ಶಿವಮೊಗ್ಗ: ಶಾಲೆಗಳಿಗೆ ಶೂ-ಸಾಕ್ಸ್ ವಿತರಣೆ ಜವಾಬ್ದಾರಿ ಆಯಾ ಶಾಲಾಭಿವೃದ್ಧಿ ಸಮಿತಿಗಳಿಗೆ ವಹಿಸಲಾಗಿದೆ. ಶೀಘ್ರ ಆ ಪ್ರಕ್ರಿಯೆ ಆರಂಭವಾಗಲಿದೆ ಎಂದು ಪ್ರಾಥಮಿಕ ಹಾಗೂ ಪ್ರೌಢಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಹೇಳಿದರು.
ಸಾಗರದಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ನವರಿಂದ ಭಿಕ್ಷೆ ಎತ್ತಿಸಿ ಶಾಲಾ ಮಕ್ಕಳಿಗೆ ಶೂ-ಸಾಕ್ಸ್ ವಿತರಿಸುವ ಪರಿಸ್ಥಿತಿ ಸರ್ಕಾರಕ್ಕೆ ಬಂದಿಲ್ಲ. ಅದೆಲ್ಲ ಕಾಂಗ್ರೆಸ್ನವರ ನಾಟಕ ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.
ಪಠ್ಯ ಪುಸ್ತಕ ಪರಿಷ್ಕರಣೆ ವಿಚಾರ ಈಗ ಮುಗಿದ ಅಧ್ಯಾಯ ಎಂದು ಹೇಳಿದ ಅವರು, ರಾಜ್ಯದ ಇತಿಹಾಸದಲ್ಲಿಯೇ ಜುಲೈ 15 ರೊಳಗೆ ಪಠ್ಯಪುಸ್ತಕ ವಿತರಿಸಿದ ಶ್ರೇಯ ನಮ್ಮ ಸರ್ಕಾರಕ್ಕೆ ಸಲ್ಲಬೇಕು. ಪ್ರತೀ ಬಾರಿ ಪಠ್ಯಪುಸ್ತಕ ವಿತರಣೆ ಕಾರ್ಯ ಅಕ್ಟೋಬರ್ ವರೆಗೂ ನಡೆಯುತ್ತಿತ್ತು ಎಂದರು. ‘ಶಾಲೆಗಳು ಆರಂಭವಾಗುವ ಮುನ್ನವೇ ಪಠ್ಯಪುಸ್ತಕ ವಿತರಿಸಲು ಈ ಬಾರಿ ಯೋಜಿಸಿದ್ದೆವು. ರಷ್ಯಾ- ಉಕ್ರೇನ್ ಯುದ್ಧದಿಂದಾಗಿ ಮುದ್ರಣ ಕಾಗದದ ಕೊರತೆಯುಂಟಾಗಿ ಪುಸ್ತಕ ವಿತರಣೆ ಸ್ವಲ್ಪ ತಡವಾಯಿತು’ ಎಂದರು.
ರಾಜ್ಯದ ಸರ್ಕಾರಿ ಶಾಲೆಗಳಲ್ಲಿ ಶಿಕ್ಷಕರ ಕೊರತೆ ಇಲ್ಲ. 35 ಸಾವಿರ ಅತಿಥಿ ಶಿಕ್ಷಕರ ನೇಮಕ ಮಾಡಿಕೊಂಡಿದ್ದೇವೆ. ಶೀಘ್ರ ಕಾಯಂ ಶಿಕ್ಷಕರ ನೇಮಕಾತಿ ಪೂರ್ಣಗೊಳಿಸಲಾಗುವುದು ಎಂದು ತಿಳಿಸಿದರು.