ಬಂಟ್ವಾಳ : ಕಡಬ ತಾಲೂಕು ಕೌಕ್ರಾಡಿ ಗ್ರಾಮ ಆಡಳಿತ ಅಧಿಕಾರಿ ಸಿದ್ದಲಿಂಗ ಜಂಗಮಶೆಟ್ಟಿ ಎಂಬುವವರು ಸರಕಾರಿ ಜಮೀನು ಅತಿಕ್ರಮಣ ಸ್ಥಳ ಭೇಟಿ ನೀಡಿದ ಸಂದರ್ಭದಲ್ಲಿ ಅತಿಕ್ರಮಣದಾರರಾದ ಮುತ್ತು ಸ್ವಾಮಿ ಮತ್ತು ಇತರರು ಸೇರಿ ಹಲ್ಲೆ ನಡೆಸಿರುವುದನ್ನು ಬಂಟ್ವಾಳ ಗ್ರಾಮ ಆಡಳಿತ ಅಧಿಕಾರಿಗಳ ಸಂಘದ ವತಿಯಿಂದ ಖಂಡನೆ ವ್ಯಕ್ತ ಪಡಿಸಲಾಯಿತು.

ಶೀಘ್ರ ಆರೋಪಿಗಳ ಬಂಧನಕ್ಕೆ ಆಗ್ರಹ : ತಪ್ಪಿತಸ್ಥರನ್ನು ಶೀಘ್ರ ಬಂಧಿಸಿ, ಕಠಿಣ ಶಿಕ್ಷೆಗೆ ಗುರಿಪಡಿಸುವ ಬಗ್ಗೆ ಸಂಬಂಧಪಟ್ಟ ಇಲಾಖೆಗೆ ಸೂಕ್ತ ನಿರ್ದೇಶನ ನೀಡುವ ಕುರಿತು ಮಾನ್ಯ ತಹಶೀಲ್ದಾರ್ ಬಂಟ್ವಾಳ ತಾಲೂಕು ಇವರ ಮೂಲಕ ಜಿಲ್ಲಾಧಿಕಾರಿಯವರಿಗೆ ಮನವಿ ಸಲ್ಲಿಸಲಾಯಿತು.

ತಪ್ಪಿತಸ್ಥರನ್ನು 24 ಗಂಟೆಯ ಒಳಗೆ ಬಂಧಿಸದೇ ಇದ್ದಲ್ಲಿ ಸೋಮವಾರದಿಂದ ಲೇಖನಿ‌ ಸ್ಥಗಿತ ಹೋರಾಟ ನಡೆಸುವುದಾಗಿ ಸರ್ಕಾರಿ ನೌಕರರು ತಿಳಿಸಿದ್ದಾರೆ. ಮನವಿ ಸಲ್ಲಿಸುವ ಸಂದರ್ಭದಲ್ಲಿ ಗ್ರಾಮ ಆಡಳಿತ ಅಧಿಕಾರಿಗಳ ಸಂಘದ ಅಧ್ಯಕ್ಷರಾದ ಅನಿಲ್ ಕೆ ಪೂಜಾರಿ, ಗೌರವಾಧ್ಯಕ್ಷರಾದ ಪ್ರವೀಣ್ ಕುಮಾರ್, ಉಪಾಧ್ಯಕ್ಷರಾದ ಕರಿಬಸಪ್ಪ ನಾಯಕ್, ಕಾರ್ಯದರ್ಶಿ ಪ್ರಶಾಂತ್, ಜಿಲ್ಲಾ ಪ್ರತಿನಿಧಿ ಮತ್ತಿಹಳ್ಳಿ‌ಪ್ರಕಾಶ್, ಖಜಾಂಚಿ ವೈಶಾಲಿ ಎ,

ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘದ ಉಪಾಧ್ಯಕ್ಷರಾದ ಸೀತಾರಾಮ ಪೂಜಾರಿ, ಗೌರವ ಸಲಹೆಗಾರರಾದ ನವೀನ್ ಬೆಂಜನಪದವು, ರಾಜ್ಯ ಪರಿಷತ್ ಸದಸ್ಯರಾದ ಜೆ ಜನಾರ್ಧನ್,ಕಂದಾಯ ನೌಕರರ ಸಂಘದ ಗೌರವಾಧ್ಯಕ್ಷರಾದ ರಾಜೇಶ್ ನಾಯ್ಕ್, ಉಪತಹಶೀಲ್ದಾರರು, ಕಂದಾಯ ನಿರೀಕ್ಷಕರು, ಗ್ರಾಮ ಆಡಳಿತ ಅಧಿಕಾರಿಗಳು ಉಪಸ್ಥಿತರಿದ್ದರು.