡುಗೊರೆಗಳನ್ನು ನೀಡಲು ಮಾತ್ರವಲ್ಲದೆ ಇತರರಿಗೆ ಉಡುಗೊರೆಯಾಗಿಯೂ ಆಹ್ವಾನಿಸುತ್ತದೆ. ಆಶ್ರಮದಲ್ಲಿರುವ ವೃದ್ಧರು, ರೋಗಿಗಳು, ಜನರಿಗೆ ನಿಮ್ಮ ಸಮಯವನ್ನು ಉಡುಗೊರೆಯಾಗಿ ನೀಡಿ. ಅಂತಹ ಜನರೊಂದಿಗೆ ಸ್ವಲ್ಪ ಸಮಯ ಕಳೆಯುವುದು ದೊಡ್ಡ ಕೊಡುಗೆಯಾಗಿದೆ. ನಿಮ್ಮ ಉಪಸ್ಥಿತಿಯ ಮೂಲಕ ಇತರರಿಗೆ ಸಂತೋಷವನ್ನು ನೀಡಿ ಮತ್ತು ನೀವು ಸಂತೋಷವನ್ನು ಪಡೆಯುತ್ತೀರಿ,’ ಎಂದು ಅವರು ಹೇಳಿದರು ಮತ್ತು ಎಲ್ಲರಿಗೂ ಸಂತೋಷದಾಯಕ ಕ್ರಿಸ್ಮಸ್ ಶುಭಾಶಯಗಳನ್ನು ಕೋರಿದರು.

ಸಿಎಸ್ಐ ಕರ್ನಾಟಕ ದಕ್ಷಿಣ ಧರ್ಮಕ್ಷೇತ್ರದ ಬಿಷಪ್ ಅತೀ ಪೂಜ್ಯ ಹೇಮಚಂದ್ರ ಕುಮಾರ್ ಮಾತನಾಡಿ, ಈ ತಿಂಗಳಲ್ಲಿ ನಾವು ಆಚರಿಸುವ ಕ್ರಿಸ್ಥ ಜಯಂತಿ ಸೌಹಾರ್ದತೆಯಲ್ಲಿ ನಡೆಯಲು ನಮಗೆ ಪ್ರೇರಣೆ. ಈ ಸೌಹಾರ್ದತೆ ಎಲ್ಲಾ ಜನರೊಡನೆ ಸದಾ ನಡೆಯಲಿ. ಬೇಗನೆ ಬರುವ ಹೊಸ ವರುಷದಲ್ಲಿ ಕ್ರಿಸ್ತನ ಆಶೀರ್ವಾದದೊಂದಗೆ ನಾವೆಲ್ಲರೂ ಸೌಹಾರ್ದತೆಯಿಂದ ಬದುಕಿ ನಾವೆಲ್ಲರು ಪ್ರತಿಯೊಬ್ಬರಿಗೂ ಆಶೀರ್ವಾದವಾಗೋಣ ಎಂದರು.
ಒರ್ಥೊಡೊಕ್ಸ್ ಸಿರಿಯನ್ ಚರ್ಚ್ ಬ್ರಹ್ಮಾವರ ಧರ್ಮಕ್ಷೇತ್ರದ ಬಿಷಪ್ ಅತೀ ಪೂಜ್ಯ ಯಾಕುಬ್ ಮಾರ್ ಎಲಿಯಾಸ್ ಹಾಗು ಪುತ್ತೂರು ಸಿರೋ ಮಲಂಕರ ಧರ್ಮಕ್ಷೇತ್ರದ ಬಿಷಪ್ ಅತೀ ಪೂಜ್ಯ ಗೀವರ್ಗೀಸ್ ಮಾರ್ ಮಕಾರಿಯೊಸ್ ಮಾತನಾಡಿ ಆಶೀರ್ವಚನ ನೀಡಿದರು.
ರೆವ. ಚಾರ್ಲ್ಸ್ ಎಸ್., ಬಿಲೀರ್ಸ್ ಈಸ್ಟರ್ನ್ ಚರ್ಚ್, ಕರ್ನಾಟಕ ಗೋವಾ ಪ್ರಾಂತ್ಯ ಇದರ ಡಯಾಸಿಜನ್ ವಿಕಾರ್ ಪ್ರಾರ್ಥನಾ ವಿಧಿ ನೆರವೇರಿಸಿ ಕೊಟ್ಟರು. ಅತಿಥಿಗಳು ದೀಪ ಬೆಳಗಿಸಿ ಕಾರ್ಯಕ್ರಮದ ಉದ್ಘಾಟನೆ ನೆರವೇರಿಸಿದರು. ಮಂಗಳೂರು ಧರ್ಮಕ್ಷೇತ್ರದ ವಿಕಾರ್ ಜನರಲ್ ಅತೀ ವಂ. ಮ್ಯಾಕ್ಸಿಮ್ ನೊರೋನ್ಹಾ, ಬೆಥನಿ ಧರ್ಮಭಗಿನಿಯರ ಸಭೆಯ ಪ್ರೊವಿಸ್ಶಿಯಲ್ ಸಿ| ಲಿಲ್ಲಿ ಪಿರೇರ, ಎಸ್ ಆರ್ ಎ ಧರ್ಮಭಗಿನಿಯರ ಸಭೆಯ ಪ್ರೊವೊನ್ಶಿಯಲ್ ಸಿ| ಲೀನಾ ವಿ.ಜೆ, ಫಾ| ಎರಿಕ್ ಕ್ರಾಸ್ತಾ, ಹಲವಾರು ಧರ್ಮಗುರುಗಳು, ಧರ್ಮಭಗಿನಿಯರು ಹಾಗು ಭಕ್ತಾದಿಗಳು ಹಾಜರಿದ್ದರು.
ವಿವಿಧ ಚರ್ಚ್ಗಳ ಯುವಜನರಿಂದ ಹಾಗು ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನೆರವೇರಿತು. ಭಾರತದ ಪ್ರಧಾನ ಮಂತ್ರಿಯವರಿAದ ಪುರಸ್ಕೃತಗೊಂಡ ರೆಮೋನಾ ಪಿರೇರಾ ಇವರಿಂದ ಭರತ ನಾಟ್ಯ ಕಾರ್ಯಕ್ರಮ ನಡೆಯಿತು. ಆಹ್ವಾನಿತರೆಲ್ಲರಿಗೂ ಭೋಜನವನ್ನು ಏರ್ಪಡಿಸಲಾಗಿತ್ತು.
ಫಾ| ರೂಪೇಶ್ ಮಾಡ್ತಾ, ರೆವ. ಗೋಲ್ಡಿನ್ ಜೆ. ಬಂಗೇರ, ರೆವ. ಎಮ್. ಪ್ರಭುರಾಜ್, ಡೊ| ಸೆಬಾಸ್ಟಿಯನ್ ಕೆ.ವಿ. ಇವರುಗಳು, ಮಂಗಳೂರು ಧರ್ಮಕ್ಷೇತ್ರದ ಕ್ರೆöÊಸ್ತ ಐಕ್ಯತೆಯ ಆಯೋಗದ ಸದಸ್ಯರೊಂದಿಗೆ ಸೇರಿ ಕಾರ್ಯಕ್ರಮವನ್ನು ಆಯೋಜಿಸಿದ್ದರು. ಅನಿಲ್ ಡೇಸಾ ಹಾಗೂ ತೆರೆಜಾ ಪಿರೇರ ಕಾರ್ಯಕ್ರಮ ನಿರೂಪಿಸಿದರು.

