ಶಿವಮೊಗ್ಗ: ಕೆಲವು ಮುಸ್ಲಿಂ ಸಂಘಟನೆಗಳನ್ನು ನಿಷೇಧಿಸಬೇಕಿದೆ. ಬಾಲ ಬಿಚ್ಚುತ್ತಿರುವ ಮುಸ್ಲಿಂ ಗೂಂಡಾಗಳಿಗೆ ತಕ್ಕ ಪಾಠ ಕಲಿಸಬೇಕಾಗಿದೆ ಎಂದು ಮಾಜಿ ಉಪಮುಖ್ಯಮಂತ್ರಿ ಕೆ.ಎಸ್. ಈಶ್ವರಪ್ಪ ಹೇಳಿದರು.
ಇಂದು ಅವರು ಹಲ್ಲೆಗೊಳಗಾಗಿ ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಬಿಜೆಪಿ ಬೂತ್ ಕೇಂದ್ರದ ಕಾಂತರಾಜ್ ಅವರನ್ನು ಭೇಟಿ ಮಾಡಿ ಆರೋಗ್ಯ ವಿಚಾರಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದರು. ರಾಷ್ಟ್ರದ್ರೋಹಿಗಳು, ಮುಸ್ಲಿಂ ಗೂಂಡಾಗಳು 6 ತಿಂಗಳ ಹಿಂದೆ ಹರ್ಷ ಎಂಬ ಹಿಂದೂ ಯುವಕನ ಕೊಲೆ ಮಾಡಿದ್ದರು. ಆಗ ಮುಖ್ಯಮಂತ್ರಿಗಳು ಹಾಗೂ ಗೃಹಮಂತ್ರಿಗಳಿಗೆ ಮಾಹಿತಿ ನೀಡಿದ್ದೆವು. ಪ್ರಕರಣದ ತನಿಖೆ ನಡೆಯುತ್ತಿದ್ದು, ಆರೋಪಿಗಳಿಗೆ ಕಠಿಣ ಶಿಕ್ಷೆಯೂ ಆಗುತ್ತದೆ. ಈ ಮಧ್ಯೆಯೇ ಮತ್ತೊಂದು ಘಟನೆ ನಡೆದಿರುವುದು ಖಂಡನೀಯ ಎಂದರು.
ಈ ಬಾರಿ ಹಲ್ಲೆಗೊಳಗಾದವರು ರಾಜೀವ್ ಗಾಂಧಿ ಬಡಾವಣೆಯ ಬಿಜೆಪಿ ಬೂತ್ ಅಧ್ಯಕ್ಷ ಕಾಂತರಾಜ್. ಹರ್ಷನ ಕೊಲೆಯ ಸಂದರ್ಭದಲ್ಲಿ ಈ ಬಡಾವಣೆಯ ಮುಸಲ್ಮಾನ್ ಹಿರಿಯರು ವಾಗ್ದಾನ ಮಾಡಿ ಇಂತಹ ಘಟನೆಯಾಗದಂತೆ ಎಚ್ಚರಿಕೆ ವಹಿಸುವುದಾಗಿ ತಿಳಿಸಿದ್ದರು. ಆದರೆ, ಈಗ ಅದು ಸುಳ್ಳಾಗಿದೆ ಎಂದರು.
ಘಟನೆಗೆ ಸಂಬಂಧಿಸಿದಂತೆ ಈಗಾಗಲೇ ಮುಖ್ಯಮಂತ್ರಿಗಳಿಗೆ ಮತ್ತು ಗೃಹ ಸಚಿವರಿಗೆ ಮಾಹಿತಿ ನೀಡಲಾಗಿದೆ. ಕೆಲವು ಆರೋಪಿತರನ್ನು ಬಂಧಿಸಲಾಗಿದೆ. ಆದರೆ, ಇದರ ಹಿಂದಿರುವ ದೊಡ್ಡ ಶಕ್ತಿಗಳನ್ನು ಹುಡುಕಬೇಕಾಗಿದೆ. ಕೆಲವು ಮುಸ್ಲಿಂ ಸಂಘಟನೆಗಳನ್ನು ನಿಷೇಧಿಸಬೇಕಿದೆ ಎಂದರು.