ಶಿವಮೊಗ್ಗ: ಅಗ್ನಿ ದುರಂತದಲ್ಲಿ ಸಾವನ್ನಪ್ಪಿದ ಶರತ್ ಭೂಪಾಳಂ ಫೊಟೊ ಹಿಡಿದು ಜಸ್ಟಿಸ್ ಫಾರ್ ಶರತ್ ಎಂಬ ಪ್ಲಕಾರ್ಡ್ ಹಿಡಿದು ಅವರ ಕುಟುಂಬ ಮತ್ತು ಸಂಘ ಸಂಸ್ಥೆಗಳು ಪ್ರತಿಭಟನಾ ಮೆರವಣಿಗೆ ನಡೆಸಿದ್ದಾರೆ.
ಜ.8ರಂದು ಬೆಂಕಿ ಅವಘಡದಲ್ಲಿ ಮೃತಪಟ್ಟ ಯುವ ಉದ್ಯಮಿ ಶರತ್ ಭೂಪಾಳಂ ಸಾವಿಗೆ ಅಗ್ನಿಶಾಮಕ ದಳದ ವೈಫಲ್ಯ ಕಾರಣವಾಗಿದ್ದು, ಈ ಬಗ್ಗೆ ಜಿಲ್ಲಾಧಿಕಾರಿಗಳು ಸೂಕ್ತ ಕ್ರಮ ತೆಗೆದುಕೊಳ್ಳಬೇಕೆಂದು ಆಗ್ರಹಿಸಿ ಭೂಪಾಳಂ ಕುಟುಂಬದವರು ಸೇರಿದಂತೆ ವಿವಿಧ ಸಂಘ-ಸಂಸ್ಥೆಗಳು, ಸಾರ್ವಜನಿಕರು ಕುವೆಂಪು ರಸ್ತೆಯಿಂದ ನಗರದ ಪ್ರಮುಖ ರಸ್ತೆಗಳಲ್ಲಿ ಪ್ರತಿಭಟನಾ ಮೆರವಣಿಗೆ ನಡೆಸಿದ್ದಾರೆ.
ಅಗ್ನಿಶಾಮಕದಳದ ಬೆಂಕಿ ಅವಘಡಗಳಿಗೆ ಸನ್ನದ್ಧವಾಗಿರಲಿಲ್ಲ. ಬೇಕಾದ ಉಪಕರಣಗಳು ಅಗ್ನಿಶಾಮಕದಳದ ಬಳಿ ಇಲ್ಲವೆಂದು ಆರೋಪಿಸಿ ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು. ನಂತರ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು.
ಮೃತ ಶರತ್ ತಂದೆ ಶಶಿಧರ್ ಭೂಪಾಳಂ ಮಾತನಾಡಿ, ಮನೆಯಲ್ಲಿ ಬೆಂಕಿ ಕಾಣಿಸಿಕೊಂಡ ತಕ್ಷಣ ಫೈರ್ ಎಂಜಿನ್ ಗೆ ಕರೆ ಮಾಡಲಾಗಿತ್ತು. ಆದರೆ ಬಂದ ವಾಹನದಲ್ಲಿ ಬೆಂಕಿ ನಂದಿಸಲು ಯಾವುದೇ ಸೂಕ್ತ ಉಪಕರಣಗಳಿರಲಿಲ್ಲ.
ಎರಡನೇ ವಾಹನದಲ್ಲಿ ಉದ್ದವಾದ ನೀರಿನ ಪೈಪ್ ಇರಲಿಲ್ಲ. ಅಗ್ನಿಶಾಮಕದಳದ ಸಿಬ್ಬಂದಿ ಬಳಿ ಫೈರ್ ರೆಸಿಸ್ಟೆಂಟ್ ಜಾಕೆಟ್ ಗಳಿರಲಿಲ್ಲ. ಎಂದು ಆರೋಪಿಸಿದರು. ನಮ್ಮ ಕುಟುಂಬಕ್ಕೆ ಆದ ಅನ್ಯಾಯ ಮತ್ಯಾರಿಗೂ ಆಗಬಾರದು ಎಂಬ ಉದ್ದೇಶದಿಂದ ಈ ದಿನ ಪ್ರತಿಭಟನೆ ಹಮ್ಮಿಕೊಂಡಿದ್ದು, ಜಿಲ್ಲಾಡಳಿತ ಈ ಬಗ್ಗೆ ಕ್ರಮ ತೆಗೆದುಕೊಳ್ಳಬೇಕೆಂದು ಒತ್ತಾಯಿಸಿದರು.