ದಕ್ಷಿಣ ಕನ್ನಡ : ಕಳೆದ ಹತ್ತಾರು ದಿನಗಳಿಂದ ರಾಜ್ಯದ ಬೇರೆ ಬೇರೆ ಜಿಲ್ಲೆಗಳಿಂದ ಪಾದಯಾತ್ರೆ ತಂಡಗಳು ಧರ್ಮಸ್ಥಳಕ್ಕೆ ಹೊರಟಿವೆ. ಪಾದಯಾತ್ರೆ ತಂಡಗಳ ವ್ಯವಸ್ಥಾಪಕರು ಅಡುಗೆ ಇನ್ನಿತರ ವ್ಯವಸ್ಥೆಗಳ ಬಗ್ಗೆ ಈಗಾಗಲೇ ಚಾರ್ಮಾಡಿ, ಮುಂಡಾಜೆ ತಲುಪಿ ಅಗತ್ಯ ಕ್ರಮಗಳನ್ನು ಕೈಗೊಂಡಿದ್ದಾರೆ.

ಪಾದಯಾತ್ರಿಗಳು ಸಾಗಿ ಬರುವ ರಸ್ತೆಯುದ್ದಕ್ಕೂ ಅಲ್ಲಲ್ಲಿ ಕಸದ ಬುಟ್ಟಿ, ಗೋಣಿ ಚೀಲಗಳನ್ನು ಇರಿಸಿ ಕಸ ಹಾಕಲು ವ್ಯವಸ್ಥೆ ಮಾಡಲಾಗಿದೆ. ಚಾರ್ಮಾಡಿ ಘಾಟಿ ಸೇರಿದಂತೆ ಚಾರ್ಮಾಡಿ, ಮುಂಡಾಜೆ, ಕಲ್ಮಂಜದಲ್ಲಿ ಭಕ್ತರಿಂದ ಪಾದಯಾತ್ರಿಗಳಿಗೆ ಅನ್ನದಾಸೋಹದ ವ್ಯವಸ್ಥೆಗೆ ಅನುಕೂಲ ಕಲ್ಪಿಸಲಾಗಿದೆ. ಚಾರ್ಮಾಡಿ ಮತ್ತೂರು ಶ್ರೀ ಪಂಚಲಿಂಗೇಶ್ವರ ದೇವಸ್ಥಾನ ಮುಂಡಾಜೆಯ ಶ್ರೀ ಸನ್ಯಾಸಿಕಟ್ಟೆ ಪರಶುರಾಮ ದೇವಸ್ಥಾನ ಸೇರಿದಂತೆ ಅಲ್ಲಲ್ಲಿ ಪಾದಯಾತ್ರೆ ತಂಡಗಳಿಗೆ ಅಡುಗೆ ತಯಾರಿ, ವಿಶ್ರಾಂತಿ ಪಡೆಯಲು ಬೇಕಾದ ವ್ಯವಸ್ಥೆ ಕಲ್ಪಿಸಲಾಗಿದೆ.

ಅರಣ್ಯ ಇಲಾಖೆ ಘಾಟಿ ಪರಿಸರದ ರಸ್ತೆ ಬದಿ ಬೆಂಕಿ ಅನಾಹುತಗಳು ಉಂಟಾಗದಂತೆ ಬೆಂಕಿ ರೇಖೆ ರಚಿಸಿದೆ. ಅಲ್ಲಲ್ಲಿ ಸಿಬ್ಬಂದಿಯನ್ನು ನಿಯೋಜಿಸಿ ಪಾದಯಾತ್ರಿಗಳ ಅಗತ್ಯ ಸೇವೆಗೆ ತಂಡಗಳು ಸಿದ್ಧಗೊಂಡಿವೆ. ಪಾದಯಾತ್ರಿಗಳು ಕೈಗೊಳ್ಳಬೇಕಾದ ಮುನ್ನೆಚ್ಚರಿಕೆ ಕ್ರಮಗಳ ಕುರಿತು ಸೂಚನಾ ಫಲಕವನ್ನು ಅಳವಡಿಸಲಾಗಿದೆ.

