ಮಂಗಳೂರು : ಬೀಡಿಯ ಮೇಲೆ ವಿಧಿಸಲಾದ ಜಿಎಸ್ಟಿಯನ್ನು ಶೇ 28ರಿಂದ ಶೇ 5ಕ್ಕೆ ಇಳಿಸುವಂತೆ ಬಿಎಂಎಸ್ ಸಂಯೋಜಿತ ಬೀಡಿ ಮಜೂರ್ ಸಂಘ(ರಿ) ಮತ್ತು ಎಚ್ಎಂಎಸ್ ಸಂಯೋಜಿತ ಕರ್ನಾಟಕ ಕರಾವಳಿ ಬೀಡಿ ವರ್ಕಸ್ ಯೂನಿಯನ್ ಸರಕಾರವನ್ನು ಆಗ್ರಹಿಸಿದೆ.
ನಗರದಲ್ಲಿ ಮಂಗಳವಾರ ಜಂಟಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಬೀಡಿ ಮದ್ದೂರ್ ಸಂಘದ ಕೆ ವಿಶ್ವನಾಥ ಶೆಟ್ಟಿ ಮತ್ತು ಕರ್ನಾಟಕ ಕರಾವಳಿ ಬೀಡಿ ವರ್ಕಸ್್ರ ಯೂನಿಯನ್ ಅಧ್ಯಕ್ಷ ಮಹಮ್ಮದ್ ರಫಿ ಅವರು ಕರ್ನಾಟಕದಲ್ಲಿ ಜಿಎಸ್ಟಿ ಹೆಚ್ಚಳದಿಂದ ಬೀಡಿ ಕಾರ್ಮಿಕರು ಇನ್ನಷ್ಟು ಸಮಸ್ಯೆ ಎದುರಿಸಬೇಕಾದಿತು ಎಂದು ಆತಂಕ ವ್ಯಕ್ತಪಡಿಸಿದರು.
ತಂಬಾಕು ಉತ್ಪನ್ನಗಳ ಜಿಎಸ್ಟಿ ದರವನ್ನು ಶೇ 35ಕ್ಕೆ ಹೆಚ್ಚಿಸುವ ಪ್ರಸ್ತಾಪದಿಂದ ಬೀಡಿಯನ್ನು ಹೊರಗಿಡಬೇಕು ಮತ್ತು ಬೀಡಿ ಮೇಲಿನ ಜಿಎಸ್ಟಿಯನ್ನು ಶೇ 5ಕ್ಕೆ ಇಳಿಸಬೇಕು ಎಂದು ಒತ್ತಾಯಿಸಿದರು. ಬೀಡಿ ಕೈಗಾರಿಕೆ ಎಂಬುದು ಸುಮಾರು 120 ವರ್ಷಗಳ ಇತಿಹಾಸವುಳ್ಳ ಗುಡಿ ಕೈಗಾರಿಕೆಯಾಗಿದೆ.
ದೇಶಾದ್ಯಂತ ಈ ಕೈಗಾರಿಕೆಯಲ್ಲಿ ಇಂದು ಸುಮಾರು 3 ಕೋಟಿಗಿಂತಲೂ ಹೆಚ್ಚು ಕಾರ್ಮಿಕ ವರ್ಗ ದುಡಿಯುತ್ತಿದ್ದಾರೆ. ಕರ್ನಾಟಕ ರಾಜ್ಯದಲ್ಲಿ ಇಂದು ಸರಿಸುಮಾರು 25 ಲಕ್ಷ ಕಾರ್ಮಿಕರು ಕೆಲಸ ನಿರ್ವಹಿಸುತ್ತಿದ್ದು, ಈ ಕೈಗಾರಿಕೆಯಿಂದ ದುಡಿಯುವ ವರ್ಗದ ಮಕ್ಕಳು ಸಮಾಜದಲ್ಲಿ ಉತ್ತಮ ಸ್ಥಾನದಲ್ಲಿದ್ದು ವೈದ್ಯರು, ಇಂಜಿನಿಯರ್, ವಕೀಲರು, ಪ್ರಾಧ್ಯಾಪಕರು ಆಗಿ ರೂಪುಗೊಂಡಿದ್ದಾರೆ ಎಂದು ಕೆ. ವಿಶ್ವನಾಥ ಶೆಟ್ಟಿ ಅಭಿಪ್ರಾಯಪಟ್ಟರು.

