ಶಿವಮೊಗ್ಗ: ಚುನಾವಣೆಗೆ ಸ್ಪರ್ಧೆ ಮಾಡಿಯೇ ಮಾಡ್ತೀನಿ. ಸ್ಪರ್ಧೆಯಿಂದ ಹಿಂದೆ ಸರಿಯುವ ಮಾತೇ ಇಲ್ಲ ಎಂದು ಮಾಜಿ ಡಿಸಿಎಂ ಈಶ್ವರಪ್ಪ ಸ್ಪಷ್ಟಪಡಿಸಿದ್ದಾರೆ.
ಅವರು ಇಂದು ಶಿವಮೊಗ್ಗದಲ್ಲಿ ಮಾತನಾಡಿ, ಮೊನ್ನೆ ಶಿವಮೊಗ್ಗದ ಕಾರ್ಯಕರ್ತರು ಹಿತೈಷಿಗಳು ಸಭೆ ಮಾಡಿ ಅಭಿಪ್ರಾಯ ಹೇಳಿದ್ದಾರೆ. ಅಷ್ಟು ಜನ ಸೇರುತ್ತಾರೆ ಅಂತಾ ನಾನು ಅಂದುಕೊಂಡಿರಲಿಲ್ಲ. ನಾನು ಈಗಾಗಲೇ ಘೋಷಣೆ ಮಾಡಿದ್ದೇನೆ. ಚುನಾವಣೆಗೆ ಸ್ಪರ್ಧೆ ಮಾಡಿಯೇ ಮಾಡ್ತೇನೆ.
ನಾನು ಚುನಾವಣೆಗೆ ಏಕೆ ಸ್ಪರ್ಧೆ ಮಾಡ್ತಿದ್ದೇನೆ ಎಂಬುದನ್ನು ಅವರ ಗಮನಕ್ಕೆ ತಂದೆ. ರಾಜ್ಯದ ಬಿಜೆಪಿಯ ಹಲವು ನಾಯಕರಿಗೆ ಮೋಸ ಮಾಡಿದ್ದಾರೆ. ಹಿಂದುತ್ವದ ಪರವಾಗಿ ಕೆಲಸ ಮಾಡಿದವರಿಗೆ ಮೋಸ ಮಾಡಿದ್ದಾರೆ. ಯಡಿಯೂರಪ್ಪ ಕುಟುಂಬದ ಕೈಯಲ್ಲಿ ಪಕ್ಷ ಇದ್ದು ಒದ್ದಾಡುತ್ತಿದೆ. ಯಡಿಯೂರಪ್ಪ, ವಿಜಯೇಂದ್ರ ತಾಯಿಯಂತಿರುವ ಪಕ್ಷದ ಕುತ್ತಿಗೆ ಹಿಸುಕುತ್ತಿದ್ದಾರೆ. ಆ ಪಕ್ಷ ರಕ್ಷಣೆಗೆ ನಾನು ಸ್ಪರ್ಧೆ ಮಾಡ್ತಿದ್ದೇನೆ. ಯಡಿಯೂರಪ್ಪ ಹಾಗೂ ಕುಟುಂಬದಿಂದ ಪಕ್ಷ ರಕ್ಷಣೆ ಆಗಬೇಕು. ಇದಕ್ಕಾಗಿ ನನ್ನ ಸ್ಪರ್ಧೆ. ಸ್ಪರ್ಧೆಯಿಂದ ಹಿಂದೆ ಸರಿಯುವ ಮಾತಿಲ್ಲ ಎಂದು ತಿಳಿಸಿದ್ದಾರೆ.
ಚುನಾವಣಾ ರಾಜಕಾರಣದಿಂದ ಹಿಂದೆ ಸರಿಯಬೇಡಿ ಅಂತಾ ರಾಜ್ಯದಿಂದ ಹಲವರು ಪೋನ್ ಮಾಡ್ತಿದ್ದಾರೆ. ಅವರೆಲ್ಲರ ಒತ್ತಾಯಕ್ಕಾಗಿ ಸ್ಪರ್ಧೆ ಮಾಡ್ತಿದ್ದೇನೆ. ಯಾರು ಮನವೊಲಿಸಿದರೂ ಸ್ಪರ್ಧೆಯಿಂದ ಹಿಂದೆ ಸರಿಯುವುದಿಲ್ಲ ಎಂದು ಹೇಳಿದ್ದಾರೆ.