ಕೆಲವು ತಂಡಗಳ ಪಾದಯಾತ್ರಿಗಳು ಚಾರ್ಮಾಡಿ, ಮುಂಡಾಜೆ ತಲುಪಿದ್ದರೆ ಇನ್ನು ಕೆಲವು ತಂಡಗಳು ಧರ್ಮಸ್ಥಳ ತಲುಪಿವೆ. ಇಂದಿನಿಂದ ಹೆಚ್ಚಿನ ಸಂಖ್ಯೆಯ ಪಾದಯಾತ್ರಿಗಳು ಆಗಮಿಸಲಿದ್ದಾರೆ. ಭಾನುವಾರ ಶಿವರಾತ್ರಿ ಆಚರಣೆ ಇರುವುದರಿಂದ ಅಂದು ಶ್ರೀ ಕ್ಷೇತ್ರದಲ್ಲಿ ಹೆಚ್ಚಿನ ಭಕ್ತರು ಪಾಲ್ಗೊಳ್ಳಲಿದ್ದಾರೆ.ಪಾದಯಾತ್ರೆ ತಂಡಗಳು ವಿಶ್ರಾಂತಿ ವೇಳೆ ಅಲ್ಲಲ್ಲಿ ಕುಳಿತು ಭಜನೆ, ಶಿವ ಪಂಚಾಕ್ಷರಿ ಮಂತ್ರ ಜಪಿಸುವುದು ಕಂಡುಬರುತ್ತದೆ. ಸ್ಥಳೀಯ ದೇಗುಲಗಳಿಗೆ ಆಗಮಿಸುವ ಪಾದಯಾತ್ರಿಗಳು ಅಲ್ಲು ಭಜನೆಯಲ್ಲಿ ತೊಡಗಿರುತ್ತಾರೆ.

*ಉಜಿರೆ ಎಸ್‌ಡಿಎಂ ಆಸ್ಪತ್ರೆ ವತಿಯಿಂದ ಚಾರ್ಮಾಡಿ, ಮುಂಡಾಜೆ, ಉಜಿರೆ, ಧರ್ಮಸ್ಥಳ, ಬೂಡುಜಾಲು ಪ್ರದೇಶಗಳು ಸೇರಿದಂತೆ ಅಲ್ಲಲ್ಲಿಪಾದಯಾತ್ರಿಗಳ ಅನುಕೂಲಕ್ಕಾಗಿ ಉಚಿತ ಆರೋಗ್ಯ ಸೇವೆಯ ಕೌಂಟರ್‌ಗಳನ್ನು ತೆರೆದು ಅಗತ್ಯ ಸಿಬ್ಬಂದಿ ನೇಮಿಸಲಾಗಿದೆ. ತುರ್ತು ಸಂದರ್ಭಕ್ಕೆ ಆಂಬ್ಯುಲೆನ್ಸ್‌ಗಳನ್ನು ಸನ್ನದ್ಧ ಸ್ಥಿತಿಯಲ್ಲಿಇರಿಸಲಾಗಿದೆ.
ರಸ್ತೆಯುದ್ದಕ್ಕೂ ಅಲ್ಲಲ್ಲಿ ಕಸ ಹಾಕಲು ಗೋಣಿ ಚೀಲಗಳನ್ನು ಸ್ಥಳೀಯರು ಸಂಘ-ಸಂಸ್ಥೆಯವರು ವ್ಯವಸ್ಥೆ ಮಾಡಿದ್ದಾರೆ. ಚಾರ್ಮಾಡಿ ಘಾಟಿಯಿಂದ ಮುಂಡಾಜೆ, ಉಜಿರೆ ಹಾಗೂ ಕಲ್ಮಂಜ ಮೂಲಕ ಧರ್ಮಸ್ಥಳಕ್ಕೆ ತೆರಳುವ ರಸ್ತೆ ಬದಿ ಹಲವಾರು ಅಂಗಡಿಗಳು ತಲೆ ಎತ್ತಿವೆ.

ಕೊಟ್ಟಿಗೆಹಾರ ಮೂಲಕ ಧರ್ಮಸ್ಥಳಕ್ಕೆ ಆಗಮಿಸುವ ಪಾದಯಾತ್ರಿಗಳಿಗೆ ಚಾರ್ಮಾಡಿ ಘಾಟಿಯಲ್ಲಿ ಕಳೆದ ಆರು ವರ್ಷಗಳಿಂದ ನಾಲ್ಕು ದಿನಗಳ ಕಾಲ ಅಹರ್ನಿಶಿ ಆಹಾರ ದಾಸೋಹ ನಡೆಸುತ್ತಿದ್ದೇವೆ. ಕಳೆದ ವರ್ಷ 15 ಸಾವಿರಕ್ಕಿಂತ ಅಧಿಕ ಮಂದಿಗೆ ಮೂರು ಹೊತ್ತು ಉಚಿತ ಆಹಾರ, ಕುಡಿಯುವ ನೀರು ನೀಡಲಾಗಿತ್ತು. ಈ ಬಾರಿ ಇದಕ್ಕಿಂತ ಹೆಚ್ಚಿನ ಪಾದಯಾತ್ರಿಗಳು ಆಗಮಿಸುವ ನಿರೀಕ್ಷೆಯಿದ್ದು ತಯಾರಿ ಮಾಡಿಕೊಳ್ಳಲಾಗಿದೆ.