ಬೆಳ್ತಂಗಡಿ: ಅಕ್ರಮ ಗಾಂಜಾ ದಾಸ್ತಾನು ಮತ್ತು ಮಾರಾಟ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಳ್ತಂಗಡಿ ಪೊಲೀಸರಿಂದ ತುಂಬಾ ಸಮಯದಿಂದ ತಲೆಮರಿಸಿಕೊಂಡಿದ್ದ ಆರೋಪಿಯನ್ನು ಕಾರ್ಕಳದಲ್ಲಿ ಬಂಧಿಸಿ, ಬೆಳ್ತಂಗಡಿ ನ್ಯಾಯಾಲಯಕ್ಕೆ ಹಾಜರು ಪಡಿಸಲಾಗಿದೆ. ನ್ಯಾಯಾಲಯವು ಆರೋಪಿಗೆ ನ್ಯಾಯಾಂಗ ಬಂಧನ ವಿಧಿಸಿ ಆದೇಶ ಹೊರಡಿಸಿದೆ.

ಬೆಳ್ತಂಗಡಿ ತಾಲೂಕಿನ ಕುವೆಟ್ಟು ಗ್ರಾಮದ ನಿವಾಸಿ ಮಹಮ್ಮದ್ ರಫೀಕ್ ಅಲಿಯಾಸ್ ಮದ್ದಡ್ಕ ರಫೀಕ್ (39) ಬಂಧಿತ ಆರೋಪಿ. ಬೆಳ್ತಂಗಡಿ ಪೊಲೀಸ್‌ ಠಾಣೆಯ ಇನ್ಸ್ ಪೆಕ್ಟರ್ ಸುಬ್ಬಾಪುರ್ ಮರ್ ನೇತೃತ್ವದ ಪೊಲೀಸರ ತಂಡ ಆರೋಪಿಯನ್ನು ಬಂಧಿಸುವ ಕಾರ್ಯಾಚರಣೆಯಲ್ಲಿ ಯಶಸ್ವಿಯಾಗಿದೆ.

ಆರೋಪಿಯ ವಿರುದ್ಧ ಈಗಾಗಲೇ ಬೆಳ್ತಂಗಡಿ ಪೊಲೀಸ್ ಠಾಣೆ, ವೇಣೂರು ಪೊಲೀಸ್ ಠಾಣೆ, ಚಿಕ್ಕಮಗಳೂರು ಸೆನ್ ಪೊಲೀಸ್ ಠಾಣೆ, ಬಣಕಲ್ ಪೊಲೀಸ್ ಠಾಣೆ, ದ.ಕ ಜಿಲ್ಲಾ ಸೆನ್ ಪೊಲೀಸ್ ಠಾಣೆ, ಹಾಗೂ ಬಂಟ್ವಾಳ ಅಬಕಾರಿ ಠಾಣೆ, ಬೆಳ್ತಂಗಡಿ ಅಬಕಾರಿ ಠಾಣೆಯಲ್ಲಿ ಗಾಂಜಾ ಪ್ರಕರಣಗಳು ದಾಖಲಾಗಿರುತ್ತದೆ.