ಪಡುಬಿದ್ರೆ: ಬೈಕ್ ಢಿಕ್ಕಿ ಹೊಡೆದ ಪರಿಣಾಮ ರಸ್ತೆ ದಾಟುತ್ತಿದ್ದ ವ್ಯಕ್ತಿಯೊಬ್ಬರು ಮೃತಪಟ್ಟ ಘಟನೆ ಮಂಗಳವಾರ ರಾತ್ರಿ 8.15ರ ಸುಮಾರಿಗೆ ಉಚ್ಚಿಲ ಮಸೀದಿ ಸಮೀಪದ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ನಡೆದಿದೆ.

ಮೃತರನ್ನು ಕಿನ್ನಿಗೋಳಿಯ ರೋನಾಲ್ಡ್ ಡಿಸೋಜ(67) ಎಂದು ಗುರುತಿಸಲಾಗಿದೆ. ಉಚ್ಚಿಲದಿಂದ ಕಾಪು ಕಡೆ ಹೋಗುತ್ತಿದ್ದ ಬೈಕ್ ರಸ್ತೆ ದಾಟುತ್ತಿದ್ದ ರೋನಾಲ್ಡ್ ಡಿಸೋಜ ಅವರಿಗೆ ಢಿಕ್ಕಿ ಹೊಡೆಯಿತ್ತೆನ್ನಲಾಗಿದೆ. ಇದರಿಂದ ರಸ್ತೆಗೆ ಬಿದ್ದು ಗಂಭೀರವಾಗಿ ಗಾಯಗೊಂಡ ಇವರು, ಉಡುಪಿ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟರು ಎಂದು ತಿಳಿದು ಬಂದಿದೆ.

ಗಾಯಾಳನ್ನು ಎಸ್‌ಡಿಪಿಐ ಅಂಬುಲೆನ್ಸ್‌ನಲ್ಲಿ ಸಾಮಾಜಿಕ ಕಾರ್ಯಕರ್ತ ಜಲಾಲುದ್ದೀನ್ ಉಚ್ಚಿಲ ಹಾಗೂ ಹನೀಫ್ ಆಸ್ಪತ್ರೆಗೆ ದಾಖಲಿಸಿದ್ದರು. ಈ ಬಗ್ಗೆ ಪಡುಬಿದ್ರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.