ಮಂಗಳೂರು: ನಗರದ ಉರ್ವ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಅಕ್ರಮವಾಗಿ ನೆಲೆಸಿ ಎರಡು ಕಡೆ ಕಟ್ಟಡ ನಿರ್ಮಾಣ ಕೆಲಸ ಮಾಡುತ್ತಿದ್ದ ನಾಲ್ವರು ಅಪ್ರಾಪ್ತ ಬಾಲಕರು ಸಹಿತ 11 ಮಂದಿ ಬಾಂಗ್ಲಾ ಪ್ರಜೆಗಳನ್ನು ಸಿಸಿಬಿ ಪೊಲೀಸರು ಸೋಮವಾರ ಬಂಧಿಸಿದ್ದಾರೆ.

ಮುಹಮ್ಮದ್ ಕೌಸರ್ ಅಲಿ (21), ಮುಹಮ್ಮದ್ ನೂರ್ ಅಮೀನ್ (34), ಮುಹಮ್ಮದ್ ನಾಹಿದುಲ್ ಇಸ್ಲಾಂ (22), ಮುಹಮ್ಮದ್ ಹುಮಾಯೂನ್ ಕಬೀರ್ (22), ಮುಹಮ್ಮದ್ ರಂಝಾನ್ ಅಲಿ (23), ಮುಹಮ್ಮದ್ ಅಬ್ದುಲ್ ರಹ್ಮಾನ್ ರಾಯಲ್ (19), ಮುಹಮ್ಮದ್ ನೋಯಾನ್ (24) ಮತ್ತು ನಾಲ್ವರು ಅಪ್ರಾಪ್ತರನ್ನು ಪೊಲೀಸರು ಬಂಧಿಸಿದ್ದಾರೆ. ಬಂಧಿತರಲ್ಲಿ ಒಂದು ಕಡೆ ಮೂವರು ಹಾಗೂ ಮತ್ತೊಂದು ಕಡೆಯಲ್ಲಿ ಎಂಟು ಮಂದಿ ಪತ್ತೆಯಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಬಂಧಿತ ಬಾಂಗ್ಲಾ ಪ್ರಜೆಗಳನ್ನು ಅವರ ಸ್ವದೇಶಕ್ಕೆ ಗಡಿಪಾರು ಮಾಡಲು ಅಗತ್ಯವಿರುವ ಆದೇಶ ಕೋರಿ ವಿದೇಶಿ ಯರ ಪ್ರಾದೇಶಿಕ ನೋಂದಣಿ ಕಚೇರಿಗೆ ಶೀಘ್ರದಲ್ಲೇ ವರದಿ ಸಲ್ಲಿಸಲಾಗುವುದು. ಸದ್ಯ ಬಂಧಿತರ ಬಳಿ ಇರುವ ದಾಖಲೆಗಳ ಸಂಗ್ರಹಣೆ ಹಾಗೂ ಪರಿಶೀಲನಾ ಪ್ರಕ್ರಿಯೆ ನಡೆಯುತ್ತಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಕೆಲವು ದಿನಗಳ ಹಿಂದೆ ಸುರತ್ಕಲ್‌ನಲ್ಲಿ ಅಕ್ರಮವಾಗಿ ನೆಲೆಸಿದ್ದ 8 ಮಂದಿಯನ್ನು ಪೊಲೀಸರು ಬಂಧಿಸಿದ್ದು, ಇದರೊಂದಿಗೆ ಒಟ್ಟು 19 ಮಂದಿ ಬಾಂಗ್ಲಾ ಪ್ರಜೆಗಳನ್ನು ಪೊಲೀಸರು ಬಂಧಿಸಿದ್ದಾರೆ.ಮಧ್ಯವರ್ತಿ ವಿರುದ್ಧ ಪ್ರಕರಣ ದಾಖಲಿಸಲು ಸಿದ್ಧತೆ: ಭಾರತದ ಇತರ ರಾಜ್ಯಗಳ ಕಾರ್ಮಿಕರ ಜೊತೆಯಲ್ಲಿ ಈ ಬಾಂಗ್ಲಾ ಪ್ರಜೆಗಳನ್ನು ಮಂಗಳೂರಿಗೆ ಕರೆತಂದು ಕೆಲಸಕ್ಕೆ ಸೇರಿಸಿದ್ದ ಪಶ್ಚಿಮ ಬಂಗಾಳ ಮೂಲದ ಮಧ್ಯವರ್ತಿಯ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗುವುದು ಎಂದು ಪೊಲೀಸ್ ಮೂಲಗಳು ತಿಳಿಸಿವೆ.