ಶಿವಮೊಗ್ಗ: ಕರ್ನಾಟಕದಲ್ಲಿ ನಂದಿನಿ ಸಂಸ್ಥೆ ಸದೃಢವಾಗಿದೆ. ವಾರ್ಷಿಕವಾಗಿ ಸಾವಿರಾರು ಕೋಟಿ ರೂಪಾಯಿ ವ್ಯವಹಾರ ನಡೆಸುತ್ತಿದೆ. ಹಾಲು ಉತ್ಪಾದಕರು ಸೇರಿದಂತೆ ಮಾರಾಟಗಾರರು, ಗ್ರಾಹಕರು ಕೋಟಿಗೂ ಹೆಚ್ಚು ಜನ ಇದರ ಪ್ರಯೋಜನ ಪಡೆಯುತ್ತಿದ್ದಾರೆ. ಜೊತೆಗೆ ಸಂಸ್ಥೆ ಲಾಭದಲ್ಲಿಯೂ ಸಹ ಇದೆ. ಹೀಗಿರುವಾಗ ನಮ್ಮ ಹೆಮ್ಮೆಯ ನಂದಿನಿ ಸಂಸ್ಥೆಯನ್ನು ಅಮೂಲ್ ಜೊತೆ ವಿಲೀನಗೊಳಿಸುವುದು, ಅಮೂಲ್ ಕರ್ನಾಟಕದಲ್ಲಿ ಹಾಲು, ಮೊಸರು ಇತರೆ ಉತ್ಪನ್ನಗಳನ್ನ ಆನ್ಲೈನ್ನಲ್ಲಿ ಮಾರಾಟಕ್ಕೆ ಅವಕಾಶ ಮಾಡಿಕೊಡುವುದರಿಂದ ಮುಂದೊಂದು ದಿನ ನಂದಿನಿ ಸಂಸ್ಥೆ ನಷ್ಟದಲ್ಲಿದೆ ಎಂದು ಕಾರಣ ಕೊಟ್ಟು ಮುಚ್ಚುವ ಹುನ್ನಾರ ಅಡಗಿದೆ ಎಂದು ರೈತ ಸಂಘ ಆರೋಪಿಸಿದೆ.
ಕರ್ನಾಟಕದ ರೈತರು, ಕೃಷಿಕಾರ್ಮಿಕರು ಅತಿವೃಷ್ಟಿ-ಅನಾವೃಷ್ಟಿಯಿಂದ ವ್ಯವಸಾಯ ಉತ್ಪನ್ನಗಳ ಬೆಲೆ ಕುಸಿತದಿಂದ ನಷ್ಟವಾದ ಸಂಧರ್ಭದಲ್ಲಿ ಸಾಲ ಜಾಸ್ತಿಯಾಗಿ ರೈತ ಆತ್ಮಹತ್ಯೆ ಮಾಡಿಕೊಳ್ಳುವ ಸಂದರ್ಭ ಬಂದಾಗ ರೈತರು ಕೃಷಿ ಕಾರ್ಮಿಕರು ಹಾಲು ಉತ್ಪಾದನೆ ಮಾಡಿ ಡೇರಿಗೆ ಹಾಕಿ ಜೀವನ ನಡೆಸಲು ಭದ್ರತೆ ಒದಗಿಸಿದೆ.
ಕರ್ನಾಟಕದಲ್ಲಿ ಕನ್ನಡಿಗರ ಸ್ಟೇಟ್ ಬ್ಯಾಂಕ್ ಆಫ್ ಮೈಸೂರು, ವಿಜಯ ಬ್ಯಾಂಕ್, ಸಿಂಡಿಕೇಟ್ ಬ್ಯಾಂಕ್ಗಳನ್ನ ಹೊರ ರಾಜ್ಯದ ಬ್ಯಾಂಕುಗಳೊಂದಿಗೆ ವಿಲೀನ ಮಾಡಿ ಕನ್ನಡಿಗರಿಗೆ ಅವಮಾನ ಮಾಡಲಾಗಿದೆ. ಮತ್ತು ಮುಂದೆ ಖಾಸಗೀಕರಣ ಮಾಡುವ ಹುನ್ನಾರ ಕೂಡ ಅಡಗಿದೆ. ಭದ್ರಾವತಿಯ ಮೈಸೂರು ಪೇಪರ್ ಮಿಲ್ಸ್ ನ್ನು ಮುಚ್ಚಲಾಗಿದೆ. ವಿ.ಐ.ಎಸ್.ಎಲ್ (ವಿಶ್ವೇಶ್ವರಯ್ಯ ಉಕ್ಕು ಮತ್ತು ಕಬ್ಬಿಣ ಕಾರ್ಖಾನೆ) ಈಗಾಗಲೇ ಸ್ಟೀಲ್ ಅಥಾರಿಟಿ ಆಫ್ ಇಂಡಿಯಾಗೆ ವಹಿಸಲಾಗಿದೆ. ಉತ್ತರ ಇಂಡಿಯಾದಲ್ಲಿ ನಷ್ಟದಲ್ಲಿರುವ ಉಕ್ಕು ಕಾರ್ಖಾನೆಗಳನ್ನ ಪುನಶ್ಚತನಗೊಳಿಸಿದೆ. ಆದರೆ ಕರ್ನಾಟಕದ ವಿ.ಐ.ಎಸ್.ಎಲ್ ನ ಮುಚ್ಚಲು ಹೊರಟಿದೆ. ಹೀಗೆ ಕರ್ನಾಟಕದ ಅಸ್ಮಿತೆಯಾದ ನಂದಿನಿ ಸಂಸ್ಥೆಯನ್ನು ಗುಜರಾತ್ನ ಅಮೂಲ್ನೊಂದಿಗೆ ವಿಲೀನಗೊಳಿಸುವುದನ್ನ ಕೈಬಿಡಬೇಕು ಎಂದು ಸಂಘ ಆಗ್ರಹಿಸಿದೆ.
ಈ ಪ್ರಕ್ರಿಯೆಯನ್ನು ಕೈಬಿಡದೆ ಹೋದಲ್ಲಿ ರೈತರು, ಕೃಷಿ ಕೂಲಿಕಾರ್ಮಿಕರು, ಹಾಲು ಉತ್ಪಾದಕರು, ಕನ್ನಡಿಗರು, ಗ್ರಾಹಕರು ಸರ್ಕಾರದ ವಿರುದ್ಧ ಪ್ರತಿಭಟನೆಗಳನ್ನ ಮಾಡಬೇಕಾಗುತ್ತದೆ ಎಂದು ಸಂಘ ಎಚ್ಚರಿಸಿದೆ.