ಶಿವಮೊಗ್ಗ: 1925 ರಲ್ಲಿ ಆರ್ ಎಸ್ಎಸ್ ಸ್ಥಾಪನೆಯಾಗಿಲ್ಲ ಎಂದಿದ್ದರೆ ದೇಶ ಯಾವ ಸ್ಥಿತಿಯಲ್ಲಿ ಇರುತ್ತಿತ್ತು? ಕೆಲವು ಮುಸಲ್ಮಾನರು ದಂಗೆ ಎಬ್ಬಿಸುವ ಕೆಲಸ ಮಾಡುತ್ತಿದ್ದರು. ಹಿಂದೂ ಸಮಾಜವನ್ನು ರಕ್ಷಣೆ ಮಾಡುವ ಉದ್ದೇಶದಿಂದ ದೇಶಕ್ಕೆ ಸ್ವಾತಂತ್ರ್ಯ ಬಂದಿದೆ. ಹೆಡ್ಗೇವಾರ್ ಆರ್ ಎಸ್ಎಸ್ ಸ್ಥಾಪನೆ ಮಾಡದಿದ್ದರೇ ಹಿಂದೂಗಳು ಬಲಹೀನ ಸ್ಥಿತಿಯಲ್ಲಿ ಇರಬೇಕಿತ್ತು ಎಂದು ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ಹೇಳಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪಠ್ಯಪುಸ್ತಕ ವಿಚಾರವಾಗಿ ವಿಪಕ್ಷಗಳು ಅನಗತ್ಯ ಗೊಂದಲ ಸೃಷ್ಟಿಸುವ ಕೆಲಸ ಮಾಡುತ್ತಿದ್ದಾರೆ. ಪಠ್ಯಪುಸ್ತಕದಲ್ಲಿ ಭಗತ್ ಸಿಂಗ್, ನಾರಾಯಣ ಗುರು ಹೆಸರು ತೆಗೆದರು ಎಂದು ಹೇಳಿದರು ಆದರೆ ಇವರು ನೋಡಿದ್ದಾರಾ? ಸುಮ್ ಸುಮ್ನೆ ಗೊಂದಲ ಹುಟ್ಟುಹಾಕುತ್ತಾರೆ ಎಂದರು.
ಡಿ.ಕೆ.ಶಿವಕುಮಾರ್, ಸಿದ್ದರಾಮಯ್ಯ ಸುಳ್ಳು ಹೇಳುವುದಕ್ಕೆ ಅರ್ಥವೇ ಇಲ್ಲ. ಯಾವ ಕಾರಣಕ್ಕೂ ಕೂಡ ನಾರಾಯಣ ಗುರು ಮತ್ತು ಹಾಗೆಯೇ ಭಗತ್ ಸಿಂಗ್ ಹೆಸರು ಕೂಡ ತೆಗೆಯಲ್ಲ. ಡಾ. ಹೆಡ್ಗೇವಾರ್ ಅವರ ರಾಷ್ಟ್ರಭಕ್ತಿ ವಿಚಾರವನ್ನು ಕೂಡ ಪಠ್ಯದಲ್ಲಿ ಹಾಕುತ್ತಿದ್ದೇವೆ. ಹೆಡ್ಗೇವಾರ್ ಅವರ ರಾಷ್ಟ್ರಭಕ್ತಿಯ ವಿಚಾರ ಸೇರಿಸಿದರೆ ಕಾಂಗ್ರೆಸ್ ನವರಿಗೆ ಹೊಟ್ಟೆಯುರಿ ಯಾಕೆ? ಅವರಿಗೆ ಏನು ತೊಂದರೆ? ಇವರ ತರ ವ್ಯಕ್ತಿ ಪೂಜೆ ಮಾಡ್ಕೊಂಡು ಇರಬೇಕಾ ಎಂದು ಪ್ರಶ್ನಿಸಿದರು.
ಆರ್ ಎಸ್ಎಸ್ ನಿಷೇಧ ಮಾಡಲು ಇವರ ಪೂರ್ವಜರಾದ ಇಂದಿರಾ ಗಾಂಧಿ ಹೊರಟ್ಟಿದ್ದರು. ಅವರ ಕೈಯಲ್ಲಿಯೇ ಅಗಿಲಿಲ್ಲ, ಇನ್ನೂ ಇವರ ಕೈಯಲ್ಲಿ ಆಗುತ್ತದೆಯೇ? ಸರ್ಕಾರದ ಪ್ರತಿಯೊಬ್ಬರು ಪರವಾಗಿ ಕೆಲಸ ಮಾಡುತ್ತಿದೆ ಎಂದು ಈಶ್ವರಪ್ಪ ಹೇಳಿದರು.
ಸಿಎಂ ಬದಲಾವಣೆ ವಿಚಾರದ ಬಗ್ಗೆ ಮಾತನಾಡಿದ ಅವರು, ಈ ಬಗ್ಗೆ ಬಹಳ ದಿನದಿಂದ ಹೇಳುತ್ತಿದ್ದಾರೆ. ಹಿರಿಯ ಮಂತ್ರಿಗಳನ್ನು ಬಿಡುತ್ತಾರೆ, ಹಳಬರನ್ನು ಬಿಟ್ಟು, ಹೊಸಬರನ್ನು ತಗೋತ್ತಾರೆ. ಇವತ್ತು, ನಾಳೆ, ನಾಡಿದ್ದು, ಯುಗಾದಿ ಸಂಕ್ರಾಂತಿ, ದಸರಾ ಎಲ್ಲವೂ ಅಗಿದೆ. ಯಾವ ಮಂತ್ರಿಯೂ ಬದಲಾವಣೆ ಅಗಿಲ್ಲ. ಇವೆಲ್ಲಾ ಸೃಷ್ಟಿ ಅಷ್ಟೇ. ಮುಖ್ಯಮಂತ್ರಿ ಬದಲಾವಣೆ ಅನ್ನೋದು ಸಣ್ಣ ವಿಚಾರ ಅಲ್ಲ. ರಾಜ್ಯದಲ್ಲಿ ಬಿಜೆಪಿ ಸರ್ಕಾರ ಬಂದಮೇಲೆ ಸಾಕಷ್ಟು ಅಭಿವೃದ್ಧಿ ಅಗಿದೆ. ರಾಜ್ಯದ ಜನ ಮೆಚ್ಚುತ್ತಿದ್ದಾರೆ. ಕಾಂಗ್ರೆಸ್ ನವರು ಇಲ್ಲದೇ ಇರುವ ಗೊಂದಲ ಸೃಷ್ಟಿ ಮಾಡುತ್ತಾರೆ ಎಂದರು.
ಪಿಎಸ್ಐ ನೇಮಕಾತಿ ಅಕ್ರಮ ವಿಚಾರವಾಗಿ ಮಾತನಾಡಿ, ಕಾಂಗ್ರೆಸ್ ಸರ್ಕಾರ ಇದ್ದಿದ್ದರೆಈ ವಿಚಾರ ಹೊರಗೆ ಬರುತ್ತಿರಲಿಲ್ಲ. ಅವರು ಮುಚ್ಚಿ ಹಾಕುತ್ತಿದ್ದರು. ಅದಕ್ಕೆ ಅವರಿಗೆ ತಡೆದುಕೊಳ್ಳಲು ಆಗುತ್ತಿಲ್ಲ. ಇವತ್ತು ಯಾವ ಇಲಾಖೆಯ ಅಭಿವೃದ್ಧಿ ಕಾರ್ಯಗಳು ಸಹ ನಿಂತಿಲ್ಲ. ಜನರು ಸಹ ಸರ್ಕಾರದ ಕಾರ್ಯದ ಬಗ್ಗೆ ಸಂತೋಷದಿಂದ ಮಾತನಾಡುತ್ತಿದ್ದಾರೆ ಎಂದು ಈಶ್ವರಪ್ಪ ಹೇಳಿದರು